ಮುಚ್ಚುವ ಸ್ಥಿತಿಗೆ ಬಂದು ನಿಂತಿರುವ ವಿಜಯ ಮಲ್ಯ ಕುದುರೆ ಲಾಯ
ಕುಣಿಗಲ್ ನಲ್ಲಿರುವ ವಿಜಯ ಮಲ್ಯ ಅವರ ಕುದುರೆ ಲಾಯ ಮುಚ್ಚುವ ಸ್ಥಿತಿಯಲ್ಲಿ. ಮಲ್ಯ ದೇಶಬಿಟ್ಟು ಹೋಗಿರುವುದರಿಂದ ಇಲ್ಲಿ ಆಡಳಿತದ ಮೇಲೆ ಪರಿಣಾಮ.
ಬೆಂಗಳೂರು, ಜುಲೈ 20: ಇದರ ಮಾಲೀಕ ಇಲ್ಲಿಲ್ಲ. ಹಾಗಾಗಿ, ಇಲ್ಲಿನ ಆಡಳಿತ ತಾಳ ತಪ್ಪಿದೆ. ನಿರ್ವಹಣೆಗೆ ಕಾಸಿಲ್ಲ. ಮಾಲೀಕನೇ ಸಾಲಗಾರನಾಗಿರುವಾಗ ಇಲ್ಲಿನ ಕೆಲಸಗಾರರಿಗೆ ವೇತನವೇ ಬಂದಿಲ್ಲ!
ಹೌದು. ಇದಿಷ್ಟೂ ತುಮಕೂರಿನ ಕುಣಿಗಲ್ ಬಳಿಯಿರುವ 'ಯುನೈಟೆಡ್ ರೇಸಿಂಗ್ ಆ್ಯಂಡ್ ಬ್ಲಡ್ ಸ್ಟಾಕ್' ಸಂಸ್ಥೆಯ ದುಸ್ಥಿತಿ. ಇದಕ್ಕೆ ಕಾರಣ, ಇದರ ಮಾಲೀಕರಾದ ವಿಜಯ್ ಮಲ್ಯ ಅವರು ದೇಶ ತೊರೆದು ದೂರದ ಲಂಡನ್ ನಲ್ಲಿ ನೆಲೆಸಿರುವುದು.

ರೇಸ್ ಕುದುರೆಗಳ ತಳಿಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಕ್ಕಾಗಿಯೇ ಅಶ್ವ ಪ್ರಿಯರೂ ಆದ ವಿಜಯ್ ಮಲ್ಯ ಅವರು ಈ ಸಂಸ್ಥೆಯನ್ನು ಆರಂಭಿಸಿದ್ದರು. ಈಗ, ಅವರೇ ಸಾಲದ ಸುಳಿಯಲ್ಲಿ ಸಿಲುಕಿ ದೇಶ ತೊರೆದಿದ್ದಾರೆ.
ಹಾಗಾಗಿ, ಇಲ್ಲಿನ ಚಟುವಟಿಕೆಗಳು ಕುಂದಿವೆ. ಸಂಸ್ಥೆಯ ಉದ್ದೇಶದಂತ, ತಳಿಗಳ ಅಭಿವೃದ್ಧಿ ಕಾರ್ಯಕ್ಕೆ ಮಂದಗತಿಯಲ್ಲಿ ಸಾಗುತ್ತಿದೆ. ಆದಾಯದ ಕೊರತೆಯಿಂದಾಗಿ ಕಳೆದ ತಿಂಗಳು ಇಲ್ಲಿ ಕೆಲಸ ಮಾಡುವವರಿಗೆ ವೇತನವನ್ನೂ ನೀಡಿಲ್ಲವೆಂಬ ದೂರು ಕೇಳಿಬಂದಿದೆ.
ಈ ವಿಚಾರ ಮಲ್ಯರಿಗೆ ಗೊತ್ತಿಲ್ಲವೆಂದೇನಲ್ಲ. ಅವರ ಆಣತಿಯ ಮೇರೆಗೆ ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಗಳು ಇತ್ತೀಚೆಗೆ ಈ ಸಂಸ್ಥೆಗೆ ಭೇಟಿ ಕೊಟ್ಟು ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಆದರೆ, ಕೆಲವಾರು ವಿಚಾರಗಳನ್ನು ನಿರ್ಧರಿಸಲು ಖುದ್ದು ಮಲ್ಯ ಅವರೇ ಇಲ್ಲಿಗೆ ಬರಬೇಕಿರುವುದರಿಂದ ಈ ಸಂಸ್ಥೆಯ ಅಭಿವೃದ್ಧಿ ಮತ್ತೆ ನೆನೆಗುದಿಗೆ ಬಿದ್ದಿದೆ.












Click it and Unblock the Notifications