ಪಿಎಸ್ಐ ಹಗರಣದ ರೂವಾರಿ ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್ ವಜಾ
ಬೆಂಗಳೂರು,ಆ.2. ಕರ್ನಾಟಕ ನರ್ಸಿಂಗ್ ಕೌನ್ಸಿಲ್ಗೆ ಡಾ.ರಾಮಕೃಷ್ಣ ರೆಡ್ಡಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮ ಪ್ರಕರಣದ ರೂವಾರಿ, ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ದಿವ್ಯಾ 2020ರ ಸೆಪ್ಟೆಂಬರ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್ ಅರಾಧೆ ಅವರಿದ್ದ ವಿಭಾಗೀಯಪೀಠ ಮಂಗಳವಾರ ವಿಚಾರಣೆ ನಂತರ ವಜಾಗೊಳಿಸಿದೆ.
ಅರ್ಜಿ ವಿಚಾರಣೆಗೆ ಬಂದಾಗ ದಿವ್ಯಾ ಹಾಗರಗಿ ಪರ ವಕೀಲರು, ಆಕೆ ಪಿಎಸ್ಐ ನೇಮಕ ಅಕ್ರಮ ಪ್ರಕರಣ ಸಂಬಂಧ 2022ರ ಏಪ್ರಿಲ್ ತಿಂಗಳಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ವಿಭಾಗೀಯ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.

ಅರ್ಜಿದಾರರ ವಿವರ ಕೇಳಿದ್ದ ಹೈಕೋರ್ಟ್:
ಜುಲೈ 18ರಂದು ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರೆ ದಿವ್ಯಾ ಜೈಲಿನಲ್ಲಿರುವ ವಿಚಾರವನ್ನು ಆಕೆಯ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ಯಾವ ಕಾರಣಕ್ಕಾಗಿ ದಿವ್ಯಾ ಹಾಗರಗಿ ಜೈಲಿನಲ್ಲಿದ್ದಾರೆ? ಯಾವ ಸಾರ್ವಜನಿಕ ಹೋರಾಟ ನಡೆಸಿ ಜೈಲಿಗೆ ಹೋಗಿದ್ದಾರೆ? ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿತ್ತು.
ಒನ್ ರುಪಿ ಚಾರಿಟಿ ಟ್ರಸ್ಟ್:
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಸ್ಥಳೀಯ 16 ಸಾವಿರ ಮಕ್ಕಳಿಗೆ ಗುಂಪು ಆರೋಗ್ಯ ವಿಮೆ ಮಾಡಿಸಿದ್ದು ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಅಲ್ಲ, ಬದಲಿಗೆ ಅದರ ರೂವಾರಿ ಒನ್ ರುಪಿ ಚಾರಿಟಿ ಟ್ರಸ್ಟ್ ಎಂದು ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದ ಶಾಸಕ ಗೌರಿಶಂಕರ್ ಪರ ವಕೀಲರು ಹೈಕೋರ್ಟ್ಗೆ ಸ್ಪಷ್ಟಪಡಿಸಿದ್ದಾರೆ.
ಡಿ.ಸಿ. ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಬೇಕೆಂದು ಕೋರಿ ಪರಾಜಿತ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಪ್ರತಿವಾದಿ ಪರ ವಾದಿಸಿದ ಹಿರಿಯ ವಕೀಲರು, ತುಮಕೂರು ತಾಲ್ಲೂಕಿನ ಹಳ್ಳಿಗಳ ಆರರಿಂದ ಹದಿನಾರು ವರ್ಷದ ಒಳಗಿನ ಸುಮಾರು 16386ರ ವಿದ್ಯಾರ್ಥಿಗಳಿಗೆ ಒನ್ ರುಪಿ ಚಾರಿಟಬಲ್ ಟ್ರಸ್ಟ್ ಆರೋಗ್ಯ ವಿಮೆ ವಿತರಿಸಿದೆ. ದಿ ನ್ಯೂ ಇನ್ಶೂರೆನ್ಸ್ ಇಂಡಿಯಾ ಕಂಪನಿಯು ಈ ಗುಂಪು ಆರೋಗ್ಯ ವಿಮೆ ಮಾಡಿಸಿದ್ದು, ಒಟ್ಟು ಪ್ರೀಮಿಯಂ ಮೊತ್ತ 6.57 ಲಕ್ಷ ಪಾವತಿ ಮಾಡಿದೆ ಎಂದರು.
ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಟ್ರಸ್ಟ್ ಮತ್ತು ಒನ್ ರುಪಿ ಚಾರಿಟಿ ಟ್ರಸ್ಟ್ ಪ್ರತ್ಯೇಕವಾದವುಗಳು. ಅಷ್ಟಕ್ಕೂ ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಟ್ರಸ್ಟ್ ಅಡಿಯಲ್ಲೇ ವಿಮೆ ಮಾಡಿಸಲಾಗಿದೆ ಎಂದರೂ, ಗೌರಿಶಂಕರ್ 2007ರಲ್ಲೇ ತಮ್ಮ ಕುಟುಂಬದಿಂದ ಕಾನೂನುಬದ್ಧವಾಗಿ ಪ್ರತ್ಯೇಕಗೊಂಡಿರುವ ಕಾರಣ ಅವರು ಕಮ್ಮಗೊಂಡನಹಳ್ಳಿ ಸೇವಾ ಟ್ರಸ್ಟ್ ಪದಾಧಿಕಾರಿ ಎಂದು ಪರಿಗಣಿಸಬೇಕಿಲ್ಲ. ಅರ್ಜಿದಾರರು ಆರೋಪಿಸಿರುವಂತೆ ಹೆಲ್ತ್ ಇನ್ಶೂರೆನ್ಸ್ ಬಾಂಡ್ಗಳನ್ನು ನೀಡಿರುವುದಿಲ್ಲ ಮತ್ತು ಇನ್ಶೂರೆನ್ಸ್ ಕಂಪನಿಯಲ್ಲಿ ಸಾಫ್ಟ್ವೇರ್ ಅಪ್ಡೇಟ್ ಆಗದೆ, ತಾಂತ್ರಿಕ ದೋಷಗಳ ಕಾರಣ ಉಂಟಾಗಿದ್ದರಿಂದ ಇ-ಕಾರ್ಡ್ಗಳನ್ನು ವಿತರಣೆ ಮಾಡಿಲ್ಲ' ಎಂದು ವಿವರಿಸಿದರು.












Click it and Unblock the Notifications