ಸಿದ್ದರಾಮಯ್ಯ ಸಚಿವ ಸ್ಥಾನ ನೀಡದೆ ಮೋಸ ಮಾಡಿದರು; ಮೋಟಮ್ಮ
ಚಿಕ್ಕಮಗಳೂರು, ಜೂನ್ 15 : "ನಮ್ಮಂತಹರವರು ಚುನಾವಣೆ ಎದುರಿಸುವುದು ಕಷ್ಟ, ಕಳೆದ ಚುನಾವಣೆಯಲ್ಲಿ ಸಾಕಷ್ಟು ನೊಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ನನ್ನ ಮಗಳಿಗೆ ಟಿಕೆಟ್ ಕೊಡಲು ಕೇಳಿದ್ದೇನೆ" ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, "ಮೂಡಿಗೆರೆ ಕ್ಷೇತ್ರದ ಟಿಕೆಟ್ ಅನ್ನು ಮಗಳು ನಯನಗೆ ನೀಡುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸುತ್ತೇನೆ. ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೇನೆ" ಎಂದರು.
'ಒಂದು ದೇಶ- ಒಂದು ಭಾರತ' ಕೇಂದ್ರ ಸರ್ಕಾರದ ನಡೆ ಬಗ್ಗೆ ಎಚ್ಡಿಕೆ ಕಿಡಿ
"ಈಗ ಚುನಾವಣೆಯಲ್ಲಿ ನಿಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಅಕ್ಕಾಗಿಯೇ ಮಗಳಿಗೆ ಟಿಕೆಟ್ ಕೊಡುವಂತೆ ಕೇಳಿಕೊಳ್ಳುತ್ತೇನೆ. ಒಂದು ವೇಳೆ ಟಿಕೆಟ್ ದೊರೆಯದಿದ್ದರೆ, ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಶ್ರಮಿಸುವೆ" ಎಂದು ಮೋಟಮ್ಮ ಸ್ಪಷ್ಟಪಡಿಸಿದರು.
ಬಿಜೆಪಿಗೆ ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಟ್ಟ ವೃತ್ತಾಂತ ಹೇಳಿದ ಸಿದ್ದು!
ಕಾಂಗ್ರೆಸ್ ಜಿಲ್ಲಾ ವಕ್ತಾರ ಹಿರೇಮಗಳೂರು ಟಿಕೆಟ್ ಆಕಾಂಕ್ಷಿ ಎಂದು ಹೇಳಿದಾಗ ಮೋಟಮ್ಮ, "ಅರ್ಜಿ ಹಾಕಲಿ ಅದಕ್ಕೆ ವಿರೋಧವಿಲ್ಲ, ಯಾರ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದು ಆಗೇ ಆಗುತ್ತದೆ" ಎಂದರು.
ನನಗೆ ಆರೋಗ್ಯ ಸಮಸ್ಯೆ ಇದೆ
"ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ, ಹಾಗಾಗಿ ಕ್ಷೇತ್ರದಾದ್ಯಂತ ಓಡಾಡಲು ಸಾಧ್ಯವಿಲ್ಲ. ನನಗೆ ಚುನಾವಣೆ ದುಸ್ಥರ ಎನಿಸುತ್ತಿದೆ. ಕಳೆದ ಚುನಾವಣೆಯಲ್ಲಿ ನಾನು ನೊಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಡಾಲರ್ಸ್ಕಾಲೋನಿಯಲ್ಲಿರುವ ಮನೆಯನ್ನು ಲೀಸ್ಗೆ ನೀಡಿ ಮೂರು ಕೊಠಡಿ ಹೊಂದಿರುವ ಪ್ಲಾಟ್ನಲ್ಲಿ ಬಾಡಿಗೆ ತೆಗೆದುಕೊಂಡು ವಾಸಿಸುತ್ತಿದ್ದೇನೆಂದು ಆರೋಪಿಸಿದರು. ಇದನ್ನೆಲ್ಲ ನೆನೆದಾಗ ನೋವು, ಸಂಕಟವಾಗುತ್ತದೆ" ಎಂದು ಮೋಟಮ್ಮ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆಲುವಿಗೆ ಶ್ರಮಿಸುವೆ
"ನಾನು 8 ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ 2018ರ ಚುನಾವಣೆ ತುಂಬಾ ದುಸ್ತರವಾಗಿತ್ತು. ಈಗ ಚುನಾವಣೆಗೆ ಸ್ಪರ್ಧಿಸುವ ಆಸೆಯಿಲ್ಲ. ಆದರೆ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲು ದುಡಿಯುತ್ತೇನೆ. ನಾನು ಮಹಿಳಾ ಮತ್ತು ಮಕ್ಕಳ ಸಚಿವೆಯಾದಾಗ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಳಾಗಲು ಸಾಕಷ್ಟು ದುಡಿದಿದ್ದೇನೆ. ಅದನ್ನೆಲ್ಲಾ ಮಹಿಳಾ ಮತದಾರರಿಗೆ ಮನವರಿಕೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಲು ಕೋರುತ್ತೇನೆ" ಎಂದರು.
ಎಂ. ಪಿ. ಕುಮಾರಸ್ವಾಮಿ ಕಾಂಗ್ರೆಸ್ ಸೇರಲು ವಿರೋಧ
"ಮೂಡಿಗೆರೆಯ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಯನ್ನು ನಾನು ವಿರೋಧಿಸುತ್ತೇನೆ. ಆತನ ಬದಲೂ ಬೂತ್ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಟಿಕೆಟ್ ಕೊಡಿ ಎಂದು ಹೇಳುತ್ತೇನೆ. ಶಾಸಕರ ಕಾರ್ಯವೈಖರಿ ಸಿದ್ಧರಾಮಯ್ಯಗೆ ತಿಳಿದಿದೆ. 40 ಪರ್ಸೆಂಟ್ ತೆಗೆದುಕೊಳ್ಳುವ ಪಕ್ಷದಿಂದ ಬರುವವರರನ್ನು ಅವರು ಒಪ್ಪಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ" ಎಂದು ಮೋಟಮ್ಮ ಹೇಳಿದರು.
"ನನ್ನ ಮಗಳಿಗೆ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ, ಪಕ್ಷಕ್ಕೆ ದುಡಿಯುವವರಿಗೆ ಕೊಡಲಿ" ಎಂದರು. ಮೂಡಿಗೆರೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, "ಅದಕ್ಕೇನು ಗೊಬ್ಬರ, ನೀರು ಹಾಕಿ ಬೆಳೆಸಬೇಕಾ?, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಿ ಮುಂದೆ ಬಂದಾಗ ಮಾತ್ರ ನಾಯಕರಾಗಲು ಸಾಧ್ಯ" ಎಂದು ಹೇಳಿದರು.
ಸಚಿವ ಸ್ಥಾನ ನೀಡದಿರುವುದಕ್ಕೆ ಅಸಮಧಾನ
ದಲಿತ ಮಹಿಳಾ ರಾಜಕಾರಣಿಯಾಗಿ ರಾಜ್ಯಭಾರ ಮಾಡಿದ್ದ ಮೋಟಮ್ಮ 'ಆತ್ಮಕಥನ ಬಿದಿರೆ ನೀನ್ಯಾರಿಗಲ್ಲದವಳು' ಪುಸ್ತಕದಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸಿರುವ ಪ್ರಶ್ನೆಗೆ ಉತ್ತರಿಸಿ, "ಮನಸ್ಸಿಗೆ ಹೊಳೆದಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಟೀಕೆ ಮಾಡಿಲ್ಲ. ಸಿದ್ದರಾಮಯ್ಯ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾಗ ಅವರ ಮನೆಗೆ ಹೋಗಿ ಧೈರ್ಯ ತುಂಬಿದ್ದೆ. ಆದರೆ ಪಕ್ಷ ಅಧಿಕಾರಕ್ಕೆ ಬಂದಾಗ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ, ಸಚಿವೆಯಾಗಿ, ಶಾಸಕರಾಗಿ, ಸಿಡಬ್ಲ್ಯೂಸಿ ಸದಸ್ಯೆಯಾಗಿ ನಿರ್ವಹಿಸಿದ ಕೆಲಸವನ್ನು ಗಮನಿಸಿಯೂ ಮುಖ್ಯಮಂತ್ರಿಯಾಗಿದ್ದಾಗ ಸಚಿವೆ ಸ್ಥಾನ ನೀಡದಿರುವುದಕ್ಕೆ ನನ್ನಲ್ಲಿರುವ ಅಸಮಧಾನವನ್ನು ಪುಸ್ತಕದಲ್ಲಿ ತೋಡಿಕೊಂಡಿದ್ದೇನೆ ಅಷ್ಟೆ" ಎಂದು ಹೇಳಿದರು.