ಲಂಚ ಬೇಡಿಕೆ: ಶೃಂಗೇರಿ ತಹಶೀಲ್ದಾರ ಅಂಬುಜಾ, ಗ್ರಾಮ ಲೆಕ್ಕಿಗ ಬಂಧನ
ಚಿಕ್ಕಮಗಳೂರು, ಜನವರಿ 6: ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಶೃಂಗೇರಿ ತಹಶೀಲ್ದಾರ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರು ಎಸಿಬಿ ಬಲೆಗೆ ಬಿದ್ದಿದ್ದು, ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಂತರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಶೃಂಗೇರಿಯ ಕಾವಡಿ ವಾಸಿಯಾದ ಸಂಜಯ್ ಅವರಿಗೆ ಹಕ್ಕುಪತ್ರ ಮಾಡಿಕೊಡಲು 60*40 ಜಾಗಕ್ಕೆ 60 ಸಾವಿರ ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಲೆಗೆ ಬಿದ್ದಿದ್ದಾರೆ.
ಶೃಂಗೇರಿ ತಾಲ್ಲೂಕಿನ ಕಾವಡಿ ಗ್ರಾಮದ ವಾಸಿಯಾದ ಸಂಜಯ್ ಕುಮಾರ್ ಎಂಬುವವರು 2017ನೇ ಸಾಲಿನಲ್ಲಿ ಬೆಳಂದೂರು ಗ್ರಾಮದ ಕುಂದ್ರಿಯಲ್ಲಿ 18 ಗುಂಟೆ ಜಮೀನು ಖರೀದಿಸಿ ಜಮೀನಿನ ಪಕ್ಕದಲ್ಲಿ 60 X 60 ಅಳತೆಯ ವಾಸದ ಮನೆಯನ್ನು ನಿರ್ಮಿಸಿದ್ದು, ಮನೆಯ ಹಕ್ಕು ಪತ್ರಕ್ಕಾಗಿ ನಮೂನೆ-94 (ಸಿ) ಅಡಿಯಲ್ಲಿ ಶೃಂಗೇರಿ ತಾಲ್ಲೂಕು ಕಚೇರಿಗೆ 2018 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮನೆಗೆ ಸಂಬಂಧಪಟ್ಟ ನಕಾರ ಹಾಗೂ ಇತರೆ ದಾಖಲೆಗಳಿಗೆ ಸಂಬಂಧಿಸಿದಂತೆ ಶೃಂಗೇರಿ ತಹಶೀಲ್ದಾರವರನ್ನು ಭೇಟಿ ಮಾಡಿದಾಗ, ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ.
ಈ ಸಂಬಂಧ ಜ.3ರಂದು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರನ್ನು ಭೇಟಿ ಮಾಡಿ ಮನೆಯ ಹಕ್ಕು ಪತ್ರವನ್ನು ಮಾಡಿಕೊಡುವಂತೆ ಕೇಳಿದಾಗ, ಅವರು ಹಕ್ಕುಪತ್ರ ಮಾಡಿಕೊಡಲು 60 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸಿಬಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಮಧ್ಯಾಹ್ನ ಶೃಂಗೇರಿ ತಾಲೂಕು ಕಚೇರಿಗೆ ಸಂಜಯ್ ಭೇಟಿ ನೀಡಿ ತಹಶೀಲ್ದಾರನ್ನು ಸಂಪರ್ಕಿಸಿ ಮನೆಯ ಹಕ್ಕು ಪತ್ರ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ 60 ಸಾವಿರ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ತಹಶೀಲ್ದಾರ ಗ್ರಾಮ ಲೆಕ್ಕಾಧಿಕಾರಿಯಿಂದ ರೆಕಾರ್ಡ್ಸ್ ರೆಡಿ ಮಾಡಿಕೊಂಡು ಬರುವಂತೆ ಹೇಳಿರುತ್ತಾರೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರವರನ್ನು ಭೇಟಿ ಮಾಡಿ ಮನೆಯ ಹಕ್ಕು ಪತ್ರದ ಬಗ್ಗೆ ಕೇಳಿದಾಗ, ಒಟ್ಟು 60 ಸಾವಿರ ಆಗುತ್ತದೆ ಮೊದಲನೇ ಕಂತು 30 ಸಾವಿರದ ಜೊತೆಗೆ ದಾಖಲೆ ನೀಡುವಂತೆ ತಿಳಿಸಿದ್ದಾರೆ.
ಸಂಜಯ್ ಲಂಚದ ಹಣ ನೀಡಿ ಖಾತೆ ಮಾಡಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಎಸಿಬಿ ಪೊಲೀಸ್ ಠಾಣೆ, ಚಿಕ್ಕಮಗಳೂರಿಗೆ ದೂರನ್ನು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಇಂದು ಶೃಂಗೇರಿಯ ಪಟ್ಟಣದದ ಪ್ರವಾಸಿ ಮಂದಿರದಲ್ಲಿ 25 ಸಾವಿರ ರೂಪಾಯಿಯನ್ನು ಗ್ರಾಮ ಲೆಕ್ಕಾಧಿಕಾರಿ ಸ್ವೀಕರಿಸುವ ಸಂದರ್ಭದಲ್ಲಿ ಡಿವೈಎಸ್ಪಿ ಸಿ.ಆರ್. ಗೀತಾ ನೇತೃತ್ವದಲ್ಲಿ ತನಿಖಾಧಿಕಾರಿ ಅನಿಲ್ ಮಂಜುನಾಥ್ ಪಿಐ, ಮತ್ತು ಸಿಬ್ಬಂದಿಗಳು, ಭ್ರಷ್ಟಾಚಾರ ನಿಗ್ರಹ ದಳ ಎ.ಜಿ ರಾಥೋಡ್ ರವರುಗಳು ನಡೆಸಿದ ಕಾರ್ಯಾಚರಣೆಯ ಯಶಸ್ವಿಯಾಗಿದ್ದಾರೆ.
ಮೊದಲನೇ ಆಪಾದಿತರಾದ ಶೃಂಗೇರಿ ತಹಶೀಲ್ದಾರ ಅಂಬುಜಾ ಹಾಗೂ ಎರಡನೇ ಆಪಾದಿತರಾದ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಸಿಬಿ ಡಿವೈಎಸ್ಪಿ ಸಿ.ಆತ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
Recommended Video