ಕಾಂಗ್ರೆಸ್ ಕೇವಲ ಸ್ವಾರ್ಥ, ಕುಟುಂಬ ಆಧಾರಿತ ರಾಜಕೀಯ ಪಕ್ಷ: ಅಶ್ವತ್ಥ ನಾರಾಯಣ
ಧಾರವಾಡ, ಡಿಸೆಂಬರ್ 1: ಕಾಂಗ್ರೆಸ್ ಕೇವಲ ಸ್ವಾರ್ಥ, ಕುಟುಂಬ ಆಧಾರಿತ ರಾಜಕೀಯ ಪಕ್ಷ. ಅದು ಸದಾ ಸಮಾಜ ಒಡೆಯುವ ಕೆಲಸ ಮಾಡುತ್ತ ಬಂದಿದೆ. ಈ ದೇಶ ಹಾಗೂ ಸಮಾಜಕ್ಕೆ ಕಾಂಗ್ರೆಸ್ ಕಂಟಕ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥನಾರಾಯಣ ಟೀಕಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಧರ್ಮಾಚರಣೆ ಮತ್ತು ಧರ್ಮ, ಜನರ ಭಾವನೆಗಳನ್ನು ಗೌರವಿಸದ ಪಕ್ಷ. ದೇಶ ಹಾಗೂ ಸಮಾಜ ಒಡೆಯುವ ಕೆಲಸದಲ್ಲಿಯೇ ಕಾಲಹರಣ ಮಾಡುತ್ತ ಬಂದಿದೆ ಎಂದು ಕಿಡಿಕಾರಿದರು.
ಮೋದಿಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಅಳುವಿನ ಅಂಚಿಗೆ ಬಂದಿದೆ. ಇದು ಅಪ್ರಸ್ತುತ ಪಕ್ಷ. ಬೇರೆಯವರ ಕಡೆಗೆ ಬೊಟ್ಟು ಮಾಡುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಮಾಡಿದ ಕೆಲಸ, ಸಾಧನೆ ಹಾಗೂ ನಡೆದು ಬಂದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಖಂಡನೀಯ ಎಂದರು.
ಇನ್ನೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯಗೆ ಅಧಿಕಾರಿದ ದುರಾಸೆ ಇದೆ. ಈ ಹಿಂದೆಯೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಿಗಿಳಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಆದರೆ, ಐದು ವರ್ಷ ಮುಖ್ಯಮಂತ್ರಿ ಅಧಿಕಾರದ ರುಚಿ ನೋಡಿದ ಬಳಿಕ ಅಧಿಕಾರ ಬಿಡುತ್ತಿಲ್ಲ. ಬೇರೆಯವರಿಗೆ ಅವಕಾಶ ನೀಡದೆ, ನಾನೇ ಮುಖ್ಯಮಂತ್ರಿ ಅಂತ ಸ್ವಯಂ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಅಸಾಧ್ಯ
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಜರಾತ್ ಮಾದರಿ ಕರ್ನಾಟಕದಲ್ಲಿ ಅನ್ವಯ ಅಸಾಧ್ಯ. ಆಯಾ ಸಂದರ್ಭ, ಪರಿಸ್ಥಿತಿ ಹಾಗೂ ಕಾಲಕ್ಕೆ ಅನುಗುಣ ಸರ್ವರ ವಿಶ್ವಾಸ ಪಡೆದು ಬಿಜೆಪಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ. ಬಿಜೆಪಿಗರು ಅಧಿಕಾರ ಬಯಸುವವರಲ್ಲ. ಪಕ್ಷದ ಜವಾಬ್ದಾರಿಯನ್ನು ಕಟ್ಟಾಳುಗಳಾಗಿ ಮತ್ತು ಸೈನಿಕರಂತೆ ನಿರ್ವಹಿಸುತ್ತಾರೆ ಎಂದರು.
ಇನ್ನೂ ಶಿಕ್ಷಣ ಸದೃಢಗೊಳಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಅದಕ್ಕಾಗಿ ಉನ್ನತ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರಬಲ್ಲ ಶಿಕ್ಷಣ ನೀತಿ ಮಸೂದೆಯನ್ನು ಇದೇ ಅಧಿವೇಶನದಲ್ಲಿ ತರಲಾಗುವುದು ಎಂದು ತಿಳಿಸಿದರು.
ಸಮಾಜದ ಕೊನೆಯ ವ್ಯಕ್ತಿಯು ಉನ್ನತಸ್ಥಾನಕ್ಕೇರಲು ಬೇಕಾದ ಕೌಶಲ್ಯ, ಪ್ರತಿಭೆ ಹೆಚ್ಚಿಸಲು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಸರಕಾರ ಅನುಷ್ಠಾನಗೊಳಿಸುತ್ತಿದೆ. ಪ್ರತಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಲಾಗಿದೆ. ಸರಕಾರ ಅದಕ್ಕಾಗಿ ಸೂಕ್ತ ಯೋಜನೆ ರೂಪಿಸಿದೆ. ಯಾವುದೇ ಆರ್ಥಿಕ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುವುದು. ಸ್ಥಳೀಯ ಆಡಳಿತದಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರ ಕಚೇರಿಗಳು ಹೇಗೆ ಮುಖ್ಯವಾಗಿದೆಯೂ ಅದೇ ರೀತಿ ಜಿಲ್ಲೆಗೊಂದು ವಿಶ್ವವಿದ್ಯಾಲಯದ ಅಗತ್ಯವಿದೆ ಎಂದರು.
ಪ್ರಸ್ತುತ ವಿಶ್ವವಿದ್ಯಾಲಯಗಳಿಗೆ ಸರಿಯಾದ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯ ಸರಕಾರ ಯಾವುದೇ ವಿಶ್ವವಿದ್ಯಾಯಕ್ಕೆ ಅನುದಾನ ಬಿಡುಗಡೆಗೆ ವಿಳಂಬವಾಗಿಲ್ಲ. ಅಲ್ಲದೇ ಅತಿಥಿ ಉಪನ್ಯಾಸಕರ ಸಂಬಳವನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಲಾಗುತ್ತಿದೆ ಎಂದರು.
ಲ್ಯಾಪ್ಟಾಪ್ ವಿತರಣೆ ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಮಾಜ ಕಲ್ಯಾಣ ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದೆ. ಲ್ಯಾಪ್ಟಾಪ್ಗಳನ್ನು ನೀಡುವುದಾದರೆ ಶೀಘ್ರವಾಗಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ತರಲಾಗಿದೆ. ಅದಕ್ಕೆ ಇಲಾಖೆ ಸೂಕ್ತವಾಗಿ ಸ್ಪಂದಿಸಿದೆ ಎಂದರು.
ಅಲ್ಲದೇ ರಾಜ್ಯದ ಆರ್ಥಿಕ ಸ್ಥಿತಿ ಸಧೃಢವಾಗಿದೆ. ಎರಡು ವರ್ಷ ಕೋವಿಡ್ ಇದ್ದರೂ ಕೂಡಾ ರಾಜ್ಯದ ಆರ್ಥಿಕತೆ ಬೆಳವಣಿಗೆ ಹಂತದಲ್ಲಿದೆ. ದೇಶದಲ್ಲಿಯೇ ಹೆಚ್ಚು ಜಿಎಸ್ಟಿ ಸಂಗ್ರಹಿಸುವುದರಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವಿದೆ. ಹೀಗಾಗಿ ರಾಜ್ಯ ಸರಕಾರಕ್ಕೆ ಯಾವುದೇ ಆರ್ಥಿಕ ತೊಂದರೆ ಇಲ್ಲ ಎಂದರು.