ವಿಜಯನಗರದ ಭಾರತಿ ನರ್ಸಿಂಗ್ ಹೋಮ್ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ಮೇ. 25: ರೆಮ್ಡಿಸಿವಿರ್ ಚುಚ್ಚು ಮದ್ದನ್ನು ಬ್ಲಾಕ್ನಲ್ಲಿ ಮಾರಾಟ ಮಾಡಿದ ಹಾಗೂ ರೋಗಿಗೆ ಸರಿಯಾದ ಚಿಕಿತ್ಸೆ ನೀಡದ ಆರೋಪದ ಮೇಲೆ ವಿಜಯನಗರದ ಭಾರತಿ ಆಸ್ಪತ್ರೆ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಯಲ್ಲಿಯೇ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಹದಿನೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ರೋಗಿಯ ಸಂಬಂಧಿಕರು ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಾದ ಬಳಿಕ ರೋಗಿಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲಾಗಿತ್ತು.
ಕೋವಿಡ್ ಸೋಂಕಿತರ ಜೀವ ಉಳಿಸಬೇಕಿದ್ದ ಖಾಸಗಿ ಆಸ್ಪತ್ರೆಗಳೇ ದುಡ್ಡು ಮಾಡಲು ನಿಂತಂತೆ ಕಾಣುತ್ತಿವೆ. ರೆಮ್ಡಿಸಿವಿರ್ ಜೀವ ಅವಶ್ಯಕ ಚುಚ್ಚುಮದ್ದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಬಾರದು ಎಂಬ ನಿಯಮವಿದೆ. ಇದನ್ನು ಉಲ್ಲಂಘನೆ ಮಾಡಿ 64 ವರ್ಷದ ಕೋವಿಡ್ ಸೋಂಕಿತ ಮಹಿಳೆಗೆ ರೆಮ್ಡಿಸಿವಿರ್ ಚುಚ್ಚುಮದ್ದು ನೀಡಲು ಹದಿನೈದು ಸಾವಿರ ರೂ. ಬಿಲ್ ಆಗುವುದಾಗಿ ವಿಜಯನಗರದ ಭಾರತಿ ನರ್ಸಿಂಗ್ ಹೋಮ್ ವೈದ್ಯರು ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ರೋಗಿಯ ಸಂಬಂಧಿ ಔಷಧ ನಿಯಂತ್ರಕರಿಗೆ ದೂರು ನೀಡಿದ್ದಾರೆ.
ಆಸ್ಪತ್ರೆಗೆ ದಾವಿಸಿದ ಔಷಧ ನಿಯಂತ್ರಣಾಲಯ ಸಿಬ್ಬಂದಿ ಪರಿಶೀಲನೆ ನಡೆಸಿ ಅದರ ಬೆಲೆ ಎಷ್ಟು ಇದೆಯೋ ಅಷ್ಟಕ್ಕೆ ಮಾರಾಟ ಮಾಡಲು ಸೂಚನೆ ನೀಡಿದ್ದಾರೆ. ಔಷಧ ನಿಯಂತ್ರಕರನ್ನು ಕರೆಸಿದ ಸಿಟ್ಟಿಗೆ ಕೋವಿಡ್ ಸೋಂಕಿತ ರೋಗಿಯನ್ನು ಭಾರತಿ ನರ್ಸಿಂಗ್ ಹೋಮ್ ಸಿಬ್ಬಂದಿ ಹೊರ ಹಾಕಿದ್ದಾರೆ. ಈ ಕುರಿತು ಬಿಬಿಬಿಂಪಿ ವೈದ್ಯರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೆಮ್ಡಿಸಿವಿರ್ ಚುಚ್ಚು ಮದ್ದು ಬಳಕೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಪಸ್ವರ ಎದ್ದಿದೆ. ಕೊರೊನಾ ಸೋಂಕು ಲಕ್ಷಣ ಕಾಣಿಸುವ ಮೊದಲೇ ರೆಮ್ಡಿಸಿವಿರ್ ಔಷಧ ಬಳಕೆ ಮಾಡಬಹುದು. ಆದರೆ ಕೊರೊನಾವೈರಸ್ ಸೋಂಕು ಉಲ್ಪಣಿಸಿದ ಬಳಿಕ ರೆಮ್ಡಿಸಿವಿರ್ ನೀಡುವುದರಲ್ಲಿ ಅರ್ಥ ವಿಲ್ಲ ಎಂದು ವಿಜ್ಞಾನಿಗಳು, ಸಂಶೋಧಕರು, ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದರೂ, ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಲೇ ಇದೆ. ರೆಮ್ಡಿಸಿವಿರ್ ಬಗ್ಗೆ ಆರೋಗ್ಯ ಇಲಾಖೆ ಮತ್ತು ರಾಜ್ಯದ ಔಷಧ ನಿಯಂತ್ರಣಾಲಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು.
ಜನರಲ್ಲಿ ಜಾಗೃತಿ ಮೂಡಿಸದ ಕಾರಣ ಈಗಲೂ ಕೊರೊನಾ ಸೋಂಕಿನಿಂದ ಉಳಿಸಿಕೊಳ್ಳಲು ಇರುವ ಏಕೈಕ ಔಷಧಿ ರೆಮ್ಡಿಸಿವಿರ್ ಎಂಬ ಭಾವನೆ ಜನರಲ್ಲಿ ಬಿತ್ತಲಾಗಿದೆ. ಹೀಗಾಗಿ ಎರಡು ಸಾವಿರ ರೂ. ಮೌಲ್ಯದ ರೆಮ್ಡಿಸಿವಿರ್ ಔಷಧವನ್ನು ಸಾವಿರಾರು ರೂಪಾಯಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆರಳೆಣಿಕೆ ಮಂದಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ, ದಂಧೆಯನ್ನು ಮಾತ್ರ ನಿಯಂತ್ರಣ ಮಾಡಲಿಕ್ಕೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದೆ.