ಲೋಕಸಭಾ ಚುನಾವಣೆ: ತುಮಕೂರು ಕ್ಷೇತ್ರದಿಂದ ಹೆಚ್ಡಿಕೆ ಕಣಕ್ಕೆ? ವಿ. ಸೋಮಣ್ಣಗೆ ಶಾಕ್?
ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್ಪಿ ಮುದ್ದಹನುಮೇಗೌಡ ಸ್ಪರ್ಧಿಸುವುದು ಖಚಿತವಾದ ಮೇಲೆ ಎದುರಾಳಿಗಳ ರಾಜಕೀಯ ಲೆಕ್ಕಾಚಾರಗಳೇ ಉಲ್ಟಾ ಆಗುವಂತಿದೆ. ಮೂಲಗಳ ಪ್ರಕಾರ ಎಸ್ಪಿ ಮುದ್ದಹನುಮೇಗೌಡ ಎದುರಾಳಿಯಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಮಣಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಅಳಿಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆಯುತ್ತಿದೆ ಎನ್ನುವ ಸುದ್ದಿ ಇದೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಸಚಿವ ವಿ ಸೋಮಣ್ಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದ್ದರೂ, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವವು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿಲ್ಲ ಎಂದು ಸಮೀಕ್ಷೆಗಳು ಕಾಂಗ್ರೆಸ್ಗೆ ಒಲವು ತೋರಿವೆ ಎಂದು ಮೂಲಗಳು ತಿಳಿಸಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಒಕ್ಕಲಿಗರ ಮತ ಸೆಳೆಯುವ ತಂತ್ರ?
ತುಮಕೂರು ಲೋಕಸಭಾ ಕ್ಷೇತ್ರದಿಂದ ಹೆಚ್ಡಿಕೆ ಅವರನ್ನು ಕಣಕ್ಕಿಳಿಸಲು ಜಾತಿ ಲೆಕ್ಕಾಚಾರ ಕೂಡ ಕಾರಣ ಎನ್ನಲಾಗಿದೆ. ಎಸ್ಪಿ ಮುದ್ದಹನುಮೇಗೌಡ ಒಕ್ಕಲಿಗರಾಗಿದ್ದು ಅವರಿಗೆ ಒಕ್ಕಲಿಗರ ಮತಗಳು ಸುಲಭವಾಗಿ ಸಿಗುತ್ತವೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ.
ಕಾಂಗ್ರೆಸ್ ಯೋಜನೆ ವಿಫಲಗೊಳಿಸಲು ಜೆಡಿಎಸ್ ಬಿಜೆಪಿ ಹೆಚ್ಡಿಕೆ ಅವರನ್ನು ಕಣಕ್ಕಿಳಿಸಿ, ಒಕ್ಕಲಿಗರ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿದೆ. ಬಿಜೆಪಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಕಾರಣ ಲಿಂಗಾಯತರ ಮತಗಳು, ಹೆಚ್ಡಿಕೆಗೆ ಬೀಳಲಿವೆ ಎನ್ನುವ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ.
ಸೋಮಣ್ಣ ಅವರನ್ನು ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಮೈತ್ರಿಕೂಟದೊಳಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಬಿಜೆಪಿ ನಾಯಕರು ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ತೆಗೆದುಕೊಳ್ಳುವಂತೆ ಕೇಳಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಲಿಂಗಾಯತ ಸಮುದಾಯದ ಸೋಮಣ್ಣ ಅವರು ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದರೆ ಹೆಚ್ಚಿನ ಒಕ್ಕಲಿಗ ಮತಗಳನ್ನು ಪಡೆಯುವ ಸಾಧ್ಯತೆ ಕಡಿಮೆ ಮತ್ತು ಒಕ್ಕಲಿಗರ ಆಪ್ತ ಪಕ್ಷವಾದ ಜೆಡಿಎಸ್ನಿಂದ ಸ್ಪರ್ಧಿಸಲು ಕೂಡ ಸೋಮಣ್ಣ ಅವರನ್ನು ಕೇಳುವ ಮತ್ತೊಂದು ಸಾಧ್ಯತೆ ಇದೆ. ಆದರೂ ಸೋಮಣ್ಣ ಅವರಿಗೆ ಒಕ್ಕಲಿಗರ ಮತ ಬೀಳುವುದು ಕಷ್ಟ ಎನ್ನಲಾಗಿದೆ.
ಇದೇ ಕಾರಣಕ್ಕೆ ಮೈತ್ರಿ ಕೂಟದ ನಾಯಕರು ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಜೆಡಿಎಸ್ ಎರಡೂ ಮತಗಳನ್ನು ಪಡೆಯುವ ಕಾರಣದಿಂದ ಈ ಸ್ಥಾನದಿಂದ ಸ್ಪರ್ಧಿಸಲು ನೋಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಕುಮಾರಸ್ವಾಮಿ ತುಮಕೂರಿನಿಂದ ಸ್ಪರ್ಧಿಸುವುದರಿಂದ ಪಕ್ಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗೆ ನೆರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದ್ದು ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.












Click it and Unblock the Notifications