ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣ, ರಮೇಶ್ ಕೊಟ್ಟ ದೂರಿನಲ್ಲೇನಿದೆ?
ದಾವಣಗೆರೆ, ನವೆಂಬರ್, 04: ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ನದ್ದು ಸಹಜ ಸಾವಲ್ಲ. ಅದು ಕೊಲೆ ಎಂಬ ಗುಮಾನಿ ಬಂದಿದೆ. ಮೃತ ಚಂದ್ರಶೇಖರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆತನ ತಂದೆ ಎಂ. ಪಿ. ರಮೇಶ್ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಸಹ ತನಿಖೆ ಚುರುಕುಗೊಳಿಸಿದ್ದಾರೆ. ಶಿವಮೊಗ್ಗದ ಕಿರಣ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ.
ಚಂದ್ರು ಸಾವಿನ ಹಿಂದೆ ಕಾಣದ ಕೈಗಳ ಕೈವಾಡ: ರೇಣುಕಾಚಾರ್ಯ ಆರೋಪ
''ನನ್ನ ಮಗ ಚಂದ್ರಶೇಖರ್.ಎಂ.ಆರ್ ಸುಮಾರು 25 ವರ್ಷದವನಾಗಿದ್ದ. ಈತನು ಅಕ್ಟೋಬರ್ 30ರ ರಾತ್ರಿ 7:30ಕ್ಕೆ ಹೊನ್ನಾಳಿಯ ನಮ್ಮ ಮನೆಯಿಂದ ಶಿವಮೊಗ್ಗಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ನನ್ನ KA -17 MA -2534 ನಂಬರ್ನ ಬಿಳಿ ಬಣ್ಣದ ಹುಂಡೈ ಕ್ರೆಸ್ಟಾ ಕಾರಿನಲ್ಲಿ ಹೋದವನು ವಾಪಸ್ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಲಿಲ್ಲ. ಆದ ಕಾರಣ ನವೆಂಬರ್ 1ರಂದು ನನ್ನ ಮಗ ಚಂದ್ರಶೇಖರ್ ಕಾಣೆಯಾದ ಬಗ್ಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಿದ್ದೇನೆ'' ಎಂದು ಎಂ. ಪಿ. ರಮೇಶ್ ಹೇಳಿದ್ದಾರೆ.
ನವೆಂಬರ್ 3ರಂದು ಚಂದ್ರಶೇಖರ್ ಶವ ಪತ್ತೆ
ಆದರೆ ನವೆಂಬರ್ 3ರಂದು ಸುಮಾರು 3:45ರ ಮಧ್ಯಾಹ್ನ ಹೊನ್ನಾಳಿ -ನ್ಯಾಮತಿ ಮಧ್ಯೆ ಬರುವ ಹೆಚ್. ಕಡದಕಟ್ಟೆ ಗ್ರಾಮದ ಬಳಿ ಅಪ್ಪರ್ ತುಂಗಾ ನಾಲೆ ಬಳಿ ಕಾರಿನೊಂದಿಗೆ ಶವ ಪತ್ತೆ ಆಗಿದೆ. ಯಾವುದೋ ವಾಹನದ ಬಿಡಿ ಭಾಗಗಳು ರಸ್ತೆ ಬದಿ ಬಿದ್ದಿವೆ ಎಂದು ಸಾರ್ವಜನಿಕರು ತಿಳಿಸಿದ್ದರು. ಕೂಡಲೇ ನಾನು, ನನ್ನ ಸಹೋದರರು, ಪೊಲೀಸರು, ಸಾರ್ವಜನಿಕರು ಒಟ್ಟಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ಸೇತುವೆಯ ಬಳಿ ಕಾರಿನ ಬಿಡಿ ಭಾಗಗಳು ಬಿದ್ದಿದ್ದು ಕಂಡು ಬಂದಿತ್ತು.
MP Renukacharya : ಚಂದ್ರಶೇಖರ್ ಅಂತ್ಯಕ್ರಿಯೆ ಬಗ್ಗೆ ಶಾಸಕ ರೇಣುಕಾಚಾರ್ಯ ಮಾಹಿತಿ
ಹೆಚ್.ಕಡದಕಟ್ಟೆ ಬಳಿಯಿರುವ ತುಂಗಾ ನಾಲೆ
ಇದನ್ನು ನೋಡಿದಾಗ ನಮ್ಮ ಕಾರಿನ ಬಿಡಿ ಭಾಗಗಳಂತೆ ಅನಿಸಿದ್ದರಿಂದ ಸೇತುವೆಯ ಸುತ್ತಲೂ ಎಲ್ಲರೂ ಪರಿಶೀಲಿಸಿದೆವು. ಆಗ ಕಾರು ಕೆಳಗೆ ನೀರಿನಲ್ಲಿ ಬಿದ್ದಿರುವ ರೀತಿಯಲ್ಲಿ ಗುರುತು ಕಂಡುಬಂದಿತ್ತು. ಅದರಂತೆಯೇ ನಾಲೆಯ ನೀರಿನಲ್ಲಿ ಸೇತುವೆಯ ಕೆಳಗೆ ಕಾರೊಂದು ಮುಳುಗಿರುವಂತೆ ಕಂಡುಬಂದಿತು. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಯವರನ್ನು ಕರೆಸಿ ಸೇತುವೆಯ ಕೆಳಭಾಗದ ನೀರಿನಲ್ಲಿ ಕಾರು ಇರುವುದನ್ನು ಖಚಿತ ಪಡಿಸಿಕೊಂಡೆವು. ನಂತರ ಕ್ರೇನ್ಗಳ ಸಹಾಯದಿಂದ ನೀರಿನಲ್ಲಿದ್ದ ಕಾರನ್ನು ಮೇಲಕ್ಕೆ ಎತ್ತಿ ರಸ್ತೆಯ ಬಳಿ ಇರಿಸಿ ನೋಡಿದಾಗ KA -17 MA - 2534 ನಂಬರ್ನ ಬಿಳಿ ಬಣ್ಣದ ಹುಂಡೈ ಕ್ರಿಸ್ಟಾ ಕಾರು ಆಗಿತ್ತು. ಕಾರಿನ ಒಳಗೆ ನೋಡಿದಾಗ ನನ್ನ ಮಗ ಚಂದ್ರಶೇಖರ್ನ ಮೃತ ದೇಹವು ಹಿಂದಿನ ಸೀಟಿನಲ್ಲಿ ಇರುವುದು ಕಂಡುಬಂದಿತು ಎಂದು ಹೇಳಿದ್ದಾರೆ.
ದೂರು ದಾಖಲಿಸಿದ ಚಂದ್ರು ತಂದೆ
ನಂತರ ಚಂದ್ರಶೇಖರ್ನ ಮೃತ ದೇಹವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ ಅವನ ಕೈ - ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿದ ರೀತಿಯಲ್ಲಿ ಕಾಣಿಸಿತ್ತು. ಕಿವಿಗಳಿಗೆ ಹೊಡೆದಿರುವ ರೀತಿಯ ಗುರುತುಗಳು, ತಲೆಯ ನೆತ್ತಿಗೆ ಆಯುಧದಿಂದ ಹೊಡೆದಿರುವುದು, ದೇಹದ ಉಳಿದ ಕಡೆಯೂ ಹೊಡೆದಿರುವ ಗುರುತುಗಳು ಕಂಡು ಬಂದಿರುತ್ತವೆ. ನನ್ನ ಮಗನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ, ಅಪಘಾತ ಆಗಿರುವ ರೀತಿಯಲ್ಲಿ ಬಿಂಬಿಸಿ ಕಾರನ್ನು ಜಖಂಗೊಳಿಸಿದ್ದಾರೆ. ಚಂದ್ರಶೇಖರ್ನ ಮೃತ ದೇಹವನ್ನು ಕಾರಿನಲ್ಲಿ ಇರಿಸಿ ಕಾಲುವೆಗೆ ತಳ್ಳಿರುವುದು ಕಂಡುಬಂದಿರುತ್ತದೆ ಎಂದರು.
ಪೊಲೀಸರಿಗೆ ಮನವಿ ಮಾಡಿದ ಚಂದ್ರು ತಂದೆ
ನನ್ನ ಮಗನಾದ ಚಂದ್ರಶೇಖರನನ್ನು ಕೊಲೆ ಮಾಡಿರುವ ದುಕ್ಷರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಕೋರಿಕೊಳ್ಳುತ್ತೇನೆ. ನನ್ನ ಮಗನ ಕೊಲೆಯು ಅಕ್ಟೋಬರ್ 30ರ ರಾತ್ರಿ ಆಗಿರಬಹುದು. ಈ ಘಟನೆಯ ಬಗ್ಗೆ ತಾವು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ರಮೇಶ್ ದೂರಿನಲ್ಲಿ ವಿವರಿಸಿದ್ದಾರೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಹೊನ್ನಾಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಂ 302 , 201 , 427 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.