ವರ್ತೂರು ಕೆರೆ ಸುತ್ತ ರಸ್ತೆ ಅಗಲೀಕರಣ: ಕೆರೆ ಅಭಿವೃದ್ಧಿ ಪ್ರಾಧಿಕಾರ ತಡೆ
ಬೆಂಗಳೂರು, ಡಿಸೆಂಬರ್ 08 : ವರ್ತೂರು ಕೆರೆ ಪಕ್ಕದಲ್ಲಿ ಬಿಬಿಎಂಪಿ ನಡೆಸುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ತಡೆ ನೀಡಿದೆ.
ಕಾಮಗಾರಿ ಕೈಗೊಳ್ಳುವ ಮುನ್ನ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಬಿಬಿಎಂಪಿ ಕಟ್ಟಡಗಳ ಅವಶೇಷಗಳನ್ನು ಕೆರೆಯ ಸುತ್ತ ಹಾಕುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ತಡೆಯಾಜ್ಞೆ ನೀಡಿದೆ.
ಬೆಂಗಳೂರು ಮಹಾನಗರ ಪಾಲಿಕೆ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಕೆರೆ ಅಭಿವೃದ್ಧಿ ಮಂಡಳಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು. ಅದಲ್ಲದೆ ಕೆರೆಯ ಸುತ್ತಮುತ್ತ ಬಿಬಿಎಂಪಿ ಕಟ್ಟಡ ಅವಶೇಷಗಳನ್ನು ಹಾಕುವ ಕಾರ್ಯಮಾಡುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ.

ಬಿಬಿಎಂಪಿಗೆ ಪತ್ರ:
ಈ ಕುರಿತಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಬಿಬಿಎಂಪಿಗೆ ಬರೆದ ಪತ್ರದಲ್ಲಿ ಕೆರೆ ಸುತ್ತಲಿನ ಪ್ರದೇಶದಲ್ಲಿ ಕೈಗೊಂಡಿರುವ ರಸ್ತೆ ಅಭೀವೃದ್ದಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. 104 ಮೀಟರ್ ಉದ್ದದ ಸೇತುವೆ ನಿರ್ಮಾಣದ ಕಾಮಗಾರಿ ಕೂಡ ಕೂಡಲೇ ನಿಲ್ಲಿಸಬೇಕು.
ಬಿಬಿಎಂಪಿ ಕೈಗೊಳ್ಳುವ ಯಾವುದೇ ಕಾಮಗಾರಿ ಕೆರೆ ಮತ್ತು ಸುತ್ತಲಿನ ನೀರು ಹರಿಯುವ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟುಮಾಡಬಾರದು. ಆದಾಗಿಯೂ ಕೂಡ ಪಾಲಿಕೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೆ ಈಗಾಗಲೇ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೀಮಾ ಗರ್ಗ್ ಹೇಳಿದ್ದಾರೆ.

ಅವಶೇಷಗಳನ್ನು ಬಿಬಿಎಂಪಿ ಹಾಕಿಲ್ಲ:
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಎಸ್. ಸೋಮಶೇಖರ್, ಬಿಬಿಎಂಪಿಯ ಯಾವುದೇ ಸಿಬ್ಬಂದಿ ಕೆರೆಯ ಸುತ್ತಮುತ್ತಲಿನ ಜಾಗದಲ್ಲಿ ಯಾವುದೇ ಕಟ್ಟಡದ ಅವಶೇಷಗಳನ್ನು ಹಾಕಿಲ್ಲ. ಖಾಸಗಿ ವ್ಯಕ್ತಿಗಳು ಅಥವಾ ಯಾರಾದರೂ ದುಷ್ಕರ್ಮಿಗಳು ಈ ರೀತಿಯ ಕಟ್ಟಡದ ಅವಶೇಷಗಳನ್ನು ಕೆರೆಯ ಸುತ್ತ ಹಾಕಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಮಧ್ಯೆ ಕೆರೆ ಸಮೀಪದ ರಸ್ತೆಯಲ್ಲಿನ ಸೇತುವೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ವರ್ತೂರು ಕೆರೆ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ ಇದರಿಂದ ಸುತ್ತಲಿನ ರೈತರ ಜಮೀನುಗಳಿಗೆ ಕೆರೆ ನೀರು ಹರಿಯುತ್ತಿರುವರಿಂದ ಬೆಳೆ ನಷ್ಟ ಉಂಟಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಕೆರೆ ನೀರು ನಿಲ್ಲಿಸಿ ಸೇತುವೆ ನಿರ್ಮಾಣ:
ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ ಬಿಡಿಎ ತುಂಬಿ ಹರಿಯುತ್ತಿರುವ ವರ್ತೂರು ಕೆರೆ ನೀರನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಯನ್ನು ಹತ್ತು ದಿನಗಳ ಒಳಗಾಗಿ ಬಗೆ ಹರಿಸಲಾಗುವುದು ಎಂದು ಎಂಜಿನಿಯರ್ ರೆಡ್ಡಿ ತಿಳಿಸಿದರು.
ವರ್ತೂರು ಕೋಡಿಯಿಂದ ಸರ್ಜಾಪುರವರೆಗಿನ ಗುಂಜೂರು ಮಾರ್ಗವಾಗಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ೩೦ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಡಿಎದಿಂದ ಅನುಮತಿ ಪಡೆದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಒಂದೆರೆಡು ದಿನಗಳಲ್ಲಿ ಬಿಬಿಎಂಪಿ ಎರಡೂ ಪ್ರಾಧಿಕಾರಗಳಿಗೆ ಲಿಖಿತವಾಗ ಅನುಮತಿಗೆ ಪತ್ರ ಬರೆಯಲಿದೆ.

2019 ರೊಳಗೆ ಕಾಮಗಾರಿ ಪೂರ್ಣ:
30ಕೋಟಿ ವೆಚ್ಚದ ಕಾಮಗಾರಿಯನ್ನು 2019ರೊಳಗಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಸದ್ಯದ ೨೧ಅಡಿ ಅಗಲದ ರಸ್ತೆಯನ್ನು150 ಅಡಿಗಳವರೆಗೆ ವಿಸ್ತರಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications