ಸಿದ್ದರಾಮಯ್ಯ ಗೈರು, ಕಾಂಗ್ರೆಸ್ ಶಾಸಕಾಂಗ ಸಭೆ ಮುಂದೂಡಿಕೆ
Recommended Video

ಬೆಳಗಾವಿ, ಡಿಸೆಂಬರ್ 10: ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯು ಮುಂದಕ್ಕೆ ಹೋಗಿದೆ.
ಕಳೆದ ವಾರ ನಿಗದಿಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಅಧಿವೇಶನದ ಮೊದಲ ದಿನ ಮಾಡುವುದಾಗಿ ಕೆಪಿಸಿಸಿ ಹೇಳಿತ್ತು. ಆದರೆ ಇಂದು ಸಿದ್ದರಾಮಯ್ಯ ಇರುವುದಿಲ್ಲವಾದ್ದರಿಂದ ಕೆಪಿಸಿಸಿಯು ಶಾಸಕಾಂಗ ಸಭೆಯನ್ನು ಮುಂದಕ್ಕೆ ಹಾಕಿದೆ.
ಈ ಬಗ್ಗೆ ಪತ್ರಿಕಾಪ್ರಕಟಣೆ ಬಿಡುಗಡೆ ಮಾಡಿರುವ ಕೆಪಿಸಿಸಿ, ಶಾಸಕಾಂಗ ಸಭೆಯನ್ನು ಡಿಸೆಂಬರ್ 18 ರಂದು ನಡೆಸುವುದಾಗಿ ಹೇಳಿದೆ. ಎಲ್ಲ ಕಾಂಗ್ರೆಸ್ ಶಾಸಕರು ಕಡ್ಡಾಯವಾಗಿ ಸಭೆಯಲ್ಲಿ ಹಾಜರಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಮುಂಚೆ ಸಮನ್ವಯ ಸಮಿತಿ ಸಭೆ ನಡೆದಾಗ, ಕಾಂಗ್ರೆಸ್ ಶಾಸಕಾಂಗ ಸಭೆಯು ಬೆಳಗಾವಿ ಅಧಿವೇಶನದ ಮೊದಲ ದಿನ ಸುವರ್ಣಸೌಧದಲ್ಲಿ ನಡೆಯುತ್ತದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು, ಆದರೆ ಸಭೆಗೆ ಅವರೇ ಲಭ್ಯವಾಗಲು ಆಗದ ಕಾರಣ ಸಭೆ ಮುಂದಕ್ಕೆ ಹೋಗಿದೆ.

ಕಾಂಗ್ರೆಸ್ ಸಭೆಯಲ್ಲಿ ಎಚ್ಡಿಕೆ!
ಈ ಬಾರಿಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರ ಅವಹಾಲುಗಳನ್ನು, ದೂರುಗಳನ್ನು ಕೇಳಿಸಿಕೊಂಡು ಪರಿಹಾರ ನೀಡುವುದಕ್ಕಾಗಿ ಈ ರೀತಿಯ ನಿರ್ಧಾರ ಮಾಡಲಾಗಿದೆ.

ಅಧಿವೇಶನಕ್ಕೆ ಮುನ್ನಾ ಸಭೆ ಮಾಡುವುದು ವಾಡಿಕೆ
ಅಧಿವೇಶನಕ್ಕೆ ಮುನ್ನಾ ಶಾಸಕಾಂಗ ಸಭೆ ನಡೆಸುವುದು ವಾಡಿಕೆ, ಅದರಲ್ಲಿಯೂ ಅಧಿಕಾರ ಕೇಂದ್ರದಲ್ಲಿ ಜೆಡಿಎಸ್ ಶಾಸಕರು ಕಡಿಮೆ ಇದ್ದಾರೆ. ವಿರೋಧ ಪಕ್ಷದ ಬಲ ಹೆಚ್ಚಿದೆ. ಮಿತ್ರ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಬಿಜೆಪಿಯನ್ನು ಎದುರಿಸುವ ರಣತಂತ್ರ ಮಾಡಲಾದರೂ ಅಧಿವೇಶನಕ್ಕೆ ಮುನ್ನಾ ಸಭೆ ನಡೆಸಬೇಕಿತ್ತು.

ತಯಾರಿ ಇಲ್ಲದೆ ಅಧಿವೇಶನಕ್ಕೆ
ಶಾಸಕಾಂಗ ಸಭೆಯ ಹೊರತಾಗಿ ಅಧಿವೇಶನಕ್ಕೆ ಹೋಗುತ್ತಿರುವ ಕಾಂಗ್ರೆಸ್ ನಡೆ ನೋಡಿದರೆ. ಸರ್ಕಾರವನ್ನು ಅಧಿವೇಶನದಲ್ಲಿ ಒಂಟಿ ಮಾಡಬೇಕು ಎಂಬ ಉದ್ದೇಶವೇನಾದರೂ ಇದೆಯೇ ಎಂಬ ಅನುಮಾನ ಮೂಡುತ್ತದೆ. ಕಾಂಗ್ರೆಸ್ ಪಕ್ಷವು ಹಾಗೇನಾದರೂ ತಟಸ್ಥವಾದರೆ ಅಥವಾ ಜೆಡಿಎಸ್ಗೆ, ಕುಮಾರಸ್ವಾಮಿಗೆ ಅಧಿವೇಶನದಲ್ಲಿ ಸೂಕ್ತ ಬೆಂಬಲ ನೀಡದಿದ್ದರೆ, ಬಿಜೆಪಿಯು ಸರ್ಕಾರದ ಮಾನ ಮುರಾಬಟ್ಟೆ ಮಾಡುವುದು ಖಚಿತ.

ಸಿದ್ದರಾಮಯ್ಯ ವಿದೇಶಕ್ಕೆ
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳಿರುವ ಕಾರಣ ಶಾಸಕಾಂಗ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಇಂದು ಮಲೇಷ್ಯಾಕ್ಕೆ ತೆರಳಿದ್ದಾರೆ. ಸ್ನೇಹಿತರ ಮನೆಯಲ್ಲಿ ಮದುವೆ ಇರುವ ಕಾರಣ ಮಲೇಷ್ಯಾಕ್ಕೆ ಹೋಗುತ್ತಿರುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications