ಸಿ.ಎಂ.ನಿಂಬಣ್ಣವರ ಟಿಕೆಟ್ ತಪ್ಪಲು ಕಾರಣ ಯಾರು ಗೊತ್ತಾ?
ಹುಬ್ಬಳ್ಳಿ, ಏಪ್ರಿಲ್ 18 : ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಹೇಶ ತೆಂಗಿನಕಾಯಿ ಪಾಲಾಗುತ್ತಿದ್ದಂತೆ ಸಿ.ಎಂ.ನಿಂಬಣ್ಣ ಅವರ ಬೆಂಬಲಿಗರಲ್ಲಿ ಆಕ್ರೋಶ ಮನೆ ಮಾಡಿದೆ. ಓರ್ವ ಬಿಜೆಪಿ ನಾಯಕನ ಒತ್ತಾಯಕ್ಕೆ ಮಣಿದು ಹೈಕಮಾಂಡ್ ಸಿ.ಎಂ.ನಿಂಬಣ್ಣವರ ಬದಲು ಮಹೇಶ ತೆಂಗಿನಕಾಯಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.
ಟಿಕೆಟ್ ತಪ್ಪಲು ಕಾರಣವೇನು?
ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರದ್ದು ಒಂದು ಬಣವಾದ್ರೆ, ಹುಬ್ಬಳ್ಳಿ ಟೀಂ ಎಂದೇ ಖ್ಯಾತರಾಗಿರುವ ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿಯವರದ್ದು ಒಂದು ಬಣ. ಆದರೆ ಈ ಎರಡೂ ಬಣಗಳನ್ನು ಹೊರತುಪಡಿಸಿ ಕಾಣದ ಕೈ ಕೆಲಸ ಮಾಡಿ ಮಹೇಶ ತೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಿದೆಯಂತೆ.ಹೌದು, ಇವರಿಗೆ ಟಿಕೆಟ್ ಸಿಗಲು ಕಾರಣ ಬೇರಾರು ಅಲ್ಲ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ಅಭಿಪ್ರಾಯಕ್ಕೆ ಕ್ಯಾರೆ ಅನ್ನದೇ ತಮ್ಮ ಬೆಂಬಲಿಗ ಮಹೇಶ ತೆಂಗಿನಕಾಯಿಗೆ ಸಂತೋಷ್ ಅವರು ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಈಗ ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ. ಆದರೆ ಈ ಎಲ್ಲ ವಿಷಯ ಗೊತ್ತಿದ್ದ ನಾಯಕರು ಮತ್ತು ಕಾರ್ಯಕರ್ತರು ಈ ಮಾತನ್ನು ಎಲ್ಲೂ ಹೇಳುತಿಲ್ಲ.

ಸ್ವಾಮೀಜಿ ಬೆಂಬಲವೂ ಇದೆ..
ಹುಬ್ಬಳ್ಳಿಯ ಪ್ರಸಿದ್ಧ ಮೂರು ಸಾವಿರ ಮಠದ ಪೀಠಾಧಿಪತಿ ಶ್ರೀಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಸಹ ಮಹೇಶ್ ತೆಂಗಿನಕಾಯಿ ಪರ ಬ್ಯಾಟಿಂಗ್ ಮಾಡಿದ್ದಾರೆ.ಇದಕ್ಕೆ ಪುಷ್ಠಿಕೊಂಡುವಂತೆ ಮೂಜಗು ಶ್ರೀಗಳ ಕಟ್ಟಾ ಶಿಷ್ಯ , ಮಹೇಶ್ ತೆಂಗಿನಕಾಯಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದಾಗ ಮುಂದೆ ನಿಂತು ಎಲ್ಲ ಕೆಲಸ ಮಾಡಿದ್ದರು.
ಅಲ್ಲದೆ ಮಠಕ್ಕೆ ಭೇಟಿ ನೀಡಿದಾಗ ಅಮಿತ್ ಶಾಗೆ ಟಿಕೆಟ್ ವಿಷಯದಲ್ಲಿ ತಮ್ಮ ಶಿಷ್ಯನ್ನನ್ನು ಸ್ವಾಮೀಜಿ ಪರಿಗಣಿಸುವಂತೆ ಹೇಳಿದ್ದಾರೆ ಎನ್ನುವ ಸುದ್ದಿಯೂ ಈಗ ಹರಿದಾಡುತ್ತಿದೆ.ಸತತ 23 ವರ್ಷಗಳ ಕಾಲ ಕಲಘಟಿಗಿಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕನನ್ನು ಬಿಟ್ಟು, ತಾಲೂಕಿಗೆ ಪರಿಚಯ ಇಲ್ಲದವರಿಗೆ ಟಿಕೇಟ್ ಕೊಟ್ಟಿರುವ ಹಿಂದಿನ ಸತ್ಯ ಎಲ್ಲರಿಗೂ ಗೊತ್ತು. ಆದರೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತ್ರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಹಾಗೆ ತಮ್ಮ ಮನೆ ಮುಂದೆ ಪ್ರತಿಭಟನೆ ಮಾಡಿದ ನಿಂಬಣ್ಣವರ ಬೆಂಬಲಿಗರಿಗೆ ಮತ್ತೊಮ್ಮೆ ಹೈಕಮಾಂಡ್ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಮುಂದೇನಾಗುವುದು ಕಾದು ನೋಡಬೇಕು...












Click it and Unblock the Notifications