ಸುಕೇಶ್ ಜೈಲು ವರ್ಗಾವಣೆ ವಿಚಾರ: ಕೇಂದ್ರ, ದೆಹಲಿ ಸರ್ಕಾರದಿಂದ ಉತ್ತರ ಕೋರಿದ ಎಸ್ಸಿ
ನಗರದ ಮಂಡೋಲಿ ಜೈಲಿನಿಂದ ತಮ್ಮನ್ನು ದೇಶದ ಯಾವುದೇ ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಸುಕೇಶ್ ಚಂದ್ರಶೇಖರ್ ಸಲ್ಲಿಸಿರುವ ಮನವಿಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಜೈಲಿನಲ್ಲಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಕೇಶ್ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಉನ್ನತ ನಾಯಕರು ಮತ್ತು ಜೈಲು ಅಧಿಕಾರಿಗಳ ವಿರುದ್ಧ ದೆಹಲಿ ಎಲ್-ಜಿಗೆ ದೂರು ನೀಡಿದ ನಂತರ, ತನಗೆ ನಿರಂತರ ಬೆದರಿಕೆ ಇದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಒಂದು ವಾರದೊಳಗೆ ಉತ್ತರ ಕೇಳಿದೆ.
215 ಕೋಟಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸುಕೇಶ್ ಚಂದ್ರಶೇಖರ್ ಎಎಪಿ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ತಮಗೆ ಜೈಲಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಸುಕೇಶ್ ದೂರಿ ತಮ್ಮನ್ನು ಜೈಲಿನಿಂದ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
ಜೈಲಿನಲ್ಲಿ ಕಿರುಕುಳದ ಆರೋಪ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಆಗಸ್ಟ್ ನಲ್ಲಿ ತಿಹಾರ್ ಜೈಲಿನಿಂದ ದೆಹಲಿಯ ಮಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ತಿಹಾರ್ ಜೈಲಿನಲ್ಲಿ ತಮಗೆ ಜೀವ ಬೆದರಿಕೆ ಇದೆಯೆಂದು ಸುಕೇಶ್ ಚಂದ್ರಶೇಖರ್ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಸುಕೇಶ್ ಅವರ ಪತ್ನಿ ಲೀನಾ ಮರಿಯಾ ಪೌಲ್ ಅವರನ್ನೂ ಆತನ ಜೊತೆಗೆ ಸ್ಥಳಾಂತರ ಮಾಡುವಂತೆ ಕೋರ್ಟ್ ಆದೇಶಿಸಿತ್ತು. ಆದರೀಗ ಇದೇ ಆರೋಪದೊಂದಿಗೆ ಸುಕೇಶ್ ತಮ್ಮನ್ನು ಮತ್ತೊಂದು ಜೈಲಿಗೆ ರವಾನಿಸುವಂತೆ ಮನವಿ ಮಾಡಿದ್ದಾರೆ.
ಜೈಲಾಧಿಕಾರಿಗಳಿಂದ ಸುಕೇಶ್ಗೆ ಮತ್ತೆ ಕಿರುಕುಳ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಹಲವಾರು ಬಾರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಪಕ್ಷದ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಆರೋಪ ಮಾಡಿದ್ದಾರೆ. ಈ ಆರೋಪಗಳ ಬೆನ್ನಲ್ಲೆ ಎಎಪಿ ಸರ್ಕಾರದಿಂದ ತಮ್ಮ ಮೇಲೆ ಜೈಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಸುಕೇಶ್ ಆರೋಪಿಸಿದ್ದಾರೆ. ಹೀಗಾಗಿ ತಮ್ಮನ್ನು ಮಂಡೋಲಿ ಜೈಲಿನಿಂದ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
ಆರೋಪ ಪತ್ರದಲ್ಲಿ ಏನಿದೆ?
'ನಾನು ಎಲ್ಲಾ ಪುರಾವೆಗಳೊಂದಿಗೆ ನನ್ನ ಆರೋಪಗಳನ್ನು ಸಾಬೀತುಪಡಿಸಲಿದ್ದೇನೆ. ತನಿಖೆಯನ್ನು ಪ್ರಾರಂಭಿಸಲಿರುವ ತನಿಖಾ ಸಂಸ್ಥೆಗೆ ನೀಡುತ್ತೇನೆ. ಹಾಗಾಗಿ ಅತಿಯಾದ ಆತ್ಮವಿಶ್ವಾಸ ನನಗಿಲ್ಲ ಎಂದು ಭಾವಿಸಬೇಡಿ. ನಿಮ್ಮ ಗ್ಯಾಂಗ್ನ ಪ್ರತಿಯೊಂದು ಚಾಟ್ ಮತ್ತು ರೆಕಾರ್ಡಿಂಗ್ಗಳು ನನ್ನ ಬಳಿ ಇವೆ' ಎಂದು ಚಂದ್ರಶೇಖರ್ ಪತ್ರದಲ್ಲಿ ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ಬರೆದ ಪತ್ರದಲ್ಲಿ ಚಂದ್ರಶೇಖರ್, "ಅಮೆರಿಕ ಸುದ್ದಿಗಳಲ್ಲಿ ದೆಹಲಿ ಶಾಲೆಯ ಮಾದರಿಯ ಕಥೆಯನ್ನು ಪ್ರಚಾರ ಮಾಡಲು PR ಗೆ USD 8.5 ಲಕ್ಷ ಮತ್ತು ಶೇಕಡಾ 15 ರಷ್ಟು ಹೆಚ್ಚುವರಿ ಕಮಿಷನ್ ನೀಡಲಾಗಿದೆ" ಎಂದು ಆರೋಪಿಸಿದ್ದಾರೆ. ಆದರೆ ಎಎಪಿ ಸುಕೇಶ್ ಅವರ ಆರೋಪಗಳನ್ನು ತಳ್ಳಿ ಹಾಕಿದೆ. ಸಕೇಶ್ ಬಿಜೆಪಿಯಂತೆ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ ಮುಂದೊಂದು ದಿನ ಸುಕೇಶ್ ಬಿಜೆಪಿ ಸೇರಬಹುದು ಎಂದು ದೆಹಲಿ ಸಿಎಂ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ಸುಕೇಶ್ ಮತ್ತು ಜಾಕ್ವೆಲಿನ್ ಕಥೆ ಏನು?
ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದ ವಂಚಕ. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ 215 ಕೋಟಿ ರೂಪಾಯಿಯನ್ನು ವಸೂಲಿ ಮಾಡಿದ್ದನು. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿ ಆದಿತಿಗೆ ಪೋನ್ ಕಾಲ್ ಗಳನ್ನು ಮಾಡಿ ತನ್ನನ್ನು ತಾನು ಕೇಂದ್ರ ಗೃಹ ಇಲಾಖೆಯ ಅಧಿಕಾರಿ, ಕಾನೂನು ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪತಿಯನ್ನು ಜೈಲಿನಲ್ಲಿ ಬಿಡುಗಡೆ ಮಾಡಿಸಲು ಹಣ ನೀಡಬೇಕೆಂದು ಹೇಳಿದ್ದ. ವಾಯ್ಸ್ ಮಾಡ್ಯುಲೇಷನ್ ಸಾಫ್ಟ್ವೇರ್ ಮತ್ತು ಸ್ಪೂಫಿಂಗ್ ಕರೆಗಳನ್ನು ಬಳಸಿ ಸುಕೇಶ್ ಚಂದ್ರಶೇಖರ್ 215 ಕೋಟಿ ರೂ. ವಂಚನೆ ಮಾಡಿದ್ದನು. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಯಿತು. ಆಗ ಪ್ರಕರಣ ಬೆಳಕಿಗೆ ಬಂದಿದೆ. ವಂಚಕ ಸುಕೇಶ್ ಈ 215 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣವನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಗಿಫ್ಟ್ ನೀಡಿದ್ದ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ವಿಚಾರಣೆ ನಡೆಸಿದೆ. ಆದರೀಗ ಜಾಕ್ವೆಲಿನ್ ಫರ್ನಾಂಡೀಸ್ ಜಾಮೀನು ಪಡೆದಿದ್ದಾರೆ.