"ಯಾವುದೇ ಕಾರಣಕ್ಕೂ ಹಳ್ಳಿಗಳಿಗೆ ಕೊರೊನಾ ಸೋಂಕು ಪಸರಿಸಬಾರದು"
ನವದೆಹಲಿ, ಏಪ್ರಿಲ್ 24: ದೇಶದಲ್ಲಿ ಕೊರೊನಾ ಎರಡನೇ ಅಲೆ ಕಳೆದ ವರ್ಷಕ್ಕಿಂತ ಹೆಚ್ಚು ತೀವ್ರವಾಗಿದ್ದು, ಸೋಂಕು ಗ್ರಾಮಗಳಿಗೆ ವ್ಯಾಪಿಸದಂತೆ ತಡೆಯುವ ತುರ್ತು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶನಿವಾರ ಪಂಚಾಯತ್ ರಾಜ್ ದಿವಸ್ ಅಂಗವಾಗಿ ನಡೆದ ವರ್ಚುಯಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕಳೆದ ಬಾರಿ ಗ್ರಾಮಗಳಿಗೆ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದೆವು. ಕಳೆದ ವರ್ಷದ ಅನುಭವ ಹಾಗೂ ಜ್ಞಾನವನ್ನು ಬಳಸಿಕೊಂಡು ಈ ವರ್ಷವೂ ಯಾವುದೇ ಕಾರಣಕ್ಕೂ ಹಳ್ಳಿಗಳಿಗೆ ಕೊರೊನಾ ಸೋಂಕು ಪಸರಿಸದಂತೆ ತಡೆಯಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ" ಎಂದು ಹೇಳಿದರು.
"ಕೊರೊನಾ ವಿರುದ್ಧ ಹೋರಾಟದಲ್ಲಿ ಗ್ರಾಮೀಣ ಜನರೇ ಮೊದಲ ಜಯ ಸಾಧಿಸುವವರು. ನನಗೆ ಗ್ರಾಮಗಳಲ್ಲಿನ ನಾಯಕತ್ವದ ಬಗ್ಗೆ ವಿಶ್ವಾಸವಿದೆ. ಗ್ರಾಮೀಣ ಜನರೇ ದೇಶ ಹಾಗೂ ಪ್ರಪಂಚಕ್ಕೆ ದಾರಿ ತೋರಿಸುತ್ತಾರೆ" ಎಂದು ಶ್ಲಾಘಿಸಿದರು. ಗ್ರಾಮೀಣ ಜನರು ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಬಡಜನರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಉಚಿತ ಪಡಿತರ ವಿತರಿಸಲು ನಿರ್ಧರಿಸಿದೆ. ಇದಕ್ಕಾಗಿ 26 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ದೇಶದ 80 ಕೋಟಿ ಜನರು ಉಚಿತ ಪಡಿತರ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಇದೇ ಸಂದರ್ಭ 2021ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಪ್ರದಾನ ಮಾಡಿದರು.












Click it and Unblock the Notifications