ವಿಕೃತ 'ರೇಪ್ ದಂಪತಿ' ಈಗ ಪೊಲೀಸ್ ಅತಿಥಿ
ಬೆಂಗಳೂರು: ಆ:16: ಅಮಾಯಕಳ ಮೇಲೆ ಗಂಡನಿಂದಲೇ ಅತ್ಯಾಚಾರ ಮಾಡಿಸಿದ ವಿಕೃತ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹೆಂಡತಿಯ ಮಾತಿಗೆ ಇಲ್ಲ ಎನ್ನಲಾರದೇ ಕೃತ್ಯ ನಡೆಸಿದ್ದ 'ಪತಿ ಪರಮೇಶ್ವರ' ಹೆಂಡತಿಯೊಂದಿಗೆ ಜೈಲು ಸೇರಿದ್ದಾನೆ.
ಬೆಂಗಳೂರಿನ ಜಾಲಹಳ್ಳಿಯ ಅಬ್ಬಿಗೆರೆ ಪಿಳ್ಳಣ್ಣ ಗಾರ್ಡನ್ನಲ್ಲಿ ನಡೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರವೆಸಗಿದ್ದ ಕೇಬಲ್ ಆಪರೇಟರ್ ದಿಲೀಪ್ ಹಾಗೂ ಅತ್ಯಾಚಾರಕ್ಕೆ 'ಸ್ಫೂರ್ತಿ' ನೀಡಿದ ಆಶಾಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳು ಹೇಳುವಂತೆ ಆತ್ಯಾಚಾರಕ್ಕೀಡಾದ ಮಹಿಳೆ ಹಾಗೂ ಆರೋಪಿ ಆಶಾ ಸ್ನೇಹಿತೆಯರಾಗಿದ್ದರು. ನನ್ನ ಪತಿಯೊಂದಿಗೆ ನೀನು ಲೈಂಗಿಕ ಕ್ರಿಯೆ ನಡೆಸಬೇಕು ಅದನ್ನು ನಾನು ಕಣ್ಣು ತುಂಬಾ ನೋಡಬೇಕು ಎಂಬ ವಿಕೃತ ಆಸೆಯನ್ನು ಆಶಾ ದೌರ್ಜನ್ಯಕ್ಕೊಳಗಾದ ಮಹಿಳೆ ಬಳಿ ಮುಂದಿಟ್ಟಿದ್ದಾಳೆ. ಇದಕ್ಕೆ ಪ್ರತಿರೋಧ ತೋರಿದ ಮಹಿಳೆಯನ್ನು ಜುಲೈ 28ರಂದು ಬಲತ್ಕಾರವಾಗಿ ಬೇಡ್ರೂಮ್ಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ.
ಈ ಸಂಗತಿಯನ್ನು ನಿನ್ನ ಪತಿಗೆ ತಿಳಿಸುತ್ತೇವೆ ಎಂದು ಹೆದರಿಸಿ ಆಗಸ್ಟ್ 11 ಮತ್ತೆ ಅತ್ಯಾಚಾರ ಎಸಗಲಾಗಿದೆ. ಘಟನೆಯಿಂದ ಮನನೊಂದ ಮಹಿಳೆ ಹೀನ ಕೃತ್ಯವನ್ನು ತನ್ನ ಪತಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಗಂಗಮ್ಮನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.