ಡೋಲೋ 650 ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ
ಬೆಂಗಳೂರು, ಜು. 06: ಡೋಲೋ 650 ಸೇರಿದಂತೆ ಪ್ರಮುಖ ಔಷಧ ತಯಾರಿಕೆ ಕಂಪನಿ ಮೈಕ್ರೋ ಲ್ಯಾಬ್ಸ್ ಲಿ. ಕೇಂದ್ರ ಕಚೇರಿ ಸೇರಿದಂತೆ 40 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಡೋಲೋ 650 ಮಾತ್ರೆ ತಯಾರಿಕೆ ಕಂಪನಿ ಮೈಕ್ರೋ ಲ್ಯಾಬ್ಸ್ ಸಿಎಂಡಿ ದಿಲೀಪ್ ಸುರಾನ ಹಾಗೂ ನಿರ್ದೇಶಕ ಆನಂದ್ ಸುರಾನ ಅವರ ಮನೆ ಮೇಲೂ ಕೂಡ ದಾಳಿ ನಡೆದಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ 40ಕ್ಕಿಂತಲೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶದಾದ್ಯಂತ ಇರುವ ಕಾರ್ಖಾನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.
ಸುಮಾರು 200ಕ್ಕಿಂತಲೂ ಹೆಚ್ಚು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಬೆಂಗಳೂರು ಮಾತ್ರವಲ್ಲದೇ, ಸಿಕ್ಕಿಂ, ಪಂಜಾಬ್, ಗೋವಾ, ತಮಿಳುನಾಡು ಸೇರಿ ಏಕ ಕಾಲಕ್ಕೆ 40 ಕಡೆ ದಾಳಿ ನಡೆದಿದೆ.
ದಿಲೀಪ್ ಸುರಾನಾ ಮತ್ತು ಆನಂದ್ ಸುರನಾ ಅವರು 20 ವರ್ಷಗಳ ಹಿಂದೆ ಹುಟ್ಟು ಹಾಕಿದ್ದೇ ಮೈಕ್ರೋ ಲ್ಯಾಬ್ಸ್. ಇದೀಗ ದೇಶದ ಅಗ್ರಗಣ್ಯ ಔಷಧ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಡೋಲೋ ಗೋಲ್ಡ್ ಆಗಿದ್ದು ಯಾವಾಗ
2020 ಮಾರ್ಚ್ನಲ್ಲಿ ದೇಶದಲ್ಲಿ ಕೊರೊನಾ ಸೋಂಕು ಪರಕಾಷ್ಠೆ ತಲುಪಿತ್ತು. ಕೊರೊನಾಗೆ ಡೋಲೋ 650 ಮಾತ್ರೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂಬ ಸಂಗತಿ ಹೊರ ಬಿದ್ದಿದ್ದೇ ತಡ, ಅತಿ ಕಡಿಮೆ ಬೆಲೆಯ ಡೋಲೋ 650 ಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿತು. ವಿದೇಶಗಳಿಂದಲೂ ಬೇಡಿಕೆ ಬಂತು. ಇಂಗ್ಲೆಡ್ ಸೇರಿದಂತೆ ಜಗತ್ತಿನ ಹಲವ ರಾಷ್ಟ್ರಗಳು ಕೂಡ ಮೈಕ್ರೋ ಲ್ಯಾಬ್ಸ್ ಮೊರೆ ಇಟ್ಟವು.
ಎಲ್ಲಿಲ್ಲದ ಬೇಡಿಕೆ ಬಂತು
ಇನ್ನು ಭಾರತದಲ್ಲಿಯೂ ಡೋಲೋ 650 ಗೆ ಎಲ್ಲಿಲ್ಲದ ಬೇಡಿಕೆ ಬಂತು. 2020ರ ಒಂದು ವರ್ಷದಲ್ಲಿಯೇ ಮೈಕ್ರೋ ಲ್ಯಾಬ್ಸ್ 350 ಕೋಟಿ ಡೋಲೋ ಮಾತ್ರೆಗಳನ್ನು ಮಾರಾಟ ಮಾಡಿ 400 ಕೋಟಿ ರೂ. ಗಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಒಟ್ಟಾರೆ ದೇಶದಲ್ಲಿ 17 ಔಷಧ ಉತ್ಪಾದಕ ಕಂಪನಿ ಹೊಂದಿರುವ ದಿಲೀಪ್ ಸುರಾನಾ ಮತ್ತು ಆನಂದ್ ಸುರಾನಾ ಅವರು ವಿಶ್ವದ 50 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದಾರೆ.
ವಾರ್ಷಿಕ ವಹಿವಾಟು ಎಷ್ಟು?
ಮೈಕ್ರೋ ಲ್ಯಾಬ್ಸ್ ವಾರ್ಷಿಕ ವಹಿವಾಟು 4 ಸಾವಿರ ಕೋಟಿಗೂ ಅಧಿಕ. ದೇಶದ ಶ್ರೀಮಂತರರ ಪಟ್ಟಿಯಲ್ಲಿ ಈ ಸುರಾನಾ ಸಹೋದರರು 94ನೇ ಸ್ಥಾನ ಗಳಿಸಿದ್ದರು. ಕೊರೊನಾ ಕಾಲದಲ್ಲಿ ಡೋಲೋ, ಡೋಲೋಪರ್ಗೆ ಎಲ್ಲಿಲ್ಲದ ಬೇಡಿಕೆ ಬಂತು. ವಾರ್ಷಿಕ ವಹಿವಾಟಿನಲ್ಲಿ ಎರಡು ಪಟ್ಟು ಹೆಚ್ಚಳವಾಗಿ ಮಾರಾಟವಾಗಿತ್ತು. 2019 ಕ್ಕೆ ಹೋಲಿಸಿದರೆ 14.5 ಕೋಟಿ ಸ್ಟ್ರಿಪ್ಸ್ ಮಾರಾಟ ಮಾಡಿದ್ದರು.
ತೆರಿಗೆ ವಂಚನೆ ಸಂಬಂಧ ದಾಳಿ
ಮೈಕ್ರೋ ಲ್ಯಾಬ್ಸ್ ಕೊರೊನಾ ಅವಧಿಯಲ್ಲಿ ಗಳಿಸಿದ ಆದಾಯದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಮಾಹಿತಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶದ 40 ಕಡೆ ದಾಳಿ ಮಾಡಿದ್ದಾರೆ. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದರು ದಿಲೀಪ್ ಸುರಾನಾ. ಅಕೌಂಟೆಂಟ್ ಉದ್ಯೋಗ ಆರಿಸಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಸುರಾನಾ ಸಹೋದರರು ಇದೀಗ ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.