ನೇಮಕಾತಿ ಆದೇಶವಿಲ್ಲ. ಆದರೂ ದುಡಿಯುವುದು ತಪ್ಪಿಲ್ಲ
ಹುಬ್ಬಳ್ಳಿ, ಅಕ್ಟೋಬರ್, 21 : ಸರ್ಕಾರಿ ನೌಕರಿ ಸಿಗಲೆಂದು ಹಲವರು ದೇವರ ಮೊರೆ ಹೋಗುತ್ತಾರೆ, ಇನ್ನಷ್ಟು ಜನರು ಹಗಲು ರಾತ್ರಿ ಓದಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಿ ಸರ್ಕಾರಿ ನೌಕರಿ ಮಾಡುತ್ತಿದ್ದರೂ ಅವರಿಗೆ ನೇಮಕಾತಿ ಆದೇಶ ಪತ್ರವಿಲ್ಲ !
ಹೌದು, ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆ ಎರಡು ವರ್ಷಗಳ ಹಿಂದೆ 2,800 ಜನರನ್ನು ಚಾಲಕ ಹಾಗೂ ಕಂಡಕ್ಟರ್ ಹುದ್ದೆಗೆ ಆಯ್ಕೆ ಮಾಡಿತ್ತು. ಈಗ ಎಲ್ಲರೂ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಂಬಳವನ್ನೂ ಪಡೆಯುತ್ತಿದ್ದಾರೆ. ಆದರೆ, ಆಯ್ಕೆಗೊಂಡವರಲ್ಲಿ 1,200 ಜನರಿಗೆ ಇದುವರೆಗೂ ನೇಮಕಾತಿ ಆದೇಶ ಪತ್ರ ನೀಡಿಲ್ಲ.
ನೇಮಕಾತಿ ಪತ್ರ ನೀಡುವಂತೆ ಅಭ್ಯರ್ಥಿಗಳು ಮಂಗಳವಾರ ಸಂಸ್ಥೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಬಗ್ಗೆ ಸಂಸ್ಥೆಯ ಅಧ್ಕಕ್ಷ ಎಂ.ಬಿ.ಸೌದಾಗರ ಮತ್ತು ವ್ಯವಸ್ಥಾಪಕ ನಿರ್ದೇಶಕಿ ವಿನೂತ ಪ್ರಿಯಾ ಅವರು ಶೀಘ್ರ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಆದೇಶ ಪತ್ರ ನೀಡುವುದಾಗಿ ನೌಕರರಿಗೆ ಭರವಸೆ ನೀಡಿದ್ದಾರೆ.[ದಸರಾಗಾಗಿ ಕೆಎಸ್ಆರ್ ಟಿಸಿಯಿಂದ 1,500 ವಿಶೇಷ ಬಸ್ ]
"ನಾವೆಲ್ಲರೂ ಇಲಾಖೆಯ ನಿಯಮದಂತೆ ಆಯ್ಕೆ ಪರೀಕ್ಷೆ ಬರೆದು ಪಾಸಾಗಿದ್ದೇವೆ ಜೊತೆಗೆ ಸಂದರ್ಶನದಲ್ಲೂ ಆಯ್ಕೆಯಾಗಿ ನೌಕರಿ ಮಾಡುತ್ತಿದ್ದೇವೆ. ಆದರೆ ನಮಗೆ ಕೇವಲ ತಾತ್ಕಾಲಿಕ ನೇಮಕಾತಿ ಪತ್ರ ನೀಡಿದ್ದಾರೆ. ಕಾಯಂ ನೇಮಕಾತಿ ಆದೇಶ ಪತ್ರ ನೀಡುತ್ತಿಲ್ಲ. ಇದರಿಂದ ನಮ್ಮ ನೌಕರಿಗೆಲ್ಲಿ ಮುಂದಿನ ದಿನಗಳಲ್ಲಿ ಸಂಚಕಾರ ಬರುತ್ತದೆಯೋ ಎಂಬ ಭಯ ನಮ್ಮನ್ನು ಆವರಿಸಿದೆ" ಎಂದು ಅಭ್ಯರ್ಥಿಗಳು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.[ಕೆಎಸ್ಆರ್ ಟಿಸಿಯ ಬಯೋ ಬಸ್ ಉಪಯೋಗಗಳು]
ಈ ಬಗ್ಗೆ ಹಿಂದಿನ ತಿಂಗಳು ನಾವೆಲ್ಲರೂ ಪ್ರತಿಭಟನೆ ನಡೆಸಿದ್ದೆವು. ಆ ಸಮಯದಲ್ಲಿ ಮುಂದಿನ ತಿಂಗಳಲ್ಲೇ ನೇಮಕಾತಿ ಪತ್ರ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಆ ಬಗ್ಗೆ ಯಾವ ಅಧಿಕಾರಿಗಳು ಚಕಾರವೆತ್ತುತ್ತಿಲ್ಲ ಎಂದು ಅಭ್ಯರ್ಥಿಗಳು ದೂರುತ್ತಾರೆ.
ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ನವೆಂಬರ್ 30 ರೊಳಗಾಗಿ ಎಲ್ಲರಿಗೂ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಹೇಳಿರುವುದು ನೌಕರರಲ್ಲಿ ಭರವಸೆಯ ಆಶಾಕಿರಣ ಮೂಡಿ ದಸರಾ ಹಬ್ಬದ ಸಂಭ್ರಮ ಅವರ ಮುಖದಲ್ಲಿ ಮೂಡಿರುವುದು ಮಾತ್ರ ಸತ್ಯ