ಶಿವರಾಜ್ ಸಿಂಗ್ ಚೌಹಾಣ್ ಬಲವರ್ಧನೆಗೆ ಮೋದಿ, ಅಮಿತ್
ಭೋಪಾಲ್, ಸೆಪ್ಟೆಂಬರ್ 25 : ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ 'ಕಾರ್ಯಕರ್ತರ ಮಹಾಕುಂಭ' (ವಿಶ್ವದ ಅತೀದೊಡ್ಡ ರಾಜಕೀಯ ಸಮ್ಮಿಳನ)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆ ತುಸು ಕುಸಿದಿರುವ ಸಂದರ್ಭದಲ್ಲಿ, ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಇಬ್ಬರು ನಾಯಕರು ಮಾತನಾಡಲಿರುವುದು ಮಹತ್ವ ಪಡೆದುಕೊಂಡಿದೆ. ಭಾರತೀಯ ಜನ ಸಂಘದ ಸಹಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ (25ನೇ ಸೆಪ್ಟೆಂಬರ್ 1916 - 11ನೇ ಫೆಬ್ರವರಿ 1968) ಅವರ ಜಯಂತಿಯ ಪ್ರಯುಕ್ತ ಈ ಸಮಾವೇಶವನ್ನು ಭೋಪಾಲ್ ನಲ್ಲಿ ಆಯೋಜಿಸಲಾಗಿದೆ.
ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?
ಮಧ್ಯಾಹ್ನ 1 ಗಂಟೆಗೆ ಸಮಾರಂಭ ಆರಂಭವಾಗಲಿದ್ದು, ಬಂಜೋರೀ ಮೈದಾನದಲ್ಲಿ ಏನಿಲ್ಲವೆಂದರೂ 10 ಲಕ್ಷ ಜನರು ಜಮಾಯಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಸರ್ವೇಶ್ ತಿವಾರಿ ಅವರು ಅಂದಾಜಿಸಿದ್ದಾರೆ. ಮಧ್ಯಾಹ್ನದ ಸುಮಾರಿಗೆ ಮೋದಿಯವರು ಭೋಪಾಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಶಿವರಾಜ್ ಸಿಂಗ್ ಚೌಹಾಣ್ ಜೊತೆಗೆ ಹೆಲಿಕಾಪ್ಟರ್ ಮೂಲಕ ಜಂಬೋರೀ ಮೈದಾನಕ್ಕೆ 1 ಗಂಟೆಗೆ ಆಗಮಿಸಲಿದ್ದಾರೆ.
230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿನ 65 ಸಾವಿರ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಲಿರುವ ಎಲ್ಲ ಕಾರ್ಯಕರ್ತರು ಭೋಪಾಲ್ ಗೆ ಬರಲಿದ್ದಾರೆ. ಅವರನ್ನೆಲ್ಲ ಕರೆತರಲೆಂದು ರಾಜ್ಯದ ಎಲ್ಲ ಕಡೆಗಳಿಂದ ವಿಶೇಷ ರೈಲುಗಳನ್ನು ನಿಯೋಜಿಸಲಾಗಿದೆ.
ಕೇವಲ ಒಂದು ವಾರದ ಹಿಂದೆ ಸೆಪ್ಟೆಂಬರ್ 17ರಂದು ರಾಹುಲ್ ಗಾಂಧಿ ಅವರು ರೋಡ್ ಶೋ ನಡೆಸಿದ್ದರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಇನ್ನೆರಡು ದಿನಗಳಲ್ಲಿ ರಾಹುಲ್ ಗಾಂಧಿ ಅವರು ಎರಡು ದಿನಗಳ ಪ್ರವಾಸವನ್ನು ಮತ್ತೆ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 27 ಮತ್ತು 28ರಂದು ಅವರು ಚಿತ್ರಕೂಟ ಮತ್ತು ರೇವಾದಲ್ಲಿ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಇದ್ದ ಬಸ್ ಮೇಲೆ ಕಲ್ಲು ತೂರಾಟ
ಅವರು ಚಿತ್ರಕೂಟದಲ್ಲಿರುವ ಸತ್ನ ಮತ್ತು ರೇವಾ ನಗರಗಳಿಗೆ ಮತ್ತು ಕೆಲ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ತ್ರೇತಾಯುಗ ರಾಮ ಹದಿನಾಲ್ಕು ವರ್ಷಗಳ ವನವಾಸದಲ್ಲಿದ್ದಾಗ ಇದೇ ಚಿತ್ರಕೂಟದಲ್ಲಿ ಸೀತೆ ಮತ್ತು ಲಕ್ಷ್ಮಣನೊಡನೆ ವಾಸವಿದ್ದ. ಇಲ್ಲಿರುವ ಪೌರಾಣಿಕ ಮಹತ್ವವಿರುವ ರಾಮನ ಮಂದಿರಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಲಿದ್ದಾರೆ ಎಂದೂ ತಿಳಿದುಬಂದಿದೆ.
ಕಾಂಗ್ರೆಸ್ ನನ್ನ ರಕ್ತಕ್ಕಾಗಿ ಊಳಿಡುತ್ತಿದೆ: ಮಧ್ಯಪ್ರದೇಶ ಮುಖ್ಯಮಂತ್ರಿ
ಹತ್ತು ವರ್ಷಗಳ ಕಾಲ ಅಧಿಕಾರದ ರುಚಿ ನೋಡಿ, ಕಳೆದ ಐದು ವರ್ಷಗಳಿಂದ ಅಧಿಕಾರದಿಂದ ವಂಚಿತವಾಗಿರುವ ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆಯೇರುವ ಹವಣಿಕೆಯಲ್ಲಿದೆ. ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 166 ಸೀಟುಗಳನ್ನು ಗೆದ್ದು ಭಾರೀ ಜಯ ಸಾಧಿಸಿತ್ತು. ಈಗಲೂ ಬಿಜೆಪಿ ಜನಪ್ರಿಯತೆ ಅಷ್ಟು ಕುಂದಿಲ್ಲವಾದರೂ, ಸ್ವಲ್ಪ ಹಿನ್ನಡೆಯನ್ನು ಕಂಡಿದೆ. ಆದರೆ, ಬಹುಜನ ಸಮಾಜವಾದಿ ಪಕ್ಷದೊಡನೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಬಿಜೆಪಿಯನ್ನು ಸೋಲಿಸುವುದು ಅನುಮಾನ. ಆದರೆ, ಕಾಂಗ್ರೆಸ್ಸಿಗೆ ಭರ್ಜರಿ ಶಾಕ್ ಕೊಟ್ಟಿರುವ ಬಿಎಸ್ಪಿ ನಾಯಕಿ ಮಾಯಾವತಿ, ತಮ್ಮ ಪಕ್ಷ ಮಧ್ಯಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ.