ಹಿರಿಯೂರು; ಕೋಡಿ ಬಿದ್ದ ಧರ್ಮಪುರ ಕೆರೆ, ಡಿಜೆ ಸೌಂಡ್ಗೆ ಹೆಜ್ಜೆ ಹಾಕಿದ ಗ್ರಾಮಸ್ಥರು
ಚಿತ್ರದುರ್ಗ, ಅಕ್ಟೋಬರ್, 20: ಕಳೆದ 40 ವರ್ಷಗಳ ನಂತರ ಮೊದಲನೇ ಬಾರಿಗೆ ಹಿರಿಯೂರು ತಾಲೂಕಿನ ಐತಿಹಾಸಿಕ ಧರ್ಮಪುರ ಕೆರೆ ಕೋಡಿ ಬಿದ್ದ ಖುಷಿಯಲ್ಲಿ ಗ್ರಾಮಸ್ಥರು ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಕೆರೆ ಕೋಡಿ ನೀರು ಹರಿಯುತ್ತಿದ್ದಂತೆ ಸಾವಿರಾರು ಜನ ಕೆರೆ ಬಳಿ ಜಮಾಯಿಸಿದ್ದರು. ಇನ್ನು ಗ್ರಾಮದ ಯುವಕರು ಟ್ರಾಕ್ಟರ್ನಲ್ಲಿ ಬೃಹತ್ ಡಿಜೆಯನ್ನು ಕೆರೆ ಬಳಿ ತಂದು ನಿಲ್ಲಿಸಿದ್ದರು. ಕನ್ನಡ ಹಾಡು ಸೇರಿದಂತೆ ಮತ್ತಿತರರ ಭಾಷೆಗಳ ಹಾಡುಗಳಿಗೆ ಜನರು ಹುಚ್ಚೆದ್ದು ಕುಣಿದು ಸಂಭ್ರಸಿದರು. ಮತ್ತೊಂದು ಕಡೆ ಯುವಕರು ಕೆರೆಯಲ್ಲಿ ಈಜಾಡಿ ಸಂಭ್ರಮಿಸಿದರು.
ಹಿರಿಯೂರು: 40 ವರ್ಷಗಳ ಬಳಿಕ ಕೋಡಿ ಬಿದ್ದ ಧರ್ಮಪುರ ಕೆರೆ
ಇತ್ತ ಯುವಕರು, ಯುವತಿಯರು, ಮಹಿಳೆಯರು ಸೇರಿದಂತೆ ಅಲ್ಲಿದ್ದವರೆಲ್ಲಾ ನೀರಿನಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಇನ್ನು ಕೋಡಿ ದೃಶ್ಯ ಕಣ್ತುಂಬಿಕೊಳ್ಳಲು ಜನರು ಸಾಗರೋಪಾದಿಯಲ್ಲಿ ಬಂದು ಸೇರುತ್ತಲೇ ಇದ್ದಾರೆ. ಇದರ ಜೊತೆಗೆ ಅಕ್ಕ ಪಕ್ಕದ ಗ್ರಾಮಸ್ಥರು ಆಟೋ, ಕಾರು, ಬೈಕ್ಗಳ ಮೂಲಕ ಬಂದು ಕೋಡಿ ವೀಕ್ಷಣೆ ಮಾಡಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಧರ್ಮಪುರ ಕೆರೆಯು ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆಯಾಗಿದೆ. ಈ ಕೆರೆ 1982ರಲ್ಲಿ ಭರ್ತಿಯಾಗಿ, ಕೋಡಿ ಬಿದ್ದಿತ್ತು. ಅಲ್ಲದೇ ಸತತ ಎರಡು ತಿಂಗಳುಗಳ ಕಾಲ ಧರ್ಮಪುರ ಕೆರೆಯ ಕೋಡಿ ನೀರು ಹರಿದಿತ್ತು.
ಶಾಲೆ-ಕಾಲೇಜು ವಿದ್ಯರ್ಥಿಗಳಿಗೆ ಆತಂಕ
ಹೀಗೆ ಕೆರೆ ಕೋಡಿ ನೀರು ಹರಿದ ಕಾರಣ, ಕೆರೆಯ ಕೆಳಭಾಗದಲ್ಲಿನ ಹಲವು ಹಳ್ಳಿಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಅಲ್ಲದೇ ರಸ್ತೆಯಲ್ಲಿ ನೀರು ಹರಿದ ಹಿನ್ನೆಲೆ ಹಲಗಲದ್ದಿ, ಮದ್ದಿಹಳ್ಳಿ, ಪಿಡಿ ಕೋಟೆ ಗ್ರಾಮದ ವಿದ್ಯಾರ್ಥಿಗಳು ಹಲವು ತಿಂಗಳುಗಟ್ಟಲೇ ಶಾಲಾ-ಕಾಲೇಜಿಗೆ ತೆರಳಲು ಆಗದ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಜಗಳೂರು: 15 ವರ್ಷಗಳ ಬಳಿಕ ಕೋಡಿಬಿದ್ದ ಇತಿಹಾಸ ಪ್ರಸಿದ್ಧ ಸಂಗೇನಹಳ್ಳಿ ಕೆರೆ, ತಲುಪುವ ಮಾರ್ಗ
ಸಂಗ್ರಹವಾಗುವ ನೀರಿನ ಪ್ರಮಾಣ
ಚಿತ್ರದುರ್ಗ ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ ಇದಾಗಿದ್ದು, ನೊಳಂಬರ ಕಾಲದಲ್ಲಿ ಈ ಕೆರೆ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಇದೆ. ಕೆರೆಯ ನಿರೀನ ಸಾಮರ್ಥ್ಯ 0.3 ಟಿಎಂಸಿ ಹೊಂದಿದೆ. ಸುಮಾರು 700 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 360 ದಶಲಕ್ಷ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಇದು 1,600 ಮೀಟರ್ ಉದ್ದವಿದೆ. ಈ ಕೆರೆಯು ಅಕ್ಕಪಕ್ಕದ ಹಳ್ಳಿಗಳ ಸುಮಾರು 900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ಆವರಿಸಿಕೊಂಡಿದೆ. ಕೆರೆಯಲ್ಲಿ 30 ಕಿಲೋ ಮೀಟರ್ ದೂರದವರೆಗೂ ನೀರಿನ ಅಂತರ್ಜಲ ವೃದ್ಧಿಯಾಗಲಿದೆ.
ಡಿಜೆ ಸೌಂಡ್ಗೆ ಹೆಜ್ಜೆ ಹಾಕಿದ ನಾಯಕರು
40 ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹಲವಾರು ಸ್ಥಳೀಯ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಮಾಜಿ ಸಚಿವ ಡಿ. ಸುಧಾಕರ್, ಜೆಡಿಎಸ್ ಆಕಾಂಕ್ಷಿ ರವೀಂದ್ರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಯಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ ಸೇರಿದಂತೆ ಸಾವಿರಾರು ಜನ ಧರ್ಮಪುರ ಕೆರೆ ಕೋಡಿಯನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಮಾಜಿ ಸಚಿವ ಡಿ.ಸುಧಾಕರ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ.
ಮನೆ ಕಳೆದುಕೊಂಡ ಜನರ ಆತಂಕ
ಈಗಾಗಲೇ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದ ಕಾರಣ ಸಣ್ಣಪುಟ್ಟ ಕೆರೆಗಳ ಕೋಡಿ ಬಿದ್ದಿದ್ದು, ಜನರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಭಾರಿ ಮಳೆ ಆಗುತ್ತಿರುವುದರಿಂದ ಒಂದೆಡೆ ರೈತರು ಸಂತೋಷವನ್ನು ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸಾಕಷ್ಟು ಅನಾಹುತಗಳು ಸಂಭವಿಸಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ನಿಂತರೂ ಜನರಿಗೆ ಸಂಕಷ್ಟಗಳು ತಪ್ಪದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಮನೆಗಳನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ ಅಂತಲೂ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ನದಿ ತೀರದ ಪ್ರದೇಶದಲ್ಲಿರುವ ಕುಟುಂಬಗಳ ಪಾಡು ಹೇಳತೀರದಾಗಿದೆ.