ಭಾನುವಾರ ಬೆಂಗಳೂರಲ್ಲಿ ವಾಜಪೇಯಿ ಪುಸ್ತಕ ಬಿಡುಗಡೆ
ಬೆಂಗಳೂರು, ಆಗಸ್ಟ್ 20: ನಗರದ ಅಂಬಾ ಪ್ರಕಾಶನ ಪ್ರಕಟಿಸಿರುವ ಕವಿ, ಪತ್ರಕರ್ತ, ಸಾಹಿತಿ ಗೋಪಾಲ ವಾಜಪೇಯಿಯವರ'ರಂಗದ ಒಳ-ಹೊರಗೆ'ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಆಗಸ್ಟ್ 23ರಂದು ಆಯೋಜನೆಗೊಂಡಿದೆ.ಕಾರ್ಯಕ್ರಮದ ವಿವರ, ಗೋಪಾಲ ವಾಜಪೇಯಿ ಅವರ ಬಗ್ಗೆ ಕವಿ ಜಯಂತ್ ಕಾಯ್ಕಿಣಿ ಅವರ ಮಾತುಗಳು ಇಲ್ಲಿವೆ.
'ರಂಗದ ಒಳ-ಹೊರಗೆ' ಕೃತಿಯ ಲೋಕಾರ್ಪಣೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಡಾ. ಚಂದ್ರಶೇಖರ ಕಂಬಾರ ಅವರು ನೆರವೇರಿಸಲಿದ್ದಾರೆ. ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದಾರೆ.ಹಿರಿಯ ರಂಗ ಕಲಾವಿದೆ ಶ್ರೀಮತಿ ಯಮುನಾ ಮೂರ್ತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ.
ದಿನ/ದಿನಾಂಕ: ರವಿವಾರ, 23-8-2015ರಂದು, ಬೆಳಿಗ್ಗೆ 10:30ಕ್ಕೆ
ಸ್ಥಳ : ಶ್ರೀವಿದ್ಯಾ ಸಭಾಂಗಣ, ಅವರ್ ಸ್ಕೂಲ್, # CA 15, 27ನೇ ಕ್ರಾಸ್,
17ನೇ ಮೇನ್, ಬನಶಂಕರಿ 2ನೇ ಹಂತ, ಬೆಂಗಳೂರು - 560 070
(ಬನಶಂಕರಿ 2ನೇ ಹಂತದ ಪೋಲೀಸ್ ಸ್ಟೇಷನ್ ಸಮೀಪ)

ಗೋಪಾಲ ವಾಜಪೇಯಿ : ಲಕ್ಷ್ಮೇಶ್ವರ ಮೂಲದ ವಾಜಪೇಯಿ ಅವರು ಸಂಯುಕ್ತ ಕರ್ನಾಟಕ, ಕಸ್ತೂರಿ ಮಾಸ ಪತ್ರಿಕೆ, ಈ ಟಿವಿ ಹೈದರಾಬಾದ್ ಮುಂತಾದೆಡೆ ಪತ್ರಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಗೀತ ಸಾಹಿತಿಯಾಗಿ 'ನಾಗಮಂಡಲ' ಚಿತ್ರದ ಹಾಡುಗಳಿಂದ ಪರಿಚಿತ, ಫೇಸ್ ಬುಕ್ ನಲ್ಲಿ ಶಂಕರ್ ನಾಗ್ ಜೊತೆಗಿನ ಆ ದಿನಗಳನ್ನು ನೆನಪಿಸುವ ಚಿತ್ರಗಳನ್ನು ನೋಡಿದವರು ಬೆರಗುಗಣ್ಣಿನಿಂದ 'ನೀವೇನಾ?' ಎಂದು ಎಷ್ಟೋ ಮಂದಿ ಪ್ರಶ್ನಿಸಿದ್ದಾರೆ ಕೂಡಾ. ಆಕಾಶವಾಣಿ, ಕಾವ್ಯ, ಚಿತ್ರಕಥೆ, ರಂಗಭೂಮಿಯಲ್ಲಿ ಸಕ್ರಿಯವಾಗಿರುವ ವಾಜಪೇಯಿ ಅವರು ಈಗ ರಂಗಭೂಮಿಯಲ್ಲಿ ತಾವು ಕಂಡಿದ್ದು, ಪಡೆದ ಅನುಭವವನ್ನು ಓದುಗರ ಮುಂದಿಡುತ್ತಿದ್ದಾರೆ.

ಬೆನ್ನುಡಿಯಿಂದ: ವಾಜಪೇಯಿ ಅವರ ಪುಸ್ತಕ ಹಾಗೂ ಅವರ ಬಗ್ಗೆ ಜಯಂತ ಕಾಯ್ಕಿಣಿಯವರು ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ:
ಗೆಳೆಯ ಗೋಪಾಲ ವಾಜಪೇಯಿಯದು ಅಕ್ಷರಶಃ ಬೆರಗುಗಣ್ಣು (ನೆನಪಾಗುವ ಇಂಥ ಇನ್ನೊಂದು ಕಣ್ಣೆಂದರೆ ಸುರಮ್ಯ ಕವಿ ಎಕ್ಕುಂಡಿ ಅವರದು). ಕೌತುಕದಿಂದ ಹಿಗ್ಗುವ ಈ ಕಂಗಳಲ್ಲಿ ತಮ್ಮ ಸಂವೇದನೆಯನ್ನು ಹಿಗ್ಗಿಸುವ ಸಂಗತಿಗಳ ಕುರಿತು ತೀವ್ರ ಮೆಚ್ಚುಗೆಯೂ ಮಿಂಚುತ್ತಿರುತ್ತದೆ.(ಮರಾಠಿಯಲ್ಲಿ 'ಕೌತುಕ' ಎಂಬ ಶಬ್ದಕ್ಕೆ ಮೆಚ್ಚುಗೆ ಎನ್ನುವ ಅರ್ಥವೂ ಇದೆ)
ರೇಡಿಯೋ, ರಂಗಭೂಮಿ, ವಾಜ್ಞಯ, ಪತ್ರಿಕೋದ್ಯಮ, ಸಾಹಿತ್ಯ, ಕಾವ್ಯ, ನಾಟಕ ರಚನೆ, ರೂಪಾಂತರ, ಚಿತ್ರಕಥೆ, ಸಂಭಾಷಣೆ, ಹಾಡು..ಹೀಗೆ ನಾನಾ ನಮೂನೆಗಳಲ್ಲಿ ಪಳಗುತ್ತ ಬೆಳಗುತ್ತಾ ಬಂದ ಗೋಪಾಲರದು ವಿಶಿಷ್ಟ, ಸಂಯುಕ್ತ ಸಂವೇದನೆ.












Click it and Unblock the Notifications