ವೈದ್ಯರ ಮುಷ್ಕರ, ಸರ್ಕಾರದ ಹಠ, ರೋಗಿಗಳ ಪರದಾಟ
ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಬೇಡಿಕೆ ಇಟ್ಟಿರುವುದೇಕೆ? ಬೇಡಿಕೆ ಈಡೇರದಿದ್ದರೆ ವೃತ್ತಿಯನ್ನೇ ತೊರೆದು ಪ್ರತಿಭಟಿಸುವ ಎಚ್ಚರಿಕೆ ನೀಡುತ್ತಿರುವುದೇಕೆ? ವೈದ್ಯರ ಬೇಡಿಕೆಗಳು, ಮುಷ್ಕರ, ಸರ್ಕಾರದ ಹಠ, ರೋಗಿಗಳ ಪರದಾಟದ ಬಗ್ಗೆ ಸಂಪೂರ್ಣ ಚಿತ್ರಣ ಇಲ್ಲಿದೆ...
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಖಾಸಗಿ ಆಸ್ಪತ್ರೆಗಳು ಒಂದು ದಿನದ ಮುಷ್ಕರವನ್ನು ಹಮ್ಮಿಕೊಂಡಿದ್ದು, ಶುಕ್ರವಾರ ಬೆಳಗ್ಗೆ 8 ರಿಂದ ರಾತ್ರಿ 8 ರ ತನಕ ಸೇವೆಗಳು ಸ್ಥಗಿತಗೊಂಡಿವೆ. ಕೆಲವೆಡೆ ನಾಳೆ ಬೆಳಗ್ಗೆ 8ರ ತನಕ ಸೇವೆಗಳು ಇರುವುದಿಲ್ಲ.
ಕರ್ನಾಟಕದಲ್ಲಿ ಶೇ 70ರಷ್ಟು ಹೊರರೋಗಿಗಳ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳು ನಿರ್ವಹಿಸುತ್ತಿವೆ. ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲಾಗಿವೆ.
ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ, ಬೇಡಿಕೆಗಳು ಈಡೇರದಿದ್ದರೆ ವೃತ್ತಿಯನ್ನು ತೊರೆಯುವುದಾಗಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ವೈದ್ಯರ ಬೇಡಿಕೆಗಳೇನು? ಮುಂದೆ ಓದಿ...

ಡಾ. ರವೀಂದ್ರ ಅವರ ಹೇಳಿಕೆ
ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಆಗ್ರಹಿಸಿರುವುದು, ಬೇಡಿಕೆಗಳು ಈಡೇರದಿದ್ದರೆ ವೃತ್ತಿಯನ್ನು ತೊರೆಯುವುದಾಗಿ ಸರ್ಕಾರಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಕರ್ನಾಟಕ ಘಟಕದ ಚುನಾಯಿತ ಅಧ್ಯಕ್ಷ ಡಾ. ಎಚ್. ಎನ್ ರವೀಂದ್ರ ಅವರು ಸವಾಲು ಹಾಕಿದ್ದಾರೆ. ಕಿಮ್ಸ್, ರಕ್ತನಿಧಿ ಸಂಸ್ಥೆಗಳು ಕೂಡಾ ಡಾ. ರವೀಂದ್ರ ಅವರ ಬೆಂಬಲಕ್ಕೆ ನಿಂತಿವೆ.

ಯಾವೆಲ್ಲ ವೈದ್ಯಕೀಯ ಸಂಸ್ಥೆಗಳ ಬೆಂಬಲ
ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳು, ಕರ್ನಾಟಕ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ವಿವಿಧ ತಜ್ಞ ವೈದ್ಯರ ಸಂಘಟನೆಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್, ರಕ್ತನಿಧಿಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ, ಒಳ ರೋಗಿಗಳ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಆದರೆ, ಹೊರರೋಗಿಗಳ ವಿಭಾಗ, ತಜ್ಞ ವೈದ್ಯರೊಡನೆ ಸಂದರ್ಶನ ಇಂದು ಸಾಧ್ಯವಿಲ್ಲ

ಮಸೂದೆಯಲ್ಲಿ ಏನಿದೆ?
* ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ವಿಧಿಸುವಂತಿಲ್ಲ. ದರ ಪಟ್ಟಿ ಫಲಕ ಕಡ್ಡಾಯ.
* ಹೆಚ್ಚು ಬಿಲ್ ಮಾಡಿದರೆ 25 ಸಾವಿರ ರು ಗಳಿಂದ 5 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ.
* ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳಿನಿಂದ 3 ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು.
* ರೋಗಿ ಮೃತಪಟ್ಟರೆ ದೇಹ ಹಸ್ತಾಂತರ ಮಾಡುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ.
* ವೈದ್ಯಕೀಯ ಸಂಸ್ಥೆಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಇವೆಲ್ಲ ತಿದ್ದುಪಡಿಗೆ ಖಾಸಗಿ ಆಸ್ಪತ್ರೆ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ : ಡಾ. ದೇವಿಶೆಟ್ಟಿ.

ಸರ್ಕಾರಿ ವೈದ್ಯರ ಕಡ್ಡಾಯ ಹಾಜರಿ
ಖಾಸಗಿ ಆಸ್ಪತ್ರೆ ವೈದ್ಯರು ಸೇವೆ ಸ್ಥಗಿತಗೊಳಿಸಲಿರುವುದರಿಂದ ಜನರಿಗೆ ತೊಂದರೆ ಆಗದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ವೈದ್ಯರು ಮತ್ತು ವೈದ್ಯಕೀಯ ಸಹಾಯಕರು (ಶುಕ್ರವಾರ) ರಜೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕಲ್ಯಾಣ ಸೇವೆಗಳ ಆಯುಕ್ತ ಮನೋಜ್ಕುಮಾರ್ ಮೀನಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ
'ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಈಗಾಗಲೇ ಒಂದು ಬಾರಿ ಚರ್ಚೆ ನಡೆಸಲಾಗಿದೆ. ಅವರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸುತ್ತದೆ. ಇದೆಲ್ಲವೂ ಸದನದಲ್ಲಿ ನಿರ್ಧಾರ ಆಗಬೇಕಿದೆ. ಈ ಸಮಿತಿ ಅನೇಕ ಸಭೆಗಳನ್ನು ನಡೆಸಿ ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ.ಮಸೂದೆ ಪರಿಷ್ಕರಿಸಿ, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಮಾತುಕತೆಗೆ ಕರೆದಿಲ್ಲ
ಮುಖ್ಯಮಂತ್ರಿ ಸಂಘದ ಪದಾಧಿಕಾರಿ ಒಬ್ಬರನ್ನು ಕರೆದಿದ್ದರು. ಅದು ಅಧಿಕೃತ ಆಹ್ವಾನ ಆಗಿಲ್ಲದ ಕಾರಣ ಅವರು ಹೋಗಲಿಲ್ಲ. ಸರ್ಕಾರ ಕರೆದರೆ ಸಂಘದ ಎಲ್ಲ ಪದಾಧಿಕಾರಿಗಳೂ ಹೋಗುತ್ತೇವೆ.ರಾಜ್ಯ ಸರ್ಕಾರ ಮಾತುಕತೆಗೆ ಕರೆದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಗೌರವ ಕಾರ್ಯದರ್ಶಿ ಡಾ. ಬಿ.ವೀರಣ್ಣ ಹೇಳಿದ್ದಾರೆ.

ರೋಗಿಗಳ ಬೆಂಬಲಕ್ಕೆ ಜನಾರೋಗ್ಯ ಚಳವಳಿ
ಕರ್ನಾಟಕ ಜನಾರೋಗ್ಯ ಚಳವಳಿ ಸಂಸ್ಥೆಯ ಅಖಿಲಾ ವಾಸನ್ ಅವರು ಮಾತನಾಡಿ, ಸೇವೆ ಮಾಡುವುದಾಗಿ ಪ್ರತಿಜ್ಞೆ ತೆಗೆದುಕೊಂಡ ವೈದ್ಯರು ಪ್ರತಿಭಟನೆ ಹೂಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಪ್ರತಿಭಟನೆ ಮಾಡುವುದು ಹಕ್ಕು ನಿಜ, ಆದರೆ, ಎಲ್ಲಕ್ಕೂ ಸರಿಯಾದ ಕಾರಣ ಇರಬೇಕು, ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲು ಪರದಾಡುವ ರೋಗಿಗಳ ಬೆಂಬಲಕ್ಕೆ ಯಾರು ನಿಲ್ಲಬೇಕು. ಕಾನೂನೂ ಎಲ್ಲರಿಗೂ ಒಂದೇ, ಮಸೂದೆ ತಿದ್ದುಪಡಿ ಬಗ್ಗೆ ವಿರೋಧವಿದ್ದರೆ ಮಾತುಕತೆ ನಡೆಸಲಿ ಎಂದರು.












Click it and Unblock the Notifications