ಮಾರುವೇಷ ಧರಿಸಿ ಆಟೋಚಾಲಕರಿಗೆ ಬಿಸಿ ಮುಟ್ಟಿಸಿದ ಧಾರವಾಡ ಪೊಲೀಸ್!
ಧಾರವಾಡ, ಆಗಸ್ಟ್, 17: ನಗರದ ಸಂಚಾರಿ ಪೊಲೀಸರ ಮಾರುವೇಷದ ಕಾರ್ಯಾಚರಣೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಧಾರವಾಡದ ರೈಲ್ವೇ ನಿಲ್ದಾಣದಲ್ಲಿನ ಮಾರುವೇಷ ಕಾರ್ಯಾಚರಣೆ ರಾಜ್ಯಕ್ಕೆ ಮಾದರಿ ಆಗಿದೆ.
ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದು, ಪೊಲೀಸರ ಸಾಹಸಕ್ಕೆ ಧಾರವಾಡ ಜನರು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರದ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಆಟೋ ಚಾಲಕರು ಬಾಡಿಗೆ ದರದಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾರೆ. ಈ ಸಮಯದಲ್ಲಿ ಸಂಚಾರಿ ಪೊಲೀಸರು ಮಾರುವೇಷ ಕಾರ್ಯಾಚರಣೆ ಮೂಲಕ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಹೀಗೆ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಾಚರಣೆಯನ್ನು ಧಾರವಾಡ ಸಂಚಾರಿ ಠಾಣೆ ಪೊಲೀಸರು ಮಾಡಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಆಡಳಿತದ ದೃಶ್ಯವೈಭವ ರಂಗಭೂಮಿಗೆ ತರಲು ಸಜ್ಜಾದ ಧಾರವಾಡ ರಂಗಾಯಣ
ರೈಲ್ವೇ ನಿಲ್ದಾಣಕ್ಕೆ ಬರುವ ಸಾರ್ವಜನಿಕರ ಬಳಿ ಆಟೋದವರು ನಿಗದಿಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದರು. ಈ ಕುರಿತಂತೆ ಸಾಕಷ್ಟು ಬಾರಿ ಸಾರ್ವಜನಿಕರಿಂದ ಸಂಚಾರಿ ಪೊಲೀಸರಿಗೆ ದೂರುಗಳು ಬಂದಿದ್ದವು. ಇದೆಲ್ಲವನ್ನೂ ಅರಿತುಕೊಂಡ ಪೊಲೀಸರು ಇಂದು ಮಾರುವೇಷವನ್ನು ಹಾಕಿಕೊಂಡು ರೈಲ್ವೇ ನಿಲ್ದಾಣದ ಒಳಗಡೆಯಿಂದ ಪ್ರಯಾಣಿಕರ ರೀತಿ ಬಂದು ಆಟೋವನ್ನು ಬಾಡಿಗೆಗೆ ಕೇಳಿದ್ದಾರೆ. ನಂತರ ನಿಗದಿತ ದರದಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿದ್ದ 6-7 ಆಟೋಗಳನ್ನು ಸೀಜ್ ಮಾಡಿದ್ದಾರೆ. ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಧಾರವಾಡ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಪೊಲೀಸ್ ಆಯುಕ್ತ ಮತ್ತು ಧಾರವಾಡ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯ್ಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಎಎಸ್ಐ ವಿರೇಶ ಬಳ್ಳಾರಿ ನೇತೃತ್ವದಲ್ಲಿನ ಟೀಂ ಮಾರುವೇಷ ಹಾಕಿಕೊಂಡು ಕಾರ್ಯಾಚರಣೆ ಮಾಡಿದ್ದಾರೆ. ಸದ್ಯ 6-7 ಆಟೋಗಳನ್ನು ಸೀಜ್ ಮಾಡಿದ್ದು, ಚಾಲಕರನ್ನು ಕೂಡ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ. ಪೊಲೀಸರು ಮುಂದಿನ ಹಂತದ ಕ್ರಮಗಳನ್ನು ಕೈಗೊಂಡು ವಿಚಾರಣೆ ಮಾಡುವುದಾಗಿ ತಿಳಿಸಿದರು.
ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ, ಶಿವಾನಂದ ಸುತಗಟ್ಟಿ, ಬಸವರಾಜ ಉಳ್ಳಿಗೇರಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಮಾರುವೇಷದ ಕಾರ್ಯಾಚರಣೆ ರಾಜ್ಯಕ್ಕೆ ಮಾದರಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Recommended Video