ನನ್ನನ್ನು ತೆಗಳಿ, ಆದರೆ ಪಟೇಲ್ ರಂಥವರಿಗೆ ಅವಮಾನ ಮಾಡಬೇಡಿ: ಮೋದಿ
ನವದೆಹಲಿ, ಅಕ್ಟೋಬರ್ 01: 'ನಿಮಗೆ ತೆಗಳುವ ಇಚ್ಛೆಯಿದ್ದರೆ ನನ್ನನ್ನು ತೆಗಳಿ. ಆದರೆ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಂಥ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತ ಮಾತುಗಳನ್ನು ದಯವಿಟ್ಟು ಆಡಬೇಡಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನ ರಾಜ್ ಕೋಟ್ ನಲ್ಲಿ ಸಾರ್ವಜನಿಕ ಸಮಾರಂಭವೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಸರ್ದಾರ್ ಪಟೇಲ್ ಅವರ ಪ್ರತಿಮೆ 'ಮೇಡ್ ಇನ್ ಚೀನಾ' ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಗುಜರಾತಿನಲ್ಲಿ ನಿರ್ಮಾಣವಾಗುತ್ತಿರುವ ಸರ್ದಾರ್ ಪಟೇಲ್ ಅವರ ಅತೀ ಎತ್ತರದ ಪ್ರತಿಮೆ ಚೀನಾದಿಂದ ನಿರ್ಮಾಣವಾಗುತ್ತಿದೆ ಎಂದು ರಾಹುಲ್ ಗಾಂಧಿ ದೂರಿದ್ದರು. ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಮೋದಿ, 'ಕಳೆದ ಎಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಟೇಲ್ ಅವರನ್ನು ಗೌರವಿಸುವ ಕೆಲಸ ಮಾಡಿಲ್ಲ. ಆದರೆ ಈಗ ನಾವು ಆ ಕೆಲಸ ಮಾಡುತ್ತಿರುವಾಗ, ಅವರ ಘನತೆಗೆ ಚ್ಯುತಿ ಬರುವಂಥ ಮಾತುಗಳನ್ನೇಕೆ ಆಡುತ್ತಿದ್ದೀರಿ' ಎಂದು ಅವರು ಪ್ರಶ್ನಿಸಿದರು.

ಅಕ್ಟೋಬರ್ 31 ರ ಪಟೇಲ್ ಅವರ 143 ನೇ ಜನ್ಮದಿನದಂದು ಈ ಪ್ರತಿಮೆ ಲೋಕಾರ್ಪಣೆಯಾಗಲಿದೆ. ನೆಲಮಟ್ಟದಿಂದ 183 ಮೀ. ಅಡಿಯಲ್ಲಿರುವ ಈ ಪ್ರತಿಮೆಯನ್ನು ಒಗ್ಗಟ್ಟಿನ ಪ್ರತೀಕ ಎಂದೇ ಕರೆಯಲಾಗುತ್ತದೆ. ಸಣ್ಣ ಪುಟ್ಟ ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಪಟೇಲ್, ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿಯೂ ಆಗಿದ್ದರು.












Click it and Unblock the Notifications