ಬೆಂಗಳೂರಿನ 10 ವಾರ್ಡ್ಗಳನ್ನು ಡೇಂಜರ್ ಎಂದು ಗುರುತಿಸಿದ ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 29 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಏರುಮುಖದತ್ತ ಸಾಗುತ್ತಿದೆ. ಬಿಬಿಎಂಪಿ ಕೂಡ ಕೊರೋನಾ ಕಟ್ಟಿಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡರು ವೈರಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದ ನಗರದಲ್ಲಿ ಹೊರವಲಯ ವಾರ್ಡಗಳು ಡೇಂಜರ್ ವಾರ್ಡ್ಗಳಾಗಿ ಬದಲಾಗುತ್ತಿರೋ ಮುನ್ಸೂಚನೆೆ ಸಿಗುತ್ತಿದೆ.
ಕೊರೋನಾ ವೈರಸ್ ನಗರದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಪಾಲಿಕೆ ಕೋವಿಡ್ ಕಟ್ಟಿಹಾಕಲು ಶತಪ್ರಯತ್ನ ಪಟ್ಟರೂ ವೈರಸ್ ನಿಧಾನವಾಗಿ ಹಬ್ಬುವ ಮುನ್ಸೂಚನೆಯನ್ನು ನೀಡುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಹೇಗಾದರು ಮಾಡಿ ಕೋವಿಡ್ ಅನ್ನು ನಗರದ ಗಡಿಯಿಂದ ಹೊರ ಹಾಕಬೇಕು ಅಂತ ಪ್ರಯತ್ನ ಪಡುತ್ತಿದ್ದಾರೆ.
ಹತ್ತು ದಿನದಿಂದ ಶತಕ ಬಾರಿಸುತ್ತಿರೋ ಕೋವಿಡ್ ವೈರಸ್ ಸೋಂಕು
ಬೆಂಗಳೂರು ನಗರದಲ್ಲಿ ಕೋವಿಡ್ ವೈರಸ್ ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತಿದೆ. ಇನ್ನೂ ಕಳೆದ 10 ದಿನದಿಂದ ವೈರಸ್ ನೂರರ ಗಡಿ ದಟ್ಟುತ್ತಿದೆ. ನಗರದಲ್ಲಿ ಕಳೆದ ಒಂದು ವಾರದಿಂದ 10 ವಾರ್ಡ್ಗಳಲ್ಲಿ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ವಾರ್ಡ್ ಗಳ ಮೇಲೆ ಬಿಬಿಎಂಪಿ ಹೆಚ್ಚಿನ ನಿಗವಹಿಸಿ ಮುಂಜಾಗೃತ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜಧಾನಿಯ10 ವಾರ್ಡ್ ಗಳಲ್ಲಿ ಅಧಿಕ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ.
* ಮಹಾದೇವಪುರ
* ಬೆಳ್ಳಂದೂರು,
* ಹಗದೂರು
* ವರ್ತೂರು
* ಹೆಚ್ ಎಸ್ ಆರ್ ಲೇಔಟ್
* ದೊಡ್ಡನೆಕುಂದಿ
* ಕೋರಮಂಗಲ
* ಹೂಡಿ
* ಕಾಡುಗೋಡಿ
* ಹೊರಮಾವು
ರಾಜಧಾನಿಯ ಮಹಾದೇವಪಪುರ, ಬೆಳ್ಳಂದೂರು, ಹಗನೂರು, ವರ್ತೂರು, ಹೆಚ್ ಎಸ್ ಆರ್ ಲೇಔಟ್ , ದೊಡ್ಡನೆಕುಂದಿ, ಕೋರಮಂಗಲ, ಹೂಡಿ, ಕಾಡುಗೋಡಿ, ಹೊರಮಾವು ವಾರ್ಡ್ ಗಳಲ್ಲಿ ಸದ್ಯಕ್ಕೆ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಬಿಬಿಎಂಪಿಯ ಮೂಲಗಳಿಂದ ತಿಳಿದು ಬಂದಿದೆ.
ಕೋವಿಡ್ ನಾಲ್ಕನೇ ಅಲೆಯಲ್ಲೂ ಬೆಂಗಳೂರು ಹೊರವಲಯವೇ ಹಾಟ್ ಸ್ಪಾಟ್ ಆಗ್ತಿದೆ. ಬೆಂಗಳೂರಿನ ಹೊರವಲಯದಲ್ಲೇ ಅತಿಹೆಚ್ಚಿನ ಕೇಸ್ಗಳು ಕಂಡುಬರ್ತಿದ್ದು, ಈ ವಾರ್ಡ್ಗಳಿಗೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಿದೆ. ದೆಹಲಿ, ಮುಂಬೈ ಇಂದ ಬಂದವರಲ್ಲೇ ಹೆಚ್ಚೆಚ್ಚು ಸೋಂಕು ಪತ್ತೆಯಾಗ್ತಿದೆ. ಎರಡು ಮೂರನೇ ಅಲೆಯಲ್ಲೂ ಈ ವಾರ್ಡ್ಗಳೇ ಹಾಟ್ ಸ್ಪಾಟ್ ಅಗಿದ್ದವು.
ಕೋವಿಡ್ ನಾಲ್ಕನೇ ಅಲೆ ಭೀತಿಯ ನಡುವೆ ಪ್ರತ್ಯೇಕ ಹೆರಿಗೆ ಆಸ್ಪತ್ರೆ ಸವಲತ್ತು
ನಾಲ್ಕನೇ ಅಲೆ ತಡೆಗಟ್ಟಲು ಪಾಲಿಕೆ ಆರೋಗ್ಯ ಇಲಾಖೆ ಕೂಡ ಸಿದ್ದತೆ ಮಾಡಿಕೊಳ್ಳುತ್ತಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕೊವೀಡ್ ಹೆರಿಗೆ ಆಸ್ಪತ್ರೆ ಮೀಸಲಿಡಲು ಪಾಲಿಕೆ ನಿರ್ಧರಿಸಿದೆ. ಪ್ರತಿ ವಲಯದಲ್ಲೂ ಒಂದು ಕೊವೀಡ್ ಹೆರಿಗೆ ಆಸ್ಪತ್ರೆ ಓಪನ್ ಮಾಡಿ ಆಸ್ಪತ್ರೆಗೆ ಬೇಕಾದ ನರ್ಸ್, ಡಾಕ್ಟರ್, ಹಾಗೂ ಸಿಬ್ಬಂದಿ ನೇಮಕಾತಿ ಗೆ ಸೂಚನೆ ನೀಡಲಾಗಿದೆ. ಕೊರೊನಾ ಮೊದಲ ಮತ್ತು 2ನೇ ಅಲೆಯ ವೇಳೆ ಗರ್ಭಿಣಿಯರು ಹಾಗೂ ಬಾಣಂತಿಯರ ಚಿಕಿತ್ಸೆಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ವೇಳೆ ಕೆಲವು ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಬಾರಿ ಬಾಣಂತಿಯರಿಗೆ ವಾಣಿವಿಲಾಸ ಮತ್ತು ಘೋಷಾ ಆಸ್ಪತ್ರೆಯನ್ನು ಮೀಸಲಾಗಿಡಲಾಗಿತ್ತು.
ಅದೇ ರೀತಿ ಕೋವಿಡ್ 4ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರ ಹೆರಿಗೆಗೆ ಮತ್ತು ಸೋಂಕಿತ ಬಾಣಂತಿಯರ ಆರೈಕೆಗೆ ಪ್ರತ್ಯೇಕವಾಗಿ ಆಸ್ಪತ್ರೆಯನ್ನು ಮೀಸಲು ಇಡಲಾಗಿದೆ, ಪಾಲಿಕೆಯ ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲ ಆಗುವಂತೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಕರೊನಾ 3ನೇ ಅಲೆಯಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಸೋಂಕು ಪತ್ತೆಯಾಗಲಿಲ್ಲ.
"ಈಗ ವಲಯಕ್ಕೊಂದು ಆಸ್ಪತ್ರೆ ಸಿದ್ಧಪಡಿಸಲಾಗುತ್ತಿದೆ. ಕನಿಷ್ಠ 10 ಹಾಸಿಗೆ, ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದೆ," ಎಂದು ಪಾಲಿಕೆಯ ಕ್ಲಿನಿಕಲ್ ವಿಭಾಗದ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಬುಗ್ಗಿ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ತಿಂಗಳಿಂದ ಕೋವಿಡ್ ವೈರಸ್ ತನ್ನಟಾಟವನ್ನು ನಿಧಾನವಾಗಿ ಪ್ರಾರಂಭಿಸಿದೆ. ಬಿಬಿಎಂಪಿ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದೆ. ಜನರ ಜೀವ ಜೀವನ ಸಾಗಬೇಕಾದ್ರೆ ಬಿಬಿಎಂಪಿಯ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರು ಸಹ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ವೈರಸ್ ಹರಡದಂತೆ ಜಾಗೃತರಾಗಬೇಕಿದೆ.