ಸಚಿವ ರಮೇಶ್ ಕುಮಾರ್ ಗೆ ಖಾಸಗಿ ವೈದ್ಯರ ಬಹಿರಂಗ ಪತ್ರ
ದಾವಣಗೆರೆ, ನವೆಂಬರ್ 13: ವೈದ್ಯರ ಮುಷ್ಕರನ್ನು ಕುರಿತು, ಖಾಸಗಿ ವೈದ್ಯರುಗಳ ಬಗ್ಗೆ ವ್ಯವಸ್ಥಿತವಾಗಿ ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿದೆ ಎಂದು ಖಾಸಗಿ ವೈದ್ಯರ ಸಂಘಟನೆ ಆರೋಪಿಸಿದೆ.
ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರು ಮತ್ತು ಒಂದೆರಡು ಜನಹಿತ ಕಾಪಾಡುತ್ತೇವೆಂಬ ಸ್ವಯಂಘೋಷಿತ ಸಂಘಟನೆಗಳು ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯ ತಿದ್ದುಪಡಿಗಳಿಗೆ ಸಂಬಂಧಪಟ್ಟಂತೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ ಎಂದು ದಾವಣಗೆರೆ ಖಾಸಗಿ ನರ್ಸಿಂಗ್ ಹೋಂಗಳ ಸಂಘ ಬೇಸರ ವ್ಯಕ್ತಪಡಿಸಿವೆ. ಈ ಬಗ್ಗೆ ಸ್ಪಷ್ಟನೆ ನೀಡಿ, ರಮೇಶ್ ಕುಮಾರ್ ಅವರನ್ನು ಪ್ರಶ್ನಿಸಿ ಪ್ರಕಟಣೆ ಹೊರಡಿಸಿದೆ.
ಇದಕ್ಕೆ ಸಂಬಂಧಪಟ್ಟಂತೆ ಪರಿಹಾರ ಹುಡುಕಲು ಎಂದಾದರೂ ವೈದ್ಯಕೀಯ ಸಂಘ ಸಂಸ್ಥೆಗಳ ಜೊತೆ ಚರ್ಚೆ ನಡೆಸಿದೆಯೇ?ಅದನ್ನು ಬಿಟ್ಟು, ಇಂತಹ ಕರಾಳ ಕಾಯ್ದೆಗಳನ್ನು ಜಾರಿಗೆ ತಂದರೆ, ಸಂಪೂರ್ಣ ಆರೋಗ್ಯ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದು, ಸರ್ಕಾರವೇ ಮುಂದಿನ ದಿನಗಳಲ್ಲಿ ಸಹಸ್ರಾರು ಜೀವಗಳ ಬಲಿ ತೆಗೆದುಕೊಂಡಂತಾಗುತ್ತದೆ.
ಆದ್ದರಿಂದ, ವಿನಾಕಾರಣ ಯಾವುದೋ ಬೆರಳೆಣಿಕೆಯಷ್ಟು ಆಸ್ಪತ್ರೆಗಳನ್ನು ಗಮನದಲ್ಲಿಟ್ಟುಕೊಂಡು, ಇಡೀ ವೈದ್ಯ ಸಮೂಹವನ್ನು ದೂರುವುದು "ತಾನು ಕಳ್ಳ, ಪರರ ನಂಬ" ಎಂಬಂತಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಖಾಸಗಿ ನರ್ಸಿಂಗ್ ಹೋಂಗಳ ಅಧ್ಯಕ್ಷ ಎಸ್ ಎಂ ಬ್ಯಾಡಗಿ, ಕಾರ್ಯದರ್ಶಿ ಬಿ.ಎಸ್ ನಾಗಪ್ರಕಾಶ್, ಖಜಾಂಚಿ ಎನ್ ಕೆ ಕಡ್ಲಿ ಅವರು ಆರೋಪಿಸಿದ್ದಾರೆ.

ಸಂಪೂರ್ಣ ಕಾಯ್ದೆಯನ್ನೇ ವಿರೋಧಿಸುತ್ತಾರೆ ಎಂಬುದು ಸುಳ್ಳು
1. ರಮೇಶ್ ಕುಮಾರ್ ಜಾರಿಗೆ ತರಲು ಹೊರಟಿರುವ ಕೆಲವು ತಿದ್ದುಪಡಿಗಳನ್ನು ವೈದ್ಯರು ವಿರೋಧಿಸುತ್ತಿದ್ದಾರೆಯೇ ಎನ್ನುವುದು ಸಂಪೂರ್ಣ ಕಾಯ್ದೆಯನ್ನಲ್ಲ. ಆದರೆ, ಸಂಪೂರ್ಣ ಕಾಯ್ದೆಯನ್ನೇ ವಿರೋಧಿಸುತ್ತಾರೆ ಎಂದು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆ.
2. ಈ ಕಾಯ್ದೆಯ ತಿದ್ದುಪಡಿಗಳಿಗೆ ಸಂಬಂಧಪಟ್ಟಂತೆ ಭಾರತೀಯ ವೈದ್ಯಕೀಯ ಸಂಘವು ಸುಮಾರು 9 ತಿಂಗಳಿನಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಆರೋಗ್ಯ ಸಚಿವರ ಹಠಮಾರಿ ಧೋರಣೆಯಿಂದ ಖಾಸಗೀ ವೈದ್ಯರು, ತಮಗಿಷ್ಟವಿಲ್ಲದಿದ್ದರೂ ಮುಷ್ಕರ ನಡೆಸಬೇಕಾಗಿ ಬಂದಿದೆ.

ರೋಗಿಗಳಿಗೆ ನ್ಯಾಯ ಕೊಡಲಿರುವ ಸಂಸ್ಥೆ
3. ಜಿಲ್ಲಾ ಗ್ರಾಹಕರ ನ್ಯಾಯಾಲಯ ಮತ್ತು ವೈದ್ಯಕೀಯ ಪರಿಷತ್ತುಗಳು ರೋಗಿಗಳಿಗೆ ನ್ಯಾಯ ಕೊಡಲಿರುವ ಸಂಸ್ಥೆಗಳಾಗಿವೆ. ಇದರ ಜೊತೆಗೆ, ಇನ್ನೊಂದು ಸಂಸ್ಥೆಯನ್ನು ಹುಟ್ಟು ಹಾಕಿದರೆ, ವೈದ್ಯರ ಮೇಲೆ 4-5 ಪ್ರಕರಣಗಳು ದಾಖಲಾದರೆ, ಇಡೀ ತಿಂಗಳು ವೈದ್ಯರು ನ್ಯಾಯಾಲಯಗಳಿಗೆ ಅಲೆಯುತ್ತಿರುತ್ತಾರೆ. ಆಗ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಯಾರೊಬ್ಬರೂ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಏನು ಮಾಡಲು ಸಾಧ್ಯ?
4. ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಕಾಯ್ದೆಯ ಭಯದಿಂದ, ತುರ್ತು ಸಂದರ್ಭಗಳಲ್ಲಿ ವೈದ್ಯರು ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಶಿಫಾರಸ್ಸು
ಮಾಡಿದರೆ, ಆಗ ಯಾರನ್ನು ದೂರುತ್ತೀರಿ? ಇಂತಹ ಸಂದರ್ಭಗಳಲ್ಲಿ ರೋಗಿಯ ಜೀವ ಹೋದರೆ ಯಾರು ಹೊಣೆ?

ಕಾನೂನುಗಳಿಂದ ಸಂಬಂಧಗಳನ್ನು ಸುಧಾರಣೆ?
5. ವೈದ್ಯ ಮತ್ತು ರೋಗಿಯ ಸಂಬಂಧ ಅವಿನಾಭಾವವಾಗಿರಬೇಕೇ ಹೊರತು, ಕಾನೂನುಗಳಿಂದ ಸಂಬಂಧಗಳನ್ನು ಸುಧಾರಿಸಲು ಸಾಧ್ಯವಿಲ್ಲ. ಇಂಥ ಕಾನೂನುಗಳು ವೈದ್ಯ ಮತ್ತು ರೋಗಿಯ ಸಂಬಂಧಗಳ ನಡುವೆ ಹುಳಿ ಹಿಂಡುತ್ತವೆ.
6. ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯದೇ, ಕೋಟ್ಯಾಂತರ ರೂ. ಬಂಡವಾಳ ಹೂಡಿ ಆಸ್ಪತ್ರೆಗಳನ್ನು ನಮ್ಮೂರಿನಲ್ಲಿ ಪ್ರಾರಂಭಿಸಿ, ಸರ್ಕಾರದಿಂದ ನೀಡಲು ಸಾಧ್ಯವಾಗದ ಸವಲತ್ತುಗಳನ್ನು ಖಾಸಗೀ ವೈದ್ಯರು ನೀಡುತ್ತಿರುವಾಗ, ಅವರನ್ನು ಸುಲಿಗೆಕೋರರು ಎಂದು ಕರೆದು
ಅವಮಾನಿಸುವುದು ಹೀನ ಸಂಸ್ಕೃತಿ ಅಲ್ಲವೇ?
7. ಸರ್ಕಾರಿ ಆಸ್ಪತ್ರೆಗಳನ್ನು ನಮ್ಮೂರಿನಲ್ಲಿ ಬಲಪಡಿಸಿ ಎಲ್ಲಾ ಸವಲತ್ತುಗಳನ್ನೂ ನೀಡಿ, ವೈದ್ಯರನ್ನು ಮತ್ತು ವೈದ್ಯೋಪಚಾರ ಸಿಬ್ಬಂದಿಯನ್ನು ನೇಮಕ
ಮಾಡಿದ್ದರೆ, ಖಾಸಗೀ ಆಸ್ಪತ್ರೆಗಳು ತಲೆ ಎತ್ತುತ್ತಿದ್ದವೇ?

ವೈದ್ಯರ ಸೇವೆ ನಿಮಗೇಕೆ ಅರ್ಥವಾಗುತ್ತಿಲ್ಲ?
8. 1.25 ಲಕ್ಷ ಕೋಟಿ ಬಜೆಟ್ ಮಂಡಿಸುವ ನಮ್ಮ ಸರ್ಕಾರಕ್ಕೆ, ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯೂ ಕೂಡ ಸಿ.ಟಿ. ಸ್ಕ್ಯಾನ್ ಮತ್ತು ಎಂ.ಆರ್.ಐ. ಯಂತ್ರಗಳನ್ನು ಅಳವಡಿಸಲು ಸಾಧ್ಯವಾಗದೇ ಇರುವಾಗ, ತಮ್ಮ ಸ್ವಂತ ಹಣದಲ್ಲಿ ಇಂತಹ ಸವಲತ್ತುಗಳನ್ನು ನೀಡಿ ಸಾರ್ವಜನಿಕರ ಹಿತ ಕಾಪಾಡುತ್ತಿರುವ ಖಾಸಗೀ ವೈದ್ಯರ ಸೇವೆ ನಿಮಗೇಕೆ ಅರ್ಥವಾಗುತ್ತಿಲ್ಲ?
9. ಖಾಸಗೀ ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ನೀವು, ವಿವಿಧ ರೀತಿಯ ಕಮರ್ಷಿಯಲ್ ತೆರಿಗೆಗಳನ್ನೇಕೆ ಹಾಕುತ್ತೀರಿ?

ಕಾನೂನುಗಳಿಂದ ವೈದ್ಯರು ತಮ್ಮ ವೃತ್ತಿಯನ್ನು ತ್ಯಜಿಸಿದರೆ
10.ಇಂತಹ ಕೆಟ್ಟ ಕಾನೂನುಗಳಿಂದ ವೈದ್ಯರು ತಮ್ಮ ವೃತ್ತಿಯನ್ನು ತ್ಯಜಿಸಿದರೆ, ನಮ್ಮ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ? ಮುಂದಿನ ಪೀಳಿಗೆಯ ವೈದ್ಯರು ಇಂತಹ ಕೆಟ್ಟ ವ್ಯವಸ್ಥೆಯ ಸಹವಾಸವೇ ಬೇಡ ಎಂದು ದೇಶ ತೊರೆಯಲು ತೀರ್ಮಾನಿಸಿದರೆ, ಭವಿಷ್ಯದಲ್ಲಿ ನಮ್ಮ
ಆರೋಗ್ಯ ವ್ಯವಸ್ಥೆಯ ಗತಿಯೇನು?
11.ಈಗಾಗಲೇ ಸರ್ಕಾರವು ಜಾರಿಗೆ ತಂದಿರುವ ಯಶಸ್ವಿನಿ, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್, ಬಾಲ ಸಂಜೀವಿನಿ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ ಮುಂತಾದ ಕ್ರಮಗಳಲ್ಲಿ, ಖಾಸಗೀ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಚಿಕಿತ್ಸೆ ನೀಡುತ್ತಿಲ್ಲವೇ? ಇದು ಸಾರ್ವಜನಿಕರ
ಬಗೆಗೆ ಖಾಸಗೀ ಆಸ್ಪತ್ರೆಗಳಿಗಿರುವ ಬದ್ಧತೆಯಲ್ಲವೇ?

ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಿ
12.ಖಾಸಗೀ ಆರೋಗ್ಯ ವ್ಯವಸ್ಥೆಯನ್ನು ದೂರುವ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಖಾಸಗೀ ಸಹಭಾಗಿತ್ವದ ಡಯಾಗ್ನೋಸ್ಟಿಕ್ ಸೆಂಟರ್ ಗಳೆಷ್ಟು? ಡಯಾಲಿಸಿಸ್ ಯುನಿಟ್ಗಳೆಷ್ಟು? ಅವುಗಳಿಗೆ ನಿಗದಿಪಡಿಸಿದ ಮಾನದಂಡಗಳೇನು ಮತ್ತು ದರವೆಷ್ಟು ಎನ್ನುವುದನ್ನು
ಬಹಿರಂಗಪಡಿಸಬೇಕು.
13. ತನ್ನ ನ್ಯೂನತೆಗಳನ್ನು ಮುಚ್ಚಿಟ್ಟುಕೊಳ್ಳಲು, ಶೇಕಡ 80ಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗೀ ಆಸ್ಪತ್ರೆಗಳನ್ನು ದೂರುವುದರ ಬದಲು, ಸರ್ಕಾರಿ ವ್ಯವಸ್ಥೆಯನ್ನು ಬಲಪಡಿಸಲಿ. ಸರ್ಕಾರಿ ವ್ಯವಸ್ಥೆ ಬಲಪಟ್ಟರೆ, ಖಾಸಗೀ ವ್ಯವಸ್ಥೆ ತಾನಾಗಿಯೇ ಬಲಹೀನವಾಗುತ್ತದೆ.
14. ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರುವುದಿಲ್ಲ ಎಂದು ದೂರುವ ಸರ್ಕಾರ, ಏಕೆ ಬರುತ್ತಿಲ್ಲ ಎಂದು ಎಂದಾದರೂ ಆತ್ಮಾವಲೋಕನ ಮಾಡಿಕೊಂಡಿದೆಯೇ?












Click it and Unblock the Notifications