ದೇಶದ ಅತೀ ಉದ್ದ ಸೇತುವೆ ಭೂಪೇನ್ ಹಜಾರಿಕಾಗೆ ಅರ್ಪಣೆ
ಗುವಾಹತಿ, ಮೇ 26 : ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಮೂರು ವರ್ಷ ತುಂಬಿದ ಸಂಭ್ರಮ ಆಚರಿಸುವುದಕ್ಕೆ ಇದಕ್ಕಿಂತ ಒಳ್ಳೆ ಸಂದರ್ಭ ಬೇಕಾ? ಅಸ್ಸಾಂನಲ್ಲಿ ಶುಕ್ರವಾರ ಧೋಲಾ- ಸದಿಯಾ ಸೇತುವೆ ಉದ್ಘಾಟನೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಬ್ರಹ್ಮಪುತ್ರಾ ನದಿಗೆ ಪುರಾನ ಸದಿಯಾದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದ ಹಾಗೆ ಅನೇಕ ಮುಖಂಡರು ಹಾಜರಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸೇತುವೆಗೆ ಭೂಪೇನ್ ಹಜಾರಿಕಾ ಅವರ ಹೆಸರಿಟ್ಟರು.[ನರೇಂದ್ರ ಮೋದಿಯಿಂದ ದೇಶದ ಅತೀ ದೊಡ್ಡ ಸೇತುವೆ ಇಂದು ಲೋಕಾರ್ಪಣೆ]
ಸೇತುವೆಗೆ ಸಂಬಂಧಿಸಿದ ಅಂಕಿ-ಅಂಶವೂ ಸೇರಿದಂತೆ ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖಾಂಶ ಇಲ್ಲಿವೆ.
* ಬೆಳಗ್ಗೆ 10.45ಕ್ಕೆ ಪ್ರಧಾನಿ ನರೇಂದ್ರ ಮೋದಿ ತಿನುಸುಕಿಯಾ ಜಿಲ್ಲೆಯಲ್ಲಿ ದೇಶದ ಅತಿ ದೊಡ್ಡ ಧೋಲಾ- ಸದಿಯಾ ಸೇತುವೆ ಉದ್ಘಾಟಿಸಿದರು. 9.15 ಕಿಲೋಮೀಟರ್ ಉದ್ದದ ಈ ಸೇತುವೆಯು ಬ್ರಹ್ಮಪುತ್ರ ನದಿಗೆ ಕಟ್ಟಲಾಗಿದ್ದು, ಇದರಿಂದ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಮಧ್ಯೆ ಪ್ರಯಾಣ ಕನಿಷ್ಠ ನಾಲ್ಕು ತಾಸು ಕಡಿಮೆಯಾಗುತ್ತದೆ.
* "ನೀವು ಐದು ದಶಕದಿಂದ ನಿರೀಕ್ಷಿಸುತ್ತಿದ್ದ ಸೇತುವೆ ನಿಮ್ಮೆದುರು ಇದೆ. ಇದನ್ನು ಗಾಯಕ ಭೂಪೇನ್ ಹಜಾರಿಕಾ ಅವರ ಹೆಸರಿಂದ ಕರೆಯಲಾಗುವುದು". ಇದಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ.
* ಅಸ್ಸಾಂನ ಧೇಮಾಜಿ ಜಿಲ್ಲೆಯ ಗೋಗಮುಖ್ ನಲ್ಲಿ ಮಧ್ಯಾಹ್ನದ ಹೊತ್ತಿಗೆ ಮೋದಿಯಿಂದ ಕೃಷಿ ಸಂಶೋಧನಾ ಕೇಂದ್ರಕ್ಕೆ ಶಂಕುಸ್ಥಾಪನೆ. ಆ ನಂತರ ಗುವಾಹತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಏಮ್ಸ್ ಸ್ಥಾಪನೆಗೆ ಶಂಕುಸ್ಥಾಪನೆ.
* ಮೂರು ವರ್ಷದ ಅಧಿಕಾರಾವಧಿ ಪೂರೈಸಿದ ಸಂಭ್ರಮದಲ್ಲಿ ಮೋದಿ ವೈಯಕ್ತಿಕವಾಗಿ ಭಾಗವಹಿಸಿದ ಮೊದಲ ಐದು ಕಾರ್ಯಕ್ರಮಗಳು ಅಸ್ಸಾಂನಲ್ಲಿ ನಿಗದಿಯಾದವು.
* ಮೋದಿ ಫೆಸ್ಟ್ 'ಮೇಕಿಂಗ್ ಆಫ್ ಡೆವಲಪಿಂಗ್ ಇಂಡಿಯಾ ಫೆಸ್ಟಿವಲ್ಸ್' ಎಂಬ ಹೆಸರಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಭಾಗವಿದು.
* ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಯಾ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಮೋದಿ ಫೆಸ್ಟ್ ನಲ್ಲಿ ಭಾಗವಹಿಸುತ್ತಾರೆ. ಮೇ 26 ಹಾಗೂ ಜೂನ್ 15ರವರೆಗೆ ದೇಶದಾದ್ಯಂತ ಇರುವ ಒಂಬೈನೂರು ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಕೇಂದ್ರ ಸರಕಾರದ ಸಾಧನೆಯನ್ನು ತಿಳಿಸಲಾಗುತ್ತದೆ.