"ಜಮೀರ್ ನಿಮಗೆ ಕಾನೂನು ಗೊತ್ತಾಗಲ್ಲ, ಸುಮ್ಮನಿರಿ"
ಬೆಂಗಳೂರು, ಸೆ 17: ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ಗೆ ವಿಧಾನಮಂಡಲದ ಅಧಿವೇಶನದ ವೇಳೆ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯ ಸಚಿವ ಜೆ.ಸಿ.ಮಾಧುಸ್ವಾಮಿ ಏಕವಚನದಲ್ಲಿ ಬುದ್ದಿಮಾತನ್ನು ಹೇಳಿ ಸುಮ್ಮನಾಗಿಸಿದ್ದಾರೆ.
ನಿಲುವಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧುಸ್ವಾಮಿ ಸದನದಲ್ಲಿ ಮಾತನಾಡುತ್ತಿದ್ದರು. ಆಗ, ಪದೇಪದೇ ಜಮೀರ್ ಅಹ್ಮದ್ ಎದ್ದುನಿಂತು ಅಡ್ಡಿ ಪಡಿಸುತ್ತಿದ್ದರು. ಆಗ, ಮಾಧುಸ್ವಾಮಿ, ಇದು ರೂಲ್ಸಿಗೆ ಸಂಬಂಧಿಸಿದ ಚರ್ಚೆ, ನಿನಗೆ ಅರ್ಥವಾಗುವುದಿಲ್ಲ ಎಂದು ಅವರನ್ನು ಸುಮ್ಮನಾಗಿಸಿದರು.
ಶಾಸಕರ ಮೌಲ್ಯ ಮಾಪನ; ಜಮೀರ್ ಅಹ್ಮದ್ ಖಾನ್ ಕಾರ್ಯ ವೈಖರಿಗೆ ಅಂಕ ನೀಡಿ
ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ, ನಿಯಯ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದು ಕೂತಿದ್ದರು. ಆ ವೇಳೆ, ಜಮೀರ್ ಅಹ್ಮದ್ ಕೂಡಾ ಪಕ್ಷದ ಪರವಾಗಿ ಧ್ವನಿ ಎತ್ತುತ್ತಿದ್ದರು.
ನಿಯಮಾವಳಿಯನ್ನು ಮುಂದಿಟ್ಟುಕೊಂಡು ಚರ್ಚೆಗೆ ಅವಕಾಶವಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟ ಪಡಿಸುತ್ತಿದ್ದರು. ಆದರೂ ಜಮೀರ್ ಅಹ್ಮದ್ ಪ್ರತಿರೋಧ ಹೆಚ್ಚಾಗಿತ್ತು. ಆಗ, "ಏ ಜಮೀರ್ ನಿನಗೆ ರೂಲ್ಸ್ ಏನಾದರೂ ಅರ್ಥವಾಗುತ್ತಾ, ನಿನಗೆ ಕಾನೂನು ಏನೂ ಅರ್ಥವಾಗುವುದಿಲ್ಲ, ಕೂತ್ಕೋ"ಎಂದು ಮಾಧುಸ್ವಾಮಿ ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.
ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, "ರೀ ಜಮೀರ್.. ಇದು ರೂಲ್ಸ್ ಮತ್ತು ಕಾನೂನಿಗೆ ಸಂಬಂಧಿಸಿದ ಚರ್ಚೆ, ನಿಮಗೆ ಅನ್ವವಿಸುವಂತದಲ್ಲ, ಕುಳಿತುಕೊಳ್ಳಿ"ಎಂದು ಅವರನ್ನು ಸುಮ್ಮನಾಗಿಸಿದರು.
ಇದಾದ ನಂತರ ಅತಿವೃಷ್ಟಿಯ ಚರ್ಚೆಯ ವೇಳೆ ಸಂಬಂಧಪಟ್ಟ ಸಚಿವರು ಸದನದಲ್ಲಿ ಹಾಜರು ಇರದೇ ಇದ್ದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಗರಂ ಆದರು. "ಕಂದಾಯ ಸಚಿವರು ಆರ್.ಅಶೋಕ್ ಅವರು ಇಲ್ಲೇ ಹೋಗಿದ್ದಾರೆ, ಸ್ವಲ್ಪ ಜ್ವರ ಇದೆ ಎಂದು ನನಗೆ ಹೇಳಿ ಹೊರಹೋಗಿದ್ದಾರೆ, ಬಂದು ಬಿಡುತ್ತಾರೆ" ಎಂದು ಸ್ಪೀಕರ್ ಹೇಳಿದಾಗ, "ನೋ..ನೋ.. ಶಾಸಕರು ಮಾತನಾಡುವಾಗ ಸಚಿವರು ಇರಲೇ ಬೇಕು"ಎಂದು ಸಿದ್ದರಾಮಯ್ಯ ಹಠ ಹಿಡಿದರು.