ತಲಾಖ್ ನೀಡಿದಾಕ್ಷಣ ಜೈಲು ಶಿಕ್ಷೆ ಸರಿಯಲ್ಲ: ನೌಹೀರಾ ಶೇಖ್
ಬೆಂಗಳೂರು : ತಲಾಖ್ ಎಂಬುದು ಧಾರ್ಮಿಕ ವಿಚಾರ. ನಿಂತಲ್ಲಿ , ಕೂತಲ್ಲಿ , ಹೆಂಡತಿ ನಿದ್ರಿಸುತ್ತಿರುವಾಗ, ಫೋನ್ ನಲ್ಲಿ, ವಾಟ್ಸಪ್ ನಲ್ಲಿ ತಲಾಖ್ ಮೂಲಕ ವಿಚ್ಚೇಧನ ನೀಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇಲ್ಲ ಆದರೆ ತಲಾಖ್ ನೀಡಿದಾಕ್ಷಣ ಜೈಲುಶಿಕ್ಷೆ ಸರಿಯಲ್ಲ ಎಂದು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ತಿಳಿಸಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಾಖೆ ನೀಡಿದಾಕ್ಷಣ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದರೆ ಗಂಡ-ಹೆಂಡತಿ ಮತ್ತೆ ಒಂದಾಗುವ ಸಾಧ್ಯಾಸಾಧ್ಯತೆಗಳೇ ತಪ್ಪಿದಂತಾಗುತ್ತದೆ. ಜತೆಗೆ, ತಲಾಖೆ ಹೇಳಿದವನ ಕುಟುಂಬ ಬೀದಿಪಾಲಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಕೋಮುವಾದಕ್ಕೆ ಬ್ರೇಕ್ ಅಭಿವೃದ್ಧಿಗೆ ಒತ್ತು: ನೌಹೀರಾ ಶೇಖ್
ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಲಾಭ ಇಲ್ಲವೇ ನಷ್ಟ ಉಂಟು ಮಾಡಲು ನಾವು ರಾಜಕೀಯ ಪಕ್ಷ ಸ್ಥಾಪಿಸಿಲ್ಲ, ಜನರಿಗೆ ಲಾಭ ತಂದು ಕೊಡುವುದು, ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು, ಉತ್ತಮ ಆಡಳಿತ ನೀಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇವೆ. ಸೋಲು-ಗೆಲುವು ನಮ್ಮ ಗುರಿ ಉದ್ದೇಶಗಳನ್ನು ಬದಲಿಸುವುದಿಲ್ಲ ಎಂದರು.
ಒಬ್ಬ ಉದ್ಯಮಿಯಾಗಿ ಏಕೆ ರಾಜಕೀಯಕ್ಕೆ ಬಂದಿದ್ದಾರೆ ? ಎಂಬ ಪ್ರಶ್ನೆ ಮೇಲಿಂದ ಮೇಲೆ ಕೇಳಿಬರುತ್ತಿದೆ. 25 ವರ್ಷ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿದ್ದಿದ್ದು, ಸ್ವತಃ ಮಹಿಳೆಯಾಗಿ ಬಹಳ ಹತ್ತಿರದಿಂದ ಮಹಿಳೆಯರ ಕಷ್ಟ-ನಷ್ಟಗಳನ್ನು ನೋಡಿದ್ದೇನೆ. ಬಾಲ್ಯದಿಂದಲೇ ಹೆಣ್ಣು ಮಕ್ಕಳು ದುರ್ಬಲರು ಎಂಬ ಭಾವನೆ ಕೌಟಂಬಿಕ ಪರಿಸರದಿಂದಲೇ ಮೂಡಿಸಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಹೆಣ್ಣು ಅಬಲೆ ಅಲ್ಲ. ಸಬಲೆ.
ಎಂಇಪಿ ಪಕ್ಷದ ಸ್ಥಾಪನೆಯ ಹಿಂದೆ ಯಾವ ದೊಡ್ಡ ನಾಯಕನ ಪಾತ್ರವೂ ಇಲ್ಲ. ನಮಗೆ ಯಾರಿಂದಲೂ ಹಣದ ನೆರವು ಹರಿದು ಬರುತ್ತಿಲ್ಲ. ಜನರ ವಂತಿಗೆ ಹಾಗೂ ತಮ್ಮ ಕೈಯಿಂದ ಹಣ ವ್ಯಯ ಮಾಡುತ್ತಿದ್ದೇನೆ. ಉತ್ತಮ ಹಿನ್ನೆಲೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜಕೀಯಕ್ಕೆ ಕರೆ ತರುವುದೇ ನಮ್ಮ ಮುಖ್ಯ ಉದ್ದೇಶ. ಪಕ್ಷದ ಅಭ್ಯರ್ಥಿಗಳೂ ಕೂಡ ಚುನಾವಣಾ ಆಯೋಗದ ಚೌಕಟ್ಟಿನಲ್ಲಿ ತಮ್ಮ ಖರ್ಚುವೆಚ್ಚಗಳನ್ನು ತಾವೇ ಭರಿಸುತ್ತಿದ್ದಾರೆ. ಯಾರಿಗೂ ನಾವು ಹಣ ಹಂಚುವುದಿಲ್ಲ. ಮತದಾರರಿಗೆ ಆಮಿಷವೊಡ್ಡಿ ಓಟು ಕೇಳುವುದು ನಮ್ಮ ನೀತಿಯಲ್ಲ.
ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕು. ಕಾನೂನುಗಳು ಬದಲಾಗಬೇಕು. ಉತ್ತಮ ಆಡಳಿತದ ಉದ್ದೇಶವನ್ನಿಟ್ಟುಕೊಂಡು ಅಧಿಕಾರ ಹಿಡಿಯುವುದೇ ನಮ್ಮ ಗುರಿ. ಇದಕ್ಕೆ ಪೂರ್ವಭಾವಿ ತಯಾರಿ ಮಾಡಿಕೊಂಡೇ ಬಂದಿದ್ದೇವೆ. ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ನಾವು ಲೋಕಸಭೆ ಹಾಗೂ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷ ಸ್ಪರ್ಧಿಸಲಿದೆ ಎಂದರು.