ಮೋದಿ ಅವರು ದಕ್ಷಿಣ ಭಾರತದ ಈ ಕ್ಷೇತ್ರದಿಂದ ಸ್ಪರ್ಧಿಸುವರೇ?
ಹೈದರಾಬಾದ್, ಅಕ್ಟೋಬರ್ 01: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣದಿಂದ ಪ್ರಧಾನಿ ಮೋದಿ ಅವರು ಸ್ಪರ್ಧಿಸುವಂತೆ ಅಲ್ಲಿನ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.
ತೆಲಂಗಾಣ ವಿಧಾನಸಭೆ ವಿಸರ್ಜನೆಯಾಗಿದ್ದು, ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಗೆ ಪ್ರಧಾನಿ ಮೋದಿ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ನನ್ನನ್ನು ತೆಗಳಿ, ಆದರೆ ಪಟೇಲ್ ರಂಥವರಿಗೆ ಅವಮಾನ ಮಾಡಬೇಡಿ: ಮೋದಿ
ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರ ನೇತೃತ್ವದ ಬಿಜೆಪಿ ಮುಖಂಡರು, ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೋದಿ ಅವರು ಸಿಕಂದರಾಬಾದಿನಿಂದ ಸ್ಪರ್ಧಿಸುವುದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವರ್ಚಸ್ಸು ಇನ್ನಷ್ಟು ಬೆಳೆಸಿಕೊಳ್ಳಬಹುದಾಗಿದೆ. ಇದು ಸೇಫ್ ಆಗಿರುವ ಕ್ಷೇತ್ರವೂ ಹೌದು. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತೆಲಂಗಾಣದ ಮೇದಕ್ ಹಾಗೂ ಕರ್ನಾಟಕದ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ದತ್ತಾತ್ರೇಯ ಹೇಳಿದರು.
ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರು ಕರ್ನೂಲಿನ ನಂದ್ಯಾಲ್ ಹಾಗೂ ಮಹಾರಾಷ್ಟ್ರದ ರಾಮ್ ಟೆಕ್ ನಿಂದ ಸ್ಪರ್ಧಿಸಿದ್ದರು. ಮೋದಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೊನೆಗೆ ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡರು.
ಈಗ ದಕ್ಷಿಣ ಭಾರತದಲ್ಲಿ ಸ್ಪರ್ಧಿಸಲು ಮೋದಿ ಅವರು ಇಚ್ಛಿಸಿದ್ದಾರೆಯೇ? ಅದರಲ್ಲೂ ತೆಲಂಗಾಣದ ಸಿಕಂದರಾಬಾದ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಯೇ? ಕಾದು ನೋಡಬೇಕಿದೆ.