ಪರಿಷತ್ ಫೈಟ್; ಪ್ರಚಾರ ಅಂತ್ಯ, ಪೇಮೆಂಟ್ ಬಗ್ಗೆ ಚರ್ಚೆ!
ಬೆಂಗಳೂರು, ಡಿಸೆಂಬರ್ 08; ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈಗ ಪೇಮೆಂಟ್ ಬಗ್ಗೆ ಚರ್ಚೆ ನಡೆಯುತ್ತಿದೆ.
ವಿಧಾನ ಪರಿಷತ್ ಚುನಾವಣೆ ಡಿಸೆಂಬರ್ 10ರಂದು ನಡೆಯಲಿದೆ. ಬಂಹಿರಂಗ ಪ್ರಚಾರವು ಮತದಾನದ 48 ಗಂಟೆಗಳ ಕಾಲ ಮುಂಚಿತವಾಗಿ ಅಂದರೆ ಡಿಸೆಂಬರ್ 8ರ ಸಾಯಂಕಾಲ 6 ಗಂಟೆಗೆ ಮುಕ್ತಾಯವಾಗಲಿದೆ. ಡಿ. 10ರ ಮಧ್ಯರಾತ್ರಿ 12 ಗಂಟೆಯವರೆಗೆ 5 ಜನಕ್ಕಿಂತ ಹೆಚ್ಚಾಗಿ ಅನಧಿಕೃತವಾಗಿ ಜನ ಗುಂಪು ಸೇರುವುದು ಮತ್ತು ಬಹಿರಂಗ ಚುನಾವಣೆ ಸಭೆಗಳನ್ನು ನಿಷೇಧಿಸಲಾಗಿದೆ.
ಮತದಾನ ನಡೆಯುವ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದ ಮತದಾನ ಕೇಂದ್ರಗಳ ಸುತ್ತಲು 200 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಎರಡು ದಿನಗಳ ಕಾಲ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ.
ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4 ಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 16ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.
ಪೇಮೆಂಟ್ ಬಗ್ಗೆ ಚರ್ಚೆ; ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವವರು ಗ್ರಾಮ ಪಂಚಾಯಿತಿ ಸದಸ್ಯರು, ನಗರಸಭೆ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು. ಚುನಾವಣೆ ಹಿನ್ನಲೆಯಲ್ಲಿ ಅವರಿಗೆ ಭಾರೀ ಬೇಡಿಕೆ ಬಂದಿದೆ. ಮತಗಳನ್ನು ಸೆಳೆಯಲು ಹಣದ ಆಮಿಷ ಸಹ ವೊಡ್ಡಲಾಗುತ್ತಿದೆ.
ಮೈಸೂರು, ಮಂಡ್ಯ, ಹಾಸನ, ಮಡಿಕೇರಿ ಸ್ಥಳೀಯ ಸಂಸ್ಥೆಗಳಲ್ಲಿ ಮತದಾರರನ್ನು ಸೆಳೆಯಲು ಅಂತಿಮ ಹಂತದ ಕಸರತ್ತು ನಡೆಸಲಾಗುತ್ತಿದೆ. ಮತಕ್ಕೆ ಭಾರೀ ಬೇಡಿಕೆ ಇದ್ದು ಅಭ್ಯರ್ಥಿಗಳು ಮತವೊಂದಕ್ಕೆ 50 ಸಾವಿರದ ತನಕ ಹಣ ನೀಡುತ್ತಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಹಣದ ಜೊತೆಗೆ ಬೆಳ್ಳಿ ನಾಣ್ಯ ಸೇರಿದಂತೆ ವಿವಿಧ ಕೊಡುಗೆಗಳನ್ನು ಸಹ ಕೊಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಹಣ ಹಂಚುವ ಬಗ್ಗೆ ಜೆಡಿಎಸ್ ಶಾಸಕ ಕೆ. ಎಂ. ಶಿವಲಿಂಗೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಕಳೆದ ಬಾರಿಯ ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಏಕೆ ಸೋಲಾಯಿತು? ಎಂಬ ಬಗ್ಗೆ ಹೇಳಿರುವ ಶಾಸಕರು, ಕಾಂಗ್ರೆಸ್ನವರು ಹಣ, ಕುಕ್ಕರ್ ಹಂಚಿದ್ದರು. ನಾವು 10 ಸಾವಿರ ಮಾತ್ರ ಕೊಟ್ಟಿದ್ದೆವು ಎಂದುದ ಹೇಳಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಿಗೆ ತಲಾ 1 ಲಕ್ಷ ರೂ. ನಗದು ಹಾಗೂ ಬೆಳ್ಳಿ ನಾಣ್ಯ ನೀಡುವ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಆಣೆ-ಪ್ರಮಾಣ ರಾಜಕೀಯ; ಚುನಾವಣೆಯಲ್ಲಿ ಮತದಾನ ಮಾಡಲು ಹಣ ನೀಡುವ ಜೊತೆಗೆ ದೇವರ ಫೋಟೋ ಮೇಲೆ ಪ್ರಮಾಣ ಮಾಡಿಸಲಾಗುತ್ತಿದೆ. ದೇವರ ಮೇಲಿನ ಭಯದಿಂದ ತಮಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡುವಂತೆ ಆಣೆ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ.
ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಚಿತ್ರವಿರುವ ಬೆಳ್ಳಿ ನಾಣ್ಯವನ್ನು ನೀಡಿ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ. ಮಂಡ್ಯದಲ್ಲಿ ತಲಾ 1 ಲಕ್ಷ, ಕೊಡಗು ಜಿಲ್ಲೆಯಲ್ಲಿ 50 ಸಾವಿರದ ತನಕ ಹಣವನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ.
Recommended Video
ಮಂಡ್ಯ, ಮೈಸೂರು-ಚಾಮರಾಜನಗರ, ಹಾಸನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಇದೆ. ಜೆಡಿಎಸ್ 5 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಮಾಡುವ ಜವಾಬ್ದಾರಿ ನೀಡಲಾಗಿದೆ.