ಬಿಜೆಪಿಗೆ ಭಾರಿ ಹಿನ್ನಡೆ; ಇಂದೇ ಬಿಬಿಎಂಪಿ ಮೇಯರ್ ಆಯ್ಕೆ!
Recommended Video
ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡುವ ಕರ್ನಾಟಕ ಬಿಜೆಪಿ ಸರ್ಕಾರದ ಎಲ್ಲಾ ಪ್ರಯತ್ನ ವಿಫಲವಾಗಿದೆ. ನಿಗದಿಯಂತೆ ಇಂದು 11 ಗಂಟೆಗೆ ಚುನಾವಣೆ ನಡೆಯಲಿದೆ.
ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ವಿಚಾರ ಹೈಕೋರ್ಟ್ನಲ್ಲಿದೆ ಎಂದು ಬಿಜೆಪಿ ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನ ನಡೆಸಿತ್ತು. ಆದರೆ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಸೋಮವಾರ ಸಂಜೆ ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆ; ಮೇಯರ್ ಪಟ್ಟದ ಹೊಸ್ತಿಲಲ್ಲಿ ಬಿಜೆಪಿ
ಆದ್ದರಿಂದ, ನಿಗದಿಯಂತೆ ಅಕ್ಟೋಬರ್ 1ರ ಮಂಗಳವಾರ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ, ಬಿಜೆಪಿ ಮೇಯರ್ ಪಟ್ಟಕ್ಕಾಗಿ ಪೈಪೋಟಿಯನ್ನು ನಡೆಸಲಿದ್ದು, ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ.
ಬಿಬಿಎಂಪಿ ಮೇಯರ್ ಚುನಾವಣೆ; ಕಾಂಗ್ರೆಸ್ನಿಂದಲೂ ಅಭ್ಯರ್ಥಿ ಕಣಕ್ಕೆ
ಬಿಜೆಪಿ ಮೇಯರ್ ಪಟ್ಟಕ್ಕೆ ಜೋಗುಪಾಳ್ಯ ವಾರ್ಡ್ ಬಿಬಿಎಂಪಿ ಸದಸ್ಯ ಎಂ. ಗೌತಮ್ ಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಬಿಎಂಪಿ ಪ್ರತಿಪಕ್ಷ ನಾಯಕರಾದ ಪದ್ಮನಾಭ ರೆಡ್ಡಿಗೆ ಮೇಯರ್ ಪಟ್ಟ ಒಲಿದು ಬರಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್
ಮೇಯರ್ ಮತ್ತು ಉಪ ಮೇಯರ್ ಅಭ್ಯರ್ಥಿಗಳು
* ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದಿಂದ ಮೇಯರ್ ಪಟ್ಟಕ್ಕೆ ಕಾಂಗ್ರೆಸ್ನ ದತ್ತಾತ್ರೇಯ ವಾರ್ಡ್ನ ಆರ್. ಎಸ್. ಸತ್ಯನಾರಾಯಣ ಅಭ್ಯರ್ಥಿ.
* ಮೇಯರ್ ಪಟ್ಟಕ್ಕೆ ಬಿಜೆಪಿ ಜೋಗುಪಾಳ್ಯ ವಾರ್ಡ್ ಬಿಬಿಎಂಪಿ ಸದಸ್ಯ ಎಂ. ಗೌತಮ್ ಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಮ್ಯಾಜಿಕ್ ನಂಬರ್ 129
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ಸದಸ್ಯರಿದ್ದಾರೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ 5 ಸಂಸದರು, 9 ರಾಜ್ಯಸಭಾ ಸದಸ್ಯರು, 23 ಶಾಸಕರು, 22 ವಿಧಾನ ಪರಿಷತ್ ಸದಸ್ಯರು ಸೇರಿ 257 ಸದಸ್ಯರು ಮತದಾನ ಮಾಡಲಿದ್ದಾರೆ. ಮೇಯರ್ ಆಯ್ಕೆಗೆ ಬೇಕಾದ ಮ್ಯಾಜಿಕ್ ನಂಬರ್ 129.
ಬಿಜೆಪಿಗೆ ಮೇಯರ್ ಪಟ್ಟ?
ಬಿಜೆಪಿ ಈ ಬಾರಿ ಮೇಯರ್ ಪಟ್ಟ ಪಡೆಯಬೇಕು ಎಂಬ ಪಣ ತೊಟ್ಟಿದೆ. 101 ಬಿಜೆಪಿ ಸದಸ್ಯರು ಇದ್ದಾರೆ. 4 ಸಂಸದರು, 2 ರಾಜ್ಯಸಭಾ ಸದಸ್ಯರು, 11 ಶಾಸಕರು, 7 ವಿಧಾನ ಪರಿಷತ್ ಸದಸ್ಯರು ಸೇರಿ 125 ಸದಸ್ಯ ಬಲವನ್ನು ಬಿಜೆಪಿ ಹೊಂದಿದೆ.
ಮೈತ್ರಿಕೂಟ ಬಲವೆಷ್ಟು?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಈ ವರ್ಷವೂ ಮುಂದುವರೆಯಲಿದ್ದು ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ. ಕಾಂಗ್ರೆಸ್ 104 ಮತ್ತು ಜೆಡಿಎಸ್ 21 ಸದಸ್ಯ ಬಲವನ್ನು ಹೊಂದಿವೆ. 7 ಪಕ್ಷೇತರ ಸದಸ್ಯರು ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂದು ಕಾದು ನೋಡಬೇಕು.
ಕೈ ಕೊಡಲಿದ್ದಾರೆ ಸದಸ್ಯರು?
ಅನರ್ಹ ಶಾಸಕರಾದ ಎಸ್. ಟಿ. ಸೋಮಶೇಖರ್, ಮುನಿರತ್ನ, ಕೆ. ಗೋಪಾಲಯ್ಯ, ಬೈರತಿ ಬಸವರಾಜು ಬೆಂಬಲಿಗ ಬಿಬಿಎಂಪಿ ಸದಸ್ಯರು ಮೇಯರ್ ಚುನಾವಣೆಗೆ ಗೈರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸದಸ್ಯರು ಗೈರಾದರೆ ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದ್ದು, ಬಿಜೆಪಿಗೆ ಮೇಯರ್ ಪಟ್ಟ ಸಿಗಲಿದೆ.