ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಭಾಷಣ
ನಾಗಪುರ, ಅ 11: ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದ್ದಕ್ಕಾಗಿ ಸೇನೆಗೆ ಮತ್ತು ಸರಕಾರಕ್ಕೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ನಾಗಪುರದಲ್ಲಿ ಮಂಗಳವಾರ (ಅ 11) ಐತಿಹಾಸಿಕ 'ವಿಜಯದಶಮಿ' ಭಾಷಣ ಮಾಡುತ್ತಾ ಸಂಘದ ಸರಸಂಘಚಾಲಕ ಭಾಗವತ್, ಕಳೆದ ವರ್ಷದಂತೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ ಕಾರ್ಯಕ್ರಮ ಈ ವರ್ಷವೂ ಮುಂದುವರಿಯಲಿದೆ.
ನಮ್ಮ ದೇಶದ ಶೈಕ್ಷಣಿಕ ವಿಚಾರದ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ಚಾಲ್ತಿಯಲ್ಲಿದೆ. ಉತ್ತಮ ಶಿಕ್ಷಣದ ಮೂಲಕ ಜವಾಬ್ದಾರಿ, ಸಾಮಾಜಿಕ ಕಳಕಳಿ ಮತ್ತು ದೇಶ ಕಟ್ಟುವ ಕೆಲಸವಾಗಬೇಕಾಗಿದೆ ಎಂದು ಭಾಗವತ್ ಹೇಳಿದ್ದಾರೆ.
ಗಡಿರೇಖೆಯ ಮೂಲಕ ನಡೆಯುತ್ತಿರುವ ಉಗ್ರ ಚಟುವಟಿಕೆಗಳು ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಮೂಡಿಸಿದೆ. ದೇಶದ ಗಡಿಯಲ್ಲಿ ಕೆಲವೊಂದು ಸಂಘಟನೆಗಳು ನಮ್ಮ ದೇಶದ ವಿರುದ್ದ ಭಯೋತ್ಪಾದನ ಕೃತ್ಯ ಎಸಗಲು ಸದಾ ಹವಣಿಸುತ್ತಿವೆ ಎನ್ನುವುದು ವಿಶ್ವಕ್ಕೇ ಗೊತ್ತಿರುವ ವಿಚಾರ.
ಉರಿ ಆರ್ಮಿ ಕ್ಯಾಂಪಿನ ಮೇಲೆ ನಡೆದ ಉಗ್ರರ ದಾಳಿಯ ನಂತರ ಸೇನೆ ಮತ್ತು ಗುಪ್ತಚರ ಇಲಾಖೆ ಇನ್ನಷ್ಟು ಸಹಕಾರದಿಂದ, ಜೊತೆಜೊತೆಯಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವೊಂದು ಬದಲಾವಣೆಗಳಿಂದ ವಿದ್ಯಾಭ್ಯಾಸದ ಗುಣಮಟ್ಟ ಸುಧಾರಿಸುತ್ತಿರುವುದು ಗಮನಿಸಬೇಕಾದ ವಿಚಾರ. ಸರಕಾರ ಮತ್ತು ಸಂಘಸಂಸ್ಥೆಗಳು ವಿದ್ಯಾಭ್ಯಾಸ ವ್ಯಾಪಾರೀಕರಣ ಆಗದಂತೆ ನೋಡಿಕೊಳ್ಳಬೇಕು ಎಂದು ಭಾಗವತ್ ಮನವಿ ಮಾಡಿದ್ದಾರೆ.
ಭಾಗವತ್ ಭಾಷಣದ ಪ್ರಮುಖಾಂಶ, ಮುಂದೆ ಓದಿ..
ಸಂಘಟನೆಯ 91ನೇ ಸ್ಥಾಪನಾ ದಿನಾಚರಣೆ
ಸಂಘಟನೆಯ 91ನೇ ಸ್ಥಾಪನಾ ದಿನಾಚರಣೆ ಮತ್ತು ದಸರಾ ಸಂದರ್ಭದಲ್ಲಿ ವಾರ್ಷಿಕ ಭಾಷಣ ಮಾಡುತ್ತಾ ಭಾಗವತ್, ದೀನ್ ದಯಾಳ್ ಉಪಾಧ್ಯಾಯ, ಆಚಾರ್ಯ ಅಭಿನವ್ ಗುಪ್ತಾ, ಗುಲಾಬ್ ರಾವ್ ಮಹಾರಾಜ್, ಗುರು ಗೋಬಿಂದ್ ಸಿಂಗ್ ಮುಂತಾದ ಗಣ್ಯರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟರು. ಇವರುಗಳು ಮಾಡಿದ ಸಾಮಾಜಿಕ ಕೆಲಸವನ್ನು ಜನತೆಗೆ ತಿಳಿಸುವ ಕೆಲಸ ಈ ವರ್ಷದಿಂದ ನಡೆಯಲಿದೆ.
ಭಾಗವತ್ ಖಡಕ್ ಸಂದೇಶ
ಗೋವನ್ನು ಪೂಜಿಸುವ ದೇಶ ನಮ್ಮದು, ಆದರೆ ಗೋರಕ್ಷಕರು ಎಂದು ಮುಖವಾಡ ಹೊತ್ತವರು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವುದು ಖಂಡನಾರ್ಹ. ಕಾನೂನಿನ ಚೌಕಟ್ಟನ್ನು ಮೀರಿ ಹೋಗಬಾರದು ಎಂದು ಭಾಗವತ್ ಖಡಕ್ ಸಂದೇಶ ರವಾನಿಸಿದ್ದಾರೆ.
ಸಮಾಜ ವಿಭಜಿಸುವ ಕೆಲಸ
ಸಮಾಜವನ್ನು ವಿಭಜಿಸುವ ಕೆಲಸ ದೇಶದಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ. ಜಾತಿ, ಧರ್ಮ ಮುಂತಾದ ವಿಚಾರದಲ್ಲಿ ತಾರತಮ್ಯ, ಭಿನ್ನಾಭಿಪ್ರಾಯ, ಮನಸ್ತಾಪ ಹೆಚ್ಚಾಗುತ್ತಿದೆ. ಇದು ದೇಶದ ಅಭಿವೃದ್ದಿಗೆ ಉತ್ತಮ ಲಕ್ಷಣಗಳಲ್ಲ. ಈ ಬಗ್ಗೆ ನಾವು ಚಿಂತಿಸಬೇಕಾಗಿದೆ.
ಮೀರ್ಪುರ, ಮುಜಫರಾಬಾದ್, ಗಿಲ್ಗಿಟ್
ಮೀರ್ಪುರ, ಮುಜಫರಾಬಾದ್, ಗಿಲ್ಗಿಟ್, ಬಾಲ್ಟಿಸ್ತಾನ್ ಭಾರತದ ಅವಿಭಾಜ್ಯ ಅಂಗ. ಆ ಭಾಗದಲ್ಲಿ ಪುನರ್ವಸತಿ ಸೇರಿದಂತೆ ಮೂಲಭೂತ ಸೌಕರ್ಯ ನೀಡಬೇಕಾಗಿದೆ. ಅಲ್ಲಿಯ ಜನರಿಗೆ ಮತ್ತು ಕಾಶ್ಮೀರ ತೊರೆದು ಬಂದಿರುವ ಪಂಡಿತರಿಗೂ ನಾವು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ಮತ್ತಷ್ಟು ಸಕ್ರಿಯರಾಗಿರಿ
ದೇವರ ಶ್ರೀರಕ್ಷೆ ಎಲ್ಲರ ಮೇಲಿರಲಿ. ಮುಂದಿನ ದಿನಗಳಲ್ಲಿ ಸಂಘಟನೆಯ ಅಭಿವೃದ್ದಿಗೆ ಸ್ವಯಂಸೇವಕರು ಇನ್ನಷ್ಟು ಶ್ರಮವಹಿಸಲಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. RSS ವಿಜಯದಶಮಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆಯ ಪ್ರಮುಖರು, ಸ್ವಯಂಸೇವಕರು ಭಾಗವಹಿಸಿದ್ದರು.