ಸೌದಿಯಲ್ಲೂ ಐಎಂ ನಿಷೇಧ: ಅಡಗುತ್ತಾ ಉಗ್ರರ ಸದ್ದು?
ಉಗ್ರವಾದಕ್ಕೆ ಸೌದಿ ಅರೇಬಿಯಾ ಪರೋಕ್ಷ ಬೆಂಬಲ ನೀಡುತ್ತಿದ್ದು, ಹಣಕಾಸಿನ ಸಹಾಯ ಮಾಡುತ್ತಿದೆ ಎಂಬ ಆರೋಪದ ಮಧ್ಯೆಯೂ 86 ಉಗ್ರ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇವುಗಳಲ್ಲಿ ಇಂಡಿಯನ್ ಮುಜಾಹಿದೀನ್ (ಐಎಂ) ಹಾಗೂ ಲಷ್ಕರ್ ಇ ತಯ್ಬಾ ಕೂಡ ಸೇರಿರುವ ಕಾರಣ ಭಾರತ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಐಎಂ ಹಾಗೂ ಲಷ್ಕರ್ ಸಂಘಟನೆಗಳು ಭಾರತದಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ವಿಶ್ವದ ಗಮನ ಸೆಳೆದಿರಲಿಲ್ಲ. ಆದ್ದರಿಂದ ಈ ಸಂಘಟನೆಗಳ ವಿರುದ್ಧ ಹೋರಾಟವೂ ಪರಿಣಾಮಕಾರಿಯಾಗಿ ನಡೆಯುತ್ತಿರಲಿಲ್ಲ. ಇವುಗಳ ಮೇಲೆ ಅಮೆರಿಕ ಈಗಾಗಲೇ ನಿಷೇಧ ಹೇರಿತ್ತು. ಈಗ ಸೌದಿ ಅರೇಬಿಯಾ ಕೂಡ ನಿಷೇಧಿಸಿರುವುದು ಭಾರತೀಯ ತನಿಖಾ ಸಂಸ್ಥೆಗೆ ಮತ್ತಷ್ಟು ಬಲ ತಂದಿದೆ. [ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಸಿಮಿ-ಐಎಂ ಸ್ನೇಹ?]
ಇಂಡಿಯನ್ ಮುಜಾಹಿದೀನ್ಗೆ ಸೌದಿ ಅರೇಬಿಯಾ ಮತ್ತೊಂದು ಮನೆಯಂತಿತ್ತು. ಯಾಸಿನ್ ಭಟ್ಕಳ್ ಜತೆ ಬಂಧಿಸಲ್ಪಟ್ಟ ಉಗ್ರ ಅಸಾದುಲ್ಲಾ ಅಖ್ತರ್ ವಾರಣಸಿ ಸ್ಫೋಟದ ನಂತರ ಸೌದಿ ಅರೇಬಿಯಾದಲ್ಲಿಯೇ ಆಶ್ರಯ ಪಡೆದಿದ್ದ. ಭಾರತೀಯ ತನಿಖಾ ಸಂಸ್ಥೆಗಳು ಆತನಿಗಾಗಿ ಹುಡುಕುತ್ತಿದ್ದಾಗ ಆತ ಸೌದಿಯಲ್ಲಿಯೇ ಕುಳಿತು, ಭಾರತದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ.

ಐಎಂ ಆರ್ಥಿಕ ಶಕ್ತಿ ಕುಸಿಯುತ್ತಾ?: ಸೌದಿ ಅರೇಬಿಯಾದಲ್ಲಿ ಷೇಧಿಸಿರುವ ಕಾರಣ ಐಎಂ ಸಂಘಟನೆಗೆ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಎಂದು ಭಾರತೀಯ ತನಿಖಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಏಕೆಂದರೆ ಇದುವರೆಗೆ ಇಂಡಿಯನ್ ಮುಜಾಹಿದೀನ್ಗೆ ಹೆಚ್ಚು ಹಣ ನೀಡುತ್ತಿದ್ದವರು ಸೌದಿಯಲ್ಲಿಯೇ ಇದ್ದರು. ಆದ್ದರಿಂದ ಸೌದಿ ಅರೇಬಿಯಾ ಐಎಂಗೆ ಮುಖ್ಯವಾಗಿತ್ತು. [ಫೇಸ್ ಬುಕ್ ಟ್ವಿಟ್ಟರ್ ಬಳಸಿ ಉಗ್ರರ ಸಂಚು]
ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಐಎಂ ಸೇರುವ ಮೊದಲು ಕಾರ್ಯಕರ್ತರು ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದರು. ಅಲ್ಲಿ ಉಗ್ರಗಾಮಿಗಳಾಗಿ ಬದಲಾಗುತ್ತಿದ್ದರು. ಯಾಸಿನ್ ಭಟ್ಕಳ್, ಅಸಾಸುದ್ದೀನ್ ಅಖ್ತರ್, ಡಾ. ಶಹನವಾಜ್, ಅಬ್ದುಲ್ ವಾಹಿದ್ ಭಟ್ಕಳ್ ಮತ್ತು ಅಬ್ದುಲ್ ಸತ್ತಾರ್ ಸೇರಿದಂತೆ ಹಲವರು ಸೌದಿಗೆ ಹೋಗಿಯೇ ಉಗ್ರರಾಗಿ ಬದಲಾಗಿದ್ದಾರೆ. ಅಲ್ಲಿಂದಲೇ ವಾರಣಸಿ ಹಾಗೂ ದೆಹಲಿಯಲ್ಲಿ ಸ್ಫೋಟ ನಡೆಸುವ ಕುರಿತು ಯೋಜನೆ ತಯಾರಿಸಿದ್ದರು. ಅಲ್ಲದೆ, ವಾರಣಸಿ ಸ್ಫೋಟಕ್ಕೆ ಸೌದಿ ಅರೇಬಿಯಾದಲ್ಲಿದ್ದ ಐಎಂ ಘಟಕವೇ ಕಾರಣ ಎಂಬುದನ್ನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಖಚಿತಪಡಿಸಿದೆ. [ನಮ್ಮ ಮೊದಲ ಟಾರ್ಗೆಟ್ ನರೇಂದ್ರ ಮೋದಿ]
ಉಗ್ರ ನಿಗ್ರಹ ಕುರಿತು ಸೌದಿ ಅರೇಬಿಯಾ ಜತೆ ಭಾರತ ಉತ್ತಮ ಸಂಬಂಧ ಹೊಂದಿದೆ. ಈಗ ನಿಷೇಧ ಹೇರಿರುವ ಕಾರಣ ಉಗ್ರರಿಗೆ ಸೌದಿಯಲ್ಲಿ ಇರುವುದು ಸಾಧ್ಯವಾಗುವುದಿಲ್ಲ.












Click it and Unblock the Notifications