ಮೇಲ್ವರ್ಗದ ಬಡವರಿಗೂ ಮೀಸಲಾತಿ ಘೋಷಿಸಿದ ಗುಜರಾತ್ ಸರ್ಕಾರ
ಅಹಮದಾಬಾದ್, ಏಪ್ರಿಲ್ 29: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೂ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಗುಜರಾತ್ ಸರ್ಕಾರ ಶುಕ್ರವಾರ ಘೋಷಿಸಿದೆ. ಗುಜರಾತ್ ಸ್ಥಾಪನ ದಿನ(ಮೇ 1) ದ ಅಂಗವಾಗಿ ಈ ವಿಶೇಷ ಘೋಷಣೆ ಹೊರಡಿಸಲಾಗಿದೆ.
ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಸಮುದಾಯ ಪ್ರತಿಭಟನೆಯಿಂದ ಆನಂದಿಬೇನ್ ಪಟೇಲ್ ಸರ್ಕಾರ ನಲುಗಿಹೋಗಿತ್ತು. 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲಾ ಮೇಲ್ವರ್ಗದ ಜಾತಿಗಳಿಗೂ ಈ ಮೀಸಲಾತಿ ಸೌಲಭ್ಯ ಅನ್ವಯವಾಗಲಿದೆ. ಈ ವರೆಗೂ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ಲಭ್ಯವಿತ್ತು.[ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಕ್ಕಿರಲಿಲ್ಲ ಏಕೆ?]
ಪಾಟೀದಾರ್ ಸೇರಿದಂತೆ ಎಲ್ಲಾ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮೂಲಕ ಮೀಸಲಾತಿಯನ್ನು ಒಟ್ಟು ಪ್ರಮಾಣ ಸುಪ್ರೀಂಕೋರ್ಟ್ ನಿರ್ದೇಶನದಂತೆ ಶೇ.49ರ ಮಿತಿಯಲ್ಲೇ ಇರುವಂತೆ ಎಚ್ಚರಿಕೆ ವಹಿಸಿದೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]
ಮೇ 1 ರಿಂದ ಹೊಸ ಮೀಸಲಾತಿ ಅಧಿಸೂಚನೆ ಮೂಲಕ ಜಾರಿಗೆ ಬರಲಿದ್ದು, ಪಟೇಲ್, ಬ್ರಾಹ್ಮಣ, ಕ್ಷತ್ರಿಯ, ಲೋಹನಾ ಸಮುದಾಯಗಳು ಈ ಸೌಲಭ್ಯ ಪಡೆಯಲಿವೆ. [ಗುಜರಾತ್ ಸರ್ಕಾರ ಅಲ್ಲಾಡಿಸಿದ ಹಾರ್ದಿಕ್ ಪಟೇಲ್ ಯಾರು?]

1992ರ ಸುಪ್ರೀಂಕೋರ್ಟ್ ತೀರ್ಪಿನಂತೆ ಮೀಸಲಾತಿ
ಪಟೇಲ್ ಸಮುದಾಯಕ್ಕೆ ಸೇರಿದವರಾದ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಈ ಮುಂಚೆ ಯಾವುದೇ ಪ್ರತಿಭಟನೆಗೆ ಜಗ್ಗಿರಲಿಲ್ಲ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಪ್ರಕಟಣೆ ಹೊರಡಿಸಲಾಗಿತ್ತು.

ಯಾರಿವರು ಪಟೇಲ್ ಸಮುದಾಯ
ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ.

ಸರ್ದಾರ್ ಪಟೇಲ್ ಸೇವಾದಾಳ ಸ್ಥಾಪನೆ
2011ರಲ್ಲಿ ಪಟೇಲ್ ಸಮುದಾಯದ ಹಿತಕಾಯುವುದಕ್ಕಾಗಿ 'ಸರ್ದಾರ್ ಪಟೇಲ್ ಸೇವಾದಾಳ' ಸ್ಥಾಪಿಸಿ ಹೋರಾಟ ಆರಂಭಿಸಿದ್ದರು. ನಂತರ, ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಸಂಯೋಜಕರಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರಿನಲ್ಲಿ ಮೀಸಲಾತಿ ಆಗ್ರಹಿಸುತ್ತಿರುವ ಹಾರ್ದಿಕ್ ಪಟೇಲ್ ಅವರನ್ನು 'ನವ ಮೋದಿ' ಎಂದೇ ಕರೆಯಲಾಗುತ್ತಿದೆ.

ಯಾರೀತ ಹಾರ್ದಿಕ್ ಪಟೇಲ್?
ಅಹಮದಾಬಾದ್ ಜಿಲ್ಲೆಯ ವೀರಾಮ್ ಗ್ರಾಮದ 22 ವರ್ಷ ವಯಸ್ಸಿನ ಯುವಕ ಹಾರ್ದಿಕ್ ಪಟೇಲ್ ಈಗ ಗುಜರಾತಿನ ನವತಾರೆ. ಷಹಜನಬಾದ್ ಕಾಲೇಜಿನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಬಿ.ಕಾಂ ಪದವಿ ಪಡೆದಿರುವ ಹಾರ್ದಿಕ್ ಕೌಟುಂಬಿಕ ವೃತ್ತಿಯಾದ ಜಲ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಪಿಎಎಎಸ್ ಮೂಲಕ ಮೀಸಲಾತಿಗಾಗಿ ಆಗ್ರಹಿಸಿ ಉಗ್ರ ಪ್ರತಿಭಟನೆ ನಡೆಸಿದ ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹದ ಆರೋಪ ಕೂಡಾ ಹೊರೆಸಲಾಗಿತ್ತು.











Click it and Unblock the Notifications