ರೇಪ್ ಕೇಸ್ ತನಿಖೆಗೆ ಸಹಕಾರ: ಗ್ರೀನ್ ಪೀಸ್
ನವದೆಹಲಿ, ಜೂ. 16: ಬ್ಯಾಂಕ್ ಖಾತೆ ಮುಟ್ಟುಗೋಲಿಗೆ ಒಳಗಾಗಿದ್ದ ಗ್ರೀನ್ ಪೀಸ್ ಎನ್ ಜಿಒಗೆ ಸಂಕಷ್ಟಗಳು ತಪ್ಪಿದಂತೆ ಕಾಣುತ್ತಿಲ್ಲ. ತನ್ನ ಮಾಜಿ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಸಂಸ್ಥೆ ಇದೀಗ ಮತ್ತೊಮ್ಮೆ ಮುಜಗರಕ್ಕೆ ಗುರಿಯಾಗಿದೆ.
ಮಾಜಿ ಉದ್ಯೋಗಿಯ ಅತ್ಯಾಚಾರ ಆರೋಪವನ್ನು ನಿಭಾಯಿಸಿದ್ದರ ಬಗ್ಗೆ ಸ್ವತಃ ಅತೃಪ್ತಿ ವ್ಯಕ್ತಪಡಿಸಿ ಇನ್ನೊಮ್ಮೆ ತನಿಖೆಯನ್ನು ವ್ಯವಸ್ಥಿತವಾಗಿ ನಡೆಸುತ್ತೇನೆ ಎಂದು ಹೇಳಿದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದೆ. [ಗ್ರೀನ್ ಪೀಸ್ ಬ್ಯಾಂಕ್ ಖಾತೆ ಮುಟ್ಟುಗೋಲು]
ಅಂತರ್ಜಾಲದಲ್ಲಿ ಗ್ರೀನ್ ಪೀಸ್ ನ ಮಾಜಿ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಬರೆದುಕೊಂಡಿದ್ದರು. ಆದರೆ ಈ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ. ಪೊಲೀಸರ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಈ ಬಗ್ಗೆ ತನ್ನ ವೆಬ್ ತಾಣದಲ್ಲಿ ಗ್ರೀನ್ ಪೀಸ್ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಕವಿತಾ ಕೃಷ್ಣನ್, ಸಂಸ್ಥೆ ಆರೋಪಿಗೆ ತಕ್ಕದಾದ ಶಿಕ್ಷೆ ನೀಡುವಲ್ಲಿ ಮೃದು ಧೋರಣೆ ಅನುಸರಿಸಿದರೆ ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.