ಮೃತ ಸುಬ್ರಮಣಿ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ವಿತರಿಸಿದ ಪರಮೇಶ್ವರ್
ಬೆಂಗಳೂರು, ಜು.15: ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಿಬಿಎಂಪಿ ಪೌರಕಾರ್ಮಿಕ ಸುಬ್ರಮಣಿ ಅವರ ನಿವಾಸಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ, 10 ಲಕ್ಷ ರೂ. ಚೆಕ್ ವಿತರಿಸಿದರು.
ಗಾಂಧಿನಗರದ ದತ್ತಾತ್ರೇಯ ವಾರ್ಡ್ನಲ್ಲಿರುವ ಸುಬ್ರಮಣಿ ಅವರ ನಿವಾಸಕ್ಕೆ ಭಾನುವಾರ ತೆರಳಿದ ಪರಮೇಶ್ವರ್ ಅವರು ಸಾಂತ್ವಾನ ಹೇಳಿದರು. ಸುಬ್ರಮಣಿ ಆತ್ಮಹತ್ಯೆ ಬೇಸರ ತರಿಸಿದೆ. ವೇತನ ವಿಚಾರಕ್ಕೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಬಾರದು.
ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರ
ಗುತ್ತಿಗೆದಾರರು ಪೌರಕಾರ್ಮಿಕರ ಆರು ತಿಂಗಳ ಸಂಬಳ ಬಾಕಿ ಇಟ್ಟಿರುವುದು ಗಮನಕ್ಕೆ ಬಂದಿದೆ. ವಾರದೊಳಗೆ ಎಲ್ಲ ಪೌರಕಾರ್ಮಿಕರ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸುಬ್ರಮಣಿ ಗುತ್ತಿಗೆ ಆಧಾರದಲ್ಲಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ ಪಾವತಿ ಆಗುತ್ತಿಲ್ಲ. ಹೀಗಾಗಿ ಈ ಪದ್ಧತಿ ಖಾಯಂ ಮಾಡುವ ಅಗತ್ಯವಿದೆ. ಈ ವ್ಯವಸ್ಥೆ ಬದಲಾಗಿ, ನೇರವಾಗಿ ವೇತನ ಪಾವತಿಯಾಗಬೇಕು ಎಂದರು.
ಅಷ್ಟೆ ಅಲ್ಲದೆ, ಇಂತಿಷ್ಟು ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಗುತ್ತಿಗೆದಾರರು ಅಗತ್ಯಕ್ಕಿಂತ ಹೆಚ್ಚು ಪೌರಕಾರ್ಮಿಕರನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿಯೇ ಈ ಸಮಸ್ಯೆ ಉಲ್ಬಣಿಸಿದೆ. ಇನ್ನುಮುಂದೆ ವೇತನದ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಈ ವೇಳೆ ಮೇಯರ್ ಸಂಪತ್ ಕುಮಾರ್,ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.