ಕಾಶ್ಮೀರ ಭಯೋತ್ಪಾದನೆಗೆ ದುಡ್ಡು ಕೊಡುತ್ತಿದ್ದ ಆರೋಪ: 7 ಬಂಧನ
ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಹಣಕಾಸು ನೆರವು ಆರೋಪ. ಕಾಶ್ಮೀರ ಪ್ರತ್ಯೇಕತಾವಾದಿ ಜೀಲಾನಿ ಅಳಿಯ ಅಲ್ತಾಫ್.
ಶ್ರೀನಗರ, ಜುಲೈ 24: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀಗರದಲ್ಲಿ ಸೋಮವಾರ ಮಿಂಚಿನ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ), ಕಣಿವೆ ರಾಜ್ಯದಲ್ಲಿನ ಹಿಂಸಾಚಾರಕ್ಕೆ ಹಣದ ಸಹಾಯ ಮಾಡುತ್ತಿದ್ದ ಆರೋಪದ ಮೇರೆಗೆ ಏಳು ಜನರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ, ಕಾಶ್ಮೀರ ಪ್ರತ್ಯೇಕತಾವಾದಿಯಾದ ಎನ್ಎಎಸ್ ಜಿಲಾನಿ ಅಳಿಯ ಅಲ್ತಾಫ್ ಶಾ (ಅಲ್ತಾಫ್ ಫಂತೂಶ್), ಬಿಟ್ಟಾ ಕರಾಟೆ, ಹುರಿಯತ್ ಕಾನ್ಫರೆನ್ಸ್ ನಾಯಕ ನಯೀಮ್ ಖಾನ್, ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ವಕ್ತಾರ ಅಯಾಜ್ ಅಕ್ಬರ್, ಪೀರ್ ಸೈಫುಲ್ಲಾ, ಮಿರಾಜುದ್ದೀನ್ ಕಲ್ವಾಲ್ ಹಾಗೂ ಹುರಿಯತ್ ಸಂಘಟನೆಯ ಮುಖ್ಯಸ್ಥ ಮೀರ್ ವೈಜ್ ಉಮರ್ ಫಾರೂಕ್ ಅವರ ನಿಕಟವರ್ತಿ ಶಾಹೀದ್ ಉಲ್ ಇಸ್ಲಾಂ ಅವರು ಬಂಧಿತರು.
ಈ ಬಂಧಿತರೆಲ್ಲರೂ, ಪಾಕಿಸ್ತಾನದ ಮೂಲಗಳಿಂದ ಹಣ ಪಡೆದು, ಅದನ್ನು ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ನಡೆಸುವವರಿಗೆ, ಕಲ್ಲು ತೂರಾಟ ಮಾಡುವವರಿಗೆ ಹಣ ಹಂಚುತ್ತಿದ್ದ ಆರೋಪವಿದೆ.
ಈ ಪ್ರಕರಣದಲ್ಲಿ ಹೆಚ್ಚಾಗಿ ಉದ್ಯಮಿಗಳಿಂದ ಹಣ ವಸೂಲಾಗಿರುವ ಸಂಭವ ಹೆಚ್ಚಿದ್ದು, ಇದರ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.