ಚುನಾವಣೆಗೂ ಮುನ್ನವೇ ಪ್ರಬಲ ನಾಯಕರಿಂದ ಸಚಿವ ಸ್ಥಾನದ ಬೇಡಿಕೆ: ಬೊಮ್ಮಾಯಿ ಮುಂದಿದೆ ಸವಾಲು
ಬೆಂಗಳೂರು, ಡಿಸೆಂಬರ್ 22: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಭಾರತದ ಪ್ರತಿಷ್ಠಿತ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಆಡಳಿತ ಹಿಡಿಯುವುದಕ್ಕೆ ರಾಜಕೀಯ ಪಕ್ಷಗಳು ಶತಾಯುಗತಾಯ ಯತ್ನ ನಡೆಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗಿನಿಂದಲೇ ಚುನಾವಣೆಗೆ ಸಿದ್ದತೆ ನಡೆಸಿವೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಳ ಸಂಘರ್ಷಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ.
ಕಾಂಗ್ರೆಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಇದೆ. ಇದೇ ರೀತಿ, ಬಿಜೆಪಿಯೂ ಒಳಜಗಳನ್ನು ಎದುರಿಸಬೇಕಾಗಿ ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಮುಂದೆ ಹಲವು ಸವಾಲುಗಳಿವೆ. ಇವುಗಳನ್ನು ಬೊಮ್ಮಾಯಿ ಹೇಗೆ ಎದುರಿಸಲಿದ್ದಾರೆ ಎಂಬುದೀಗ ಪ್ರಶ್ನೆಯಾಗಿ ಉಳಿದಿದೆ.
ಈಶ್ವರಪ್ಪ, ಜಾರಕಿಹೊಳಿಯಿಂದ ಸಚಿವ ಸ್ಥಾನಕ್ಕೆ ಬೇಡಿಕೆ
ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭೆ ಕಲಾಪ ನಡೆಯುತ್ತಿದೆ. ಇದೇ ವೇಳೆ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಹಾಜರಾಗದೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ವಿಡಿಯೊ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಇಬ್ಬರು ಶಾಸಕರ ಬೇಡಿಕೆಯಿಂದ ಬೊಮ್ಮಾಯಿ ಅವರಿಗೆ ಸಂಕಷ್ಟ ಎದುರಾಗಿದೆ.
ಈಶ್ವರಪ್ಪ, ಜಾರಕಿಹೊಳಿ ಪರ ನಿಲ್ಲಲಿದೆಯೇ ಹೈಕಮಾಂಡ್
ಸಚಿವ ಸ್ಥಾನದ ಬೇಡಿಕೆ ಇಟ್ಟಿರುವ ಈಶ್ವರಪ್ಪ ಹಾಗೂ ಜಾರಕಿಹೊಳಿ ಪರ ಹೈಕಮಾಂಡ್ ನಿಲ್ಲಲಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ಅಂಗಳದಲ್ಲಿ ಓಡಾಡುತ್ತಿವೆ. ಈ ಇಬ್ಬರು ಶಾಸಕರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇವರಿಗೆ ಈಗ ಸಚಿವ ಸ್ಥಾನ ನೀಡಿದರೆ, ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂಬ ಅಳುಕು ಹೈಕಮಾಂಡ್ಗೆ ಬರಬಹುದು. ಚುನಾವಣೆಗೂ ಮುನ್ನ ಬಂದೊದಗಿರುವ ಸಂಕಷ್ಟವನ್ನು ಬೊಮ್ಮಾಯಿ ಅವರು ಪರಿಹರಿಸಬೇಕಿದೆ. ಇದನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈಗಾಗಲೇ, ಈಶ್ವರಪ್ಪ ಹಾಗೂ ಜಾರಕಿಹೊಳಿ ಅವರಿಗೆ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ, ಈ ಇಬ್ಬರೂ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೇ ಆದಲ್ಲಿ ವಿರೋಧ ಪಕ್ಷಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತಾಗುತ್ತದೆ.
ವಿಪಕ್ಷಗಳಿಗೆ ಪ್ರಚಾರದ ಸರಕು
ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿಗೆ ಈ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕರೆ, ವಿಪಕ್ಷಗಳಿಗೆ ಇದು ಪ್ರಚಾರದ ಸರಕಾಗಲಿದೆ ಎಂಬುದಂತೂ ಸತ್ಯ. ಈಗಾಗಲೇ 40 ಪರ್ಸೆಂಟ್ ಸರ್ಕಾರವೆಂಬ ಹಣೆಪಟ್ಟಿಯನ್ನು ಬೊಮ್ಮಾಯಿ ಆಡಳಿತ ಕಟ್ಟಿಕೊಂಡಾಗಿದೆ. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ಈಶ್ವರಪ್ಪನವರಿಗೆ ಸಚಿವ ಸ್ಥಾನ ಸಿಕ್ಕರೆ, ಇದು ಬಿಜೆಪಿಗೆ ಮುಜುಗರ ಮಾಡುವುದಂತೂ ಸತ್ಯ. ಈ ವಿಚಾರವನ್ನೇ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವುದಂತೂ ಶತಸಿದ್ಧ.