ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪಿಎಸ್ಐ ಅರ್ಜುನ್ ಕೈಗೆ ಕೋಳ!
ಚಿಕ್ಕಮಗಳೂರು/ಬೆಂಗಳೂರು, ಮೇ. 24: ದಲಿತ ಯುವಕನಿಗೆ ಮೂತ್ರ ಕುಡಿಸಿ ಅಮಾನವೀಯನಾಗಿ ನಡೆದುಕೊಂಡ ಆರೋಪ ಎದುರಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಸಬ್ ಇನ್ಸಪೆಕ್ಟರ್ ಅರ್ಜುನ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕಿರಗುಂದ ಗ್ರಾಮದ ಮಹಿಳೆಯೊಬ್ಬಳು ಕಾಣೆಯಾಗಿರುವ ಪ್ರಕರಣ ಸಂಬಂಧ ದಲಿತ ಯುವಕ ಪುನೀತ್ ನನ್ನು ವಿಚಾರಣೆ ನೆಪದಲ್ಲಿ ಪಿಎಸ್ಐ ಅರ್ಜುನ್ ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದ. ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ ನೀಡಿದ್ದ. ಪುನೀತ್ ಎಂಬ ದಲಿತ ಯುವಕ ನೀರು ಕೇಳಿದಾಗ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ್ದ. ವಿಚಾರಣೆ ಬಳಿಕ ಪಿಎಸ್ಐ ನಡೆದುಕೊಂಡ ಅಮಾನವೀಯ ಕೃತ್ಯದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಪಿಎಸ್ಐ ಅರ್ಜುನ್ ಮತ್ತಷ್ಟು ವಿಕೃತ ಕೃತ್ಯಗಳು ಬಯಲಿಗೆ ಬಂದಿದ್ದವು. ಕಳ್ಳತನ ಆರೋಪದಡಿ ವಶಕ್ಕೆ ಪಡೆದಿದ್ದ ಯುವಕನ ಗುದದ್ವಾರದಲ್ಲಿ ಬೀರು ಬಾಟಲಿ ತುರುಕಿ ಚಿತ್ರಹಿಂಸೆ ನೀಡಿದ್ದ ಆರೋಪ ಕೇಳಿ ಬಂದಿತ್ತು.
ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿತ್ತು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶಿಸಿತ್ತು. ಪ್ರಕರಣದ ಸಮತ್ರ ತನಿಖೆ ನಡೆಸಿದ ವೇಳೆ ವಿವಿಧ ಪ್ರಕರಣಗಳಲ್ಲಿ ಶಂಕಿತರನ್ನು ವಿಚಾರಣೆ ನೆಪದಲ್ಲಿ ಕರೆಸಿ ವಿಕೃತವಾಗಿ ನಡೆದುಕೊಂಡಿರುವ ಅರ್ಜುನ್ ವಿಕೃತ ಘಟನೆಗಳ ವಿವರ ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಅರ್ಜುನ್ ನನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶಿಸಿತ್ತು. ಘಟನೆ ಸಂಬಂಧ ಸಿಐಡಿ ಪೊಲೀಸರು ಬಂಧಿಸುವ ಸುಳಿವು ಪಡೆದ ಅರ್ಜುನ್ ಕೆಲ ದಿನಗಳ ಹಿಂದಷ್ಟೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜುನ್ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕಿರಿಸಿತ್ತು. ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಾಮೀನು ಕೋರಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದ. ಹೈಕೋರ್ಟ್ ಏಕ ಸದಸ್ಯ ಪೀಠ ಕೂಡ ಜಾಮೀನು ನೀಡಲು ನಿರಾಕರಿಸಿ, ನಿನಗೆ ಜಾಮೀನು ಕೊಡುವಂತಹ ಅಪರಾಧ ಕೃತ್ಯ ಎಸಗಿಲ್ಲ. ದಲಿತ ಯುವಕನಿಗೆ ಮೂತ್ರ ಕುಡಿಸಿರುವುದು ಅಮಾನವೀಯ ಕೃತ್ಯ ಎಂದು ಅಭಿಪ್ರಾಯ ಪಟ್ಟಿತ್ತು. ಇದಾದ ಬಳಿಕ ಅರ್ಜುನ್ ತಲೆ ಮರೆಸಿಕೊಂಡಿದ್ದ.
ಸಿಐಡಿ ಪೊಲೀಸರ ಬಲೆಗೆ ಅರ್ಜುನ್: ಹೈಕೋರ್ಟ್ನಲ್ಲಿ ಅರ್ಜುನ್ ಜಾಮೀನು ಅರ್ಜಿ ತಿರಸ್ಕೃತಗೊಳ್ಳುತ್ತಿದ್ದಂತೆ ಸಿಐಡಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಬುಧವಾರ ಅರ್ಜುನ್ ನನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಸಿ ಪ್ರಕರಣ ಸಂಬಂಧ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಕಿರಗುಂದದಲ್ಲಿ ಮಹಿಳೆ ಕಾಣೆಯಾಗಿದ್ದಳು. ಪುನೀತ್ ಮೇಲೆ ಅನುಮಾನಗೊಂಡಿದ್ದ ಪಿಎಸ್ಐ ಅರ್ಜುನ್ ದಿನಗೂಲಿ ನೌಕರನಾಗಿದ್ದ ಪುನೀತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
Recommended Video
ಪುನೀತ್ನ ತಲೆ ಕೆಳಗೆ ಮಾಡಿ ಕಟ್ಟಿ ಹಾಕಿ ತೀವ್ರ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚೇತನ್ ಎಂಬಾತನ ಮೂತ್ರವನ್ನು ಕುಡಿಸಿ ವಿಕೃತ ಮೆರೆದಿದ್ದ. ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪುನೀತ್ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದ. ಸುಳ್ಳುಕೇಸಿನಲ್ಲಿ ವಶಕ್ಕೆ ಪಡೆದು ಅರ್ಜುನ್ ಹಲ್ಲೆ ಮಾಡಿದ್ದಾನೆ. ಪುನೀತ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಬಗ್ಗೆ ಠಾಣಾ ದಾಖಲೆಗಳಲ್ಲಿ ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ. ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದ ಪಿಎಸ್ಐ ಚಿತ್ರಹಿಂಸೆ ನೀಡಿದ್ದ. ಇದರಿಂದ ನಿತ್ರಾಣಗೊಂಡು ನೀರು ಕೇಳಿದಾಗ ಎರಡು ಹನಿ ಮಾತ್ರ ನೀಡಿದ್ದ. ನೀರು ಕುಡಿಸುವಂತೆ ಪುನೀತ್ ಬೇಡಿಕೊಂಡಾಗ ಬೇರೆ ಆರೋಪಿಯ ಮೂತ್ರ ಕುಡಿಸಿ ವಿಕೃತ ಮೆರೆದಿದ್ದ ಎಂದು ಆರೋಪಿಸಲಾಗಿದೆ.