ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಎಲ್ಇಡಿ ಬೀದಿ ದೀಪ ಅಳವಡಿಕೆ: ಸಿಎಂ
ಬೆಂಗಳೂರು, ನವೆಂಬರ್ 13: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅದರ ಪ್ರಯೋಜನ ಜನಸಾಮಾನ್ಯರಿಗೆ ತಲುಪಬೇಕು. ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಲ್ ಇಡಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಇಡಿ ಬೀದಿ ದೀಪಗಳ ನಿಯಂತ್ರಣ ಕೊಠಡಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ ಮಾತನಾಡಿದರು.
ಜನರ ಮನಸು ಗೆದ್ದು ಚುನಾವಣೆ ಗೆಲ್ಲುವುದೇ ವಸತಿ ಸಚಿವ ವಿ. ಸೋಮಣ್ಣ ಅವರ ಕೆಲಸ. ಅವರು ಹಿಡಿದ ಕೆಲಸ ಮುಗಿಸುವವರೆಗೂ ಬಿಡುವುದಿಲ್ಲ. ಸೋಮಣ್ಣ ಇರುವವರೆಗೆ ನಿಮಗೆ ವಿಕ್ಟರಿ ಇದೆ. ನಮ್ಮ ಮಾಲಿಕರು ಮತದಾರರು, ನೀವು ಜಾಣತನದಿಂದ ಚುನಾವಣೆಯಲ್ಲಿ ಒಂದು ಬಟನ್ ಒತ್ತಿ ಸೋಮಣ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ ಎಂದು ಮತದಾರರನ್ನು ಉದ್ದೇಶಿಸಿ ಬೊಮ್ಮಾಯಿ ಹೇಳಿದರು.
ಇಂದು ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅದನ್ನು ಸದುಪಯೋಗ ಪಡೆಸಿಕೊಳ್ಳದೇ ಇದ್ದರೆ ಪ್ರಯೊಜನವಿಲ್ಲ. ಇಂಟರ್ನೆಟ್, ಸ್ಯಾಟ್ ಲೈಟ್ ತಂತ್ರಜ್ಞಾನ ವನ್ನು ತಂದು 20 ಸಾವಿರ ಲೈಟ್ಗಳನ್ನು ಇಲ್ಲಿಯೇ ಕುಳಿತು ನಿಯಂತ್ರಣ ಮಾಡುವ ವ್ಯವಸ್ಥೆ ತಂದಿದ್ದಾರೆ. ಯಾವುದೇ ಭಾಗದಲ್ಲಿ ಲೈಟ್ ಹಾನಿಗೊಳಗಾದರೆ ಅದನ್ನು 24 ಗಂಟೆಯಲ್ಲಿ ಬದಲಾಯಿಸುವ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಾದ್ಯಂತ ಎಲ್ಇಡಿ ಲೈಟ್ ವ್ಯವಸ್ಥೆ
ಕ್ಷೇತ್ರದಲ್ಲಿ ಅನುದಾನವನ್ನು ಹೇಗೆ ಬಳಕೆ ಮಾಡಬೇಕು ಎಂಬ ಕಲೆ ಬಗ್ಗೆ ಸೋಮಣ್ಣ ಅವರಿಂದ ಕಲಿಯಬೇಕು. ಈ ಮಾದರಿಯನ್ನು ಅಳವಡಿಸಿಕೊಳ್ಳಲು ಶಾಸಕರಿಗೆ ಹೇಳಿದ್ದೇನೆ. ಅಲ್ಲದೇ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಗಳಿಗೆ ಎಲ್ಇಡಿ ಲೈಟ್ ವ್ಯವಸ್ಥೆ ಮಾಡಲಾಗುವುದು. ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ನೀವೆಲ್ಲ ಅದೃಷ್ಟವಂತರು ಸೋಮಣ್ಣ ಅವರದ್ದು 40 ವರ್ಷದ ಅನುಭವ. ಅವರು ನಿಮ್ಮ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ವಸತಿ ಸಚಿವರು ಕ್ಷೇತ್ರದಲ್ಲಿ ದಿನದ 24 ಗಂಟೆ ಕೆಲಸ ಮಾಡುತ್ತಾರೆ. ಜೊತೆಗೆ ಅಭಿವೃದ್ಧಿ ಕೆಲಸ ಮಾಡಿದ ಬಿಬಿಎಂಪಿ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಬೇಕಿದೆ. ಕೇವಲ ನಿಮ್ಮ ಮನೆಗಳಿಗೆ ಅಷ್ಟೇ ಅಲ್ಲದೇ ಎಲ್ಲ ಬೀದಿಗಳಿಗೂ ಬೆಳಕು ಬರಲಿ ಎಂದು ಆಶಿಸುತ್ತೇನೆ ಎಂದರು.
ಈ ವೇಳೆ ವಸತಿ ಸಚಿವ ವಿ. ಸೋಮಣ್ಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.