ಹುಷಾರ್: ಇನ್ಮುಂದೆ ಮನೆ ಬಾಗಿಲಿಗೆ ಬರ್ತಾರೆ ಸಂಚಾರ ಪೊಲೀಸರು !

ಬೆಂಗಳೂರು, ಡಿಸೆಂಬರ್ 07: ಸಂಚಾರ ನಿಯಮ ಉಲ್ಲಂಘಿಸಿ ಸುಮ್ಮನಿರುವ ವಾಹನ ಸವಾರರಿಗೆ ಕಾದಿದೆ ಸಂಕಷ್ಟ. ದಂಡ ವಸೂಲಿಗೆ ಸಂಚಾರ ಪೊಲೀಸರಿಗೆ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ದಂಡ ಕಟ್ಟದಿದ್ದರೆ ನಿಮ್ಮ ವಾಹನ ಜಪ್ತಿಯಾಗಲೂ ಬಹುದು. ಅದರಿಂದಲೂ ತಪ್ಪಿಸಿಕೊಂಡರೇ ನ್ಯಾಯಾಲಯದ ಕಟೆಕಟೆಯಲ್ಲಿ ನಿಲ್ಲಬೇಕಾದೀತು. ಜತೆಗೆ ನಿಮ್ಮ ವಾಹನಕ್ಕೆ ಅರ್ಹತಾ ಪ್ರಮಾಣ ಪತ್ರ ಪಡೆಯಲು ಸಾರಿಗೆ ಕಚೇರಿಗೆ ಹೋದ್ರೆ ಅಲ್ಲಿ ವಾಹನ ಜಪ್ತಿಯಾದರೆ ಅಚ್ಚರಿ ಪಡಬೇಕಿಲ್ಲ !

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ದಂಡ ವಸೂಲಿಗೆ ಬೆಂಗಳೂರು ಸಂಚಾರ ಪೊಲೀಸರು ರಸ್ತೆ ಬದಿ ವಾಹನ ನಿಲ್ಲಿಸಿ ವಸೂಲಿ ಮಾಡುತ್ತಿದ್ದರು. ಸಂಚಾರ ಪೊಲೀಸರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸ ಹಾದಿ ಕಂಡು ಕಂಡಿದ್ದಾರೆ. ಮಾಸಿಕ ಕಂತು ಪಾವತಿಸದಿದ್ದರೆ ಬ್ಯಾಂಕ್ ನವರು ಮನೆ ಬಾಗಿಲಿಗೆ ಬರುವ ರೀತಿ ಇನ್ನು ಮುಂದೆ ಸಂಚಾರ ಪೊಲೀಸರೂ ಬರಲಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮನೆ ವಿಳಾಸ ಹುಡುಕಿಕೊಂಡು ಪೊಲೀಸರು ಬರಲಿದ್ದಾರೆ.

ದಂಡ ಪಾವತಿಸದಿದ್ದರೆ ವಾಹನ ಜಪ್ತಿ ಮಾಡಲಿದ್ದಾರೆ. ಒಂದು ವೇಳೆ ಅದರಲ್ಲೂ ತಪ್ಪಿಸಿಕೊಂಡರೆ ದಂಡ ಪಾವತಿಸದ ಬಗ್ಗೆ ಸಂಚಾರ ಪೊಲೀಸರು ವಾಹನ ಸವಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ ನ್ಯಾಯಾಲಯದ ಕಟೆಕಟೆಗೆ ತಂದು ನಿಲ್ಲಿಸಲಿದ್ದಾರೆ. ಇಂತದ್ದೊಂದು ಹೊಸ ಪ್ರಯೋಗ ಮಾಡಲು ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶಿಸಿದ್ದಾರೆ. ಸಂಚಾರ ಪೊಲೀಸ್ ಠಾಣಾ ವಾರು ವಾಹನ ಸವಾರರ ದಂಡದ ವಿವರ ಮತ್ತು ವಿಳಾಸಗಳನ್ನು ಪ್ರತ್ಯೇಕಿಸಿ ದಂಡ ವಸೂಲಿ ಮಾಡಲು ಸೂಚಿಸಿ ಪ್ರತಿ ಸಂಚಾರ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

ಎಷ್ಟು ದಂಡ ವಸೂಲಿ ಗುರಿ

ಎಷ್ಟು ದಂಡ ವಸೂಲಿ ಗುರಿ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸಂಚಾರು ಪೊಲೀಸರು ದಾಖಲಿಸಿರುವ ಪ್ರಕರಣಗಳಲ್ಲಿ ದಂಡ ವಸೂಲಿಯಾಗದೇ ಇರುವ ಪ್ರಕರಣಗಳ ಸಂಖ್ಯೆ 92 ಲಕ್ಷ 84 ಸಾವಿರದ 828 ಪ್ರಕರಣ. ಈ ಪ್ರಕರಣಗಳಿಂದ ಸಂಚಾರ ಪೊಲೀಸರ ಖಜಾನೆಗೆ ಬರಬೇಕಾಗಿರುವ ದಂಡದ ಮೊತ್ತ 329 ಕೋಟಿ 64 ಲಕ್ಷ ,82 ಸಾವಿರದ 100 ರೂಪಾಯಿ ದಂಡ ವಸೂಲಿಯಾಗಬೇಕಿದೆ. 2018 ರಿಂದ 2020 ರ ಮೂರು ವರ್ಷದ ಅವಧಿಯಲ್ಲಿ ಇಷ್ಟು ಪ್ರಮಾಣದ ದಂಡ ವಸೂಲಿ ಬಾಕಿ ಇದ್ದು ಕೂಡಲೇ ದಂಡ ವಸೂಲಿಗೆ ಕಾರ್ಯ ಪ್ರವೃತ್ತರಾಗುವಂತೆ ಆಯಾ ಪೊಲೀಸ್ ಠಾಣೆಗೆಳಿಗೆ ಸೂಚಿಸಿ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶಿಸಿದ್ದಾರೆ. ಹೊಸ ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ದಂಡ ವಸೂಲಿಗೆ ಮೊದಲ ಆದ್ಯತೆ ನೀಡಿ ಸಂಚಾರ ಪೊಲೀಸರು ರಸ್ತೆಗೆ ಇಳಿಯಲಿದ್ದಾರೆ. ಶೀಘ್ರದಲ್ಲಿಯೇ ಮನೆ ಬಾಗಿಲಿಗೂ ಬರಲಿದ್ದಾರೆ.

ವರ್ಷ ಪ್ರಕರಣಗಳ ಸಂಖ್ಯೆ ಬಾಕಿ ದಂಡದ ಮೊತ್ತ
2018 22,34,498 21,45,54,900 ರೂ. ( 21 ಕೋಟಿ ರೂ.)
2019 27,08,671 59,85,86,100 (59 ಕೋಟಿ ರೂ.)
2020 43,41,659 248,33,41,100 (248 ಕೋಟಿ ರೂ.)
ಒಟ್ಟು 92,84,828 329,64,82, 100 ( 329 ಕೋಟಿ ರೂ. )
ಎಷ್ಟು ದಂಡ ಬಾಕಿ ಇದ್ದರೆ ಪೊಲೀಸರು ಮನೆಗೆ ಬರ್ತಾರೆ ?

ಎಷ್ಟು ದಂಡ ಬಾಕಿ ಇದ್ದರೆ ಪೊಲೀಸರು ಮನೆಗೆ ಬರ್ತಾರೆ ?

ಒಂದೆರಡು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮನೆ ಬಳಿ ಸಂಚಾರ ಪೊಲೀಸರು ಬರಲ್ಲ. ಕನಿಷ್ಠ ಐದಕ್ಕಿಂತ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇರಬೇಕು. ಅಂತಹ ವಾಹನ ಸವಾರರ ಮನೆ ವಿಳಾಸ ಪತ್ತೆ ಮಾಡಿ ದಂಡ ವಸೂಲಿಗೆ ಕಳುಹಿಸಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ. ವಾಹನ ಸವಾರರ ವಿಳಾಸ ಪತ್ತೆಗಾಗಿಯೇ ಸಾರಿಗೆ ಇಲಾಖೆಯ ಆಧಿಕಾರಿಗಳ ಜತೆ ಮಾತುಕತೆ ನಡೆಸಿ ಅಲ್ಲಿಂದ ವಾಹನ ಸವಾರರ ವಿಳಾಸ ತೆಗೆದುಕೊಳ್ಳಲಾಗಿದೆ.

ಐದು, ಆರು, ಮೇಲ್ಪಟ್ಟು ಎಷ್ಟೇ ಪ್ರಕರಣ ದಾಖಲಾಗಿದ್ದರೂ ಆ ವಾಹನ ಮಾಲೀಕರು ದಂಡ ಪಾವತಿಸಬೇಕು. ದಂಡ ನೀಡಲು ನಿರಾಕರಿಸಿದ್ದಲ್ಲಿ ವಾಹವವನ್ನು ಜಪ್ತಿ ಮಾಡಲಾಗುತ್ತದೆ. ಒಂದೇ ವೇಳೆ ಇದರಿಂದ ತಪ್ಪಿಸಿಕೊಂಡರೆ ವಾಹನ ಅರ್ಹತಾ ಪ್ರಮಾಣ ಪತ್ರ ಪಡೆಯಲು ಆರ್‌ಟಿಓ ಅಧಿಕಾರಿಗಳ ಬಳಿ ಹೋದರೆ ಅಲ್ಲಿಯೇ ಜಪ್ತಿ ಮಾಡುತ್ತಾರೆ. ಮೀರಿದ ಪಕ್ಷದಲ್ಲಿ ದಂಡ ಪಾವತಿಸದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ದಂಡ ವಸೂಲಿ ಜತೆಗೆ ದಂಡ ವಿಧಿಸುವ ಕಾರ್ಯಕ್ಕೆ ಸಂಚಾರ ಪೊಲೀಸರು ತಯಾರಿ ನಡೆಸಿದ್ದಾರೆ. ಈ ತಿಂಗಳಲ್ಲೇ ದಂಡದ ವಿರದ್ಧ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಈ ವಿಷಯವನ್ನು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಒನ್ ಇಂಡಿಯಾ ಕನ್ನಡ ಗೆ ಸ್ಪಷ್ಟಪಡಿಸಿದ್ದಾರೆ.

ಪ್ರತಿ ದ್ವಿಚಕ್ರ ವಾಹನಕ್ಕೆ ಸರಾಸರಿ ಐನೂರು ದಂಡ

ಪ್ರತಿ ದ್ವಿಚಕ್ರ ವಾಹನಕ್ಕೆ ಸರಾಸರಿ ಐನೂರು ದಂಡ

ರಾಜಧಾನಿ ಬೆಂಗಳೂರಿನಲ್ಲಿ ವೈಜ್ಞಾನಿಕ ಸಾರಿಗೆ ವ್ಯವಸ್ಥೆ ಇಲ್ಲ. ಕಡಿಮೆ ವೆಚ್ಚದಲ್ಲಿ ಅತಿ ಬೇಗ ನಿರೀಕ್ಷಿತ ಸ್ಥಳಕ್ಕೆ ಹೋಗಲು ದ್ವಿಚಕ್ರ ವಾಹನ ಮೊರೆ ಹೋಗುತ್ತಾರೆ. ಸಂಚಾರ ದಟ್ಟಣೆಯೂ ದ್ವಿಚಕ್ರ ವಾಹನ ಹೆಚ್ಚಳಕ್ಕೆ ಕಾರಣ. ರಾಜದಾನಿ ದೇಶದಲ್ಲೇ ಎರಡನೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂಧಿರುವ ನಗರ ಬೆಂಗಳೂರು. ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಒರುವ ಒಟ್ಟು ವಾಹನಗಳ ಸಂಖ್ಯೆ ಸುಮಾರು 85 ಲಕ್ಷ. 2018 ರಲ್ಲಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ 50 ಲಕ್ಷ ದಾಟಿತ್ತು. ಇದೀಗ ಸುಮಾರು 60 ಲಕ್ಷ ದ್ವಿಚಕ್ರ ವಾಹನಗಳು ಬೆಂಗಳೂರಿನಲ್ಲಿ ನೊಂದಣಿಯಾಗಿವೆ.

ದ್ವಿಚಕ್ರ ವಾಹನ ಸವಾರರೇ ಅತಿ ಹೆಚ್ಚು ನಿಯಮ ಉಲ್ಲಂಘಿಸಿದ್ದಾರೆ. ಸಂಚಾರ ನಿಯಮ ದಂಡ ಪಾವತಿ ಬಾಕಿ ಉಳಿದಿರುವುದು ಇದೇ ವರ್ಗದ ವಾಹನಗಳಿಂದಲೇ. ದ್ವಿಚಕ್ರ ವಾಹನಗಳಿಂದ ಕಳೆದ ಮೂರು ವರ್ಷದಲ್ಲಿ ದಾಖಲಾಗಿರುವ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ದಂಡ ಪಾವತಿಸದಿರುವ ಪ್ರಕರಣಗಳ ಸಂಖ್ಯೆ ಒಟ್ಟು 10 ಲಕ್ಷ 77 ಸಾವಿರ. ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚಾರ ಪೊಲೀಸರಿಗೆ ಕಟ್ಟಬೇಕಿರುವ ದಂಡದ ಬಾಕಿ ಮೊತ್ತ ಬರೋಬ್ಬರಿ 258 ಕೋಟಿ ರೂಪಾಯಿ. ಅಂದರೆ ಸರಾಸರಿ ಪ್ರತಿ ವಾಹನಕ್ಕೂ 500 ರೂ. ದಂಡ ಪಾವತಿಸಬೇಕು. ಅದರಲ್ಲೂ ಸಿಗ್ನಲ್ ಜಂಪ್ ಹಾಗೂ ನೋ ಪಾರ್ಕಿಂಗ್ ಪ್ರಕರಣಗಳೇ ಹೆಚ್ಚಾಗಿರುವುದು ಗಮನಾರ್ಹ. 2020 ನೇ ಸಾಲಿನ ಒಂದೇ ವರ್ಷದ ಅವಧಿಯಲ್ಲಿ ಉಲ್ಲಂಘನೆಯಾಗಿರುವ 36, 75,490 ಪ್ರಕರಣ. ಬಾಕಿ ದಂಡದ ಮೊತ್ತ 201 ಕೋಟಿ ರೂಪಾಯಿ.

ಕಾರುಗಳದ್ದೂ ಕೋಟಿ ಬಾಕಿ ಕಾರು ಬಾರು

ಕಾರುಗಳದ್ದೂ ಕೋಟಿ ಬಾಕಿ ಕಾರು ಬಾರು

ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿದರೆ ಹೆಚ್ಚಾಗಿ ಓಡಾಡುವುದು ಕಾರುಗಳೇ. ಕಾರುಗಳು ಸಂಚಾರ ನಿಯಮ ಉಲ್ಲಂಘನೆಯಲ್ಲಿ ಎರಡನೇ ಸ್ಥಾನ ಪಡೆದಿವೆ. ಕಳೆದ ಮೂರು ವರ್ಷದಲ್ಲಿ ಹತ್ತು ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣ ದಂಡ ಪಾವತಿಸದೇ ಬಾಕಿ ಉಳಿದಿವೆ. ಇದರಿಂದ ಸಂಚಾರ ಪೊಲೀಸರು ವಸೂಲಿ ಮಾಡಲಿರುವ ದಂಡದ ಮೊತ್ತ 41 ಕೋಟಿ ರೂಪಾಯಿ. ಇನ್ನು ಮೂರು ವರ್ಷದ ಅವಧಿಯಲ್ಲಿ ದಂಡ ಪಾವತಿಯಾಗಿರುವ ಪ್ರಕರಣ ಹೊರತು ಪಡಿಸಿ ಇಷ್ಟು ಪ್ರಕರಣದಲ್ಲಿ ದಂಡ ಬಾಕಿಯಿದೆ. 2020 ನೇ ಸಾಲಿನಲ್ಲಿ ನಾಲ್ಕು ಲಕ್ಷ ನಿಯಮ ಉಲ್ಲಂಘನೆ ಮಾಡಿರುವ ಕಾರುಗಳಿಂದ ಬರಬೇಕಿರುವ ದಂಡದ ಮೊತ್ತ 29 ಕೋಟಿ ರೂಪಾಯಿ. ಒಂದೆರಡು ದಂಡ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕನಿಷ್ಠ ಐದು ಸಂಚಾರ ನಿಯಮ ಉಲ್ಲಂಘನ ಮಾಡಿರುವ ಕಾರುಗಳ ವಿವರ ಪಡೆಯಲಾಗಿದೆ. ಬಾಕಿ ದಂಡ ಪಾವತಿಸಲು ಮೊದಲು ನೋಟಿಸ್ ನೀಡಲಾಗುತ್ತದೆ. ದಂಡ ಪಾವತಿಸಲೇಬೇಕು. ತಪ್ಪಿದರೆ ಕಾರು ಜಪ್ತಿ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದು ಅದರಂತೆ ಇರುವ ಜಾಗದಲ್ಲೇ ಕಾರನ್ನು ಜಪ್ತಿ ಮಾಡಲಾಗುತ್ತದೆ.

ಇನ್ನು ಬಹುತೇಕ ಹಳದಿ ಬೋರ್ಡ್‌ ವಾಹನಗಳು ಆರ್‌ಟಿಓ ಕಚೇರಿಗೆ ಹೋದಾಗ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸದಿದ್ದಲ್ಲಿ ಯಾವುದೇ ಸರ್ಟಿಫಿಕೇಟ್ ನೀಡದಂತೆ ಅವರಿಗೂ ಸೂಚಿಸಲಾಗಿದೆ. ದಂಡ ವಸೂಲಿಗೆ ಇದೇ ಮೊದಲ ಬಾರಿ ಇಂತಹ ಹಾದಿ ಹಿಡಿಯಲಾಗಿದೆ ಎಂದು ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಹೇಳಿದರು.

ಆಟೋ ಚಾಲಕರೇ ನಿಮ್ಮ ಮನೆಗಳಿಗೆ ಸಂಚಾರ ಪೊಲೀಸರ ಎಂಟ್ರಿ !

ಆಟೋ ಚಾಲಕರೇ ನಿಮ್ಮ ಮನೆಗಳಿಗೆ ಸಂಚಾರ ಪೊಲೀಸರ ಎಂಟ್ರಿ !

ಸ್ವತಂತ್ರ ಜೀವನ, ಸ್ವಾವಲಂಬನೆ ಹಾದಿ ಬಯಸಿ ಎಷ್ಟೋ ಹಳ್ಳಿ ಗಾಡಿನ ಮಂದಿ ಆಯ್ಕೆ ಮಾಡಿಕೊಳ್ಳುವುದೇ ಆಟೋ ವೃತ್ತಿ. ಒಲಾ, ಉಬರ್ ಕ್ಯಾಬ್ ಸೇವೆಗಿಂತ ಮೊದಲು ಬೆಂಗಳೂರಿನಲ್ಲಿ ಆಟೋಗಳದ್ದೇ ಕಾರುಬಾರು. ಕ್ಯಾಭ್ ಸೇವೆ ಬಂದರೂ ಆಟೋ ಆಶ್ರಯಿಸುವರ ಸಂಖ್ಯೆ ಬೆಂಗಳೂರಿನಲ್ಲಿ ಕಡಿಮೆಯಾಗಿಲ್ಲ. ಹೀಗಾಗಿ ಲಕ್ಷ ಲಕ್ಷ ಕ್ಯಾಬ್ ಬಂದರೂ ಆಟೋಗಳು ಕೂಡ ಅದರ ಒಂದು ಭಾಗವಾಗಿವೆ. ಇತ್ತೀಚೆಗೆ ಆಟೋಗಳನ್ನು ಸಹ ಕ್ಯಾಬ್ ಸೇವೆ ಸಂಸ್ಥೆಗಳು ಸೆಳೆದಿವೆ. ಪ್ರಯಾಣಿಕ ಟ್ರಿಪ್ ಗಳನ್ನು ನೀಡಿ ಆಟೋಗಳಿಂದಲೂ ಕಮೀಷನ್ ಪಡೆಯುತ್ತಿವೆ. ಆದರೆ ಬಹುತೇಕ ಆಟೋ ಚಾಲಕರು ಈಗಲೂ ಸ್ವತಂತ್ರ್ಯವಾಗಿ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಸ್, ರೈಲ್ವೆ, ಮೆಟ್ರೋ ನಿಲ್ದಾಣಗಳಲ್ಲಿ ಈಗಲೂ ಆಟೋಗಳೇ ಆಪದ್ಭಾಂಧವ. ಇನ್ನು ತರಕಾರಿ ಮಾರುಕಟ್ಟೆ, ಶಾಲೆ ಮಕ್ಕಳನ್ನು ಕರೆದೊಯ್ಯಲು ಸಿಲಿಕಾನ್ ಸಿಟಿ ಜನ ಆಟೋಗಳನ್ನೇ ಅವಂಭಿಸಿದ್ದಾರೆ. ಇಂತಹ ಆಟೋಗಳು ಕೂಡ ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿವೆ. ಮೂರು ವರ್ಷದಲ್ಲಿ 10 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 10.47 ಕೋಟಿ ರೂಪಾಯಿ ಸಾಲ ವಸೂಲಿಯಾಗಬೇಕಿದೆ.

ಬಸ್ ಲಾರಿ ಚಾಲಕರೇ ನೀವೂ ಸೇಫ್ ಅಲ್ಲ

ಬಸ್ ಲಾರಿ ಚಾಲಕರೇ ನೀವೂ ಸೇಫ್ ಅಲ್ಲ

ಇನ್ನು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಗೂಡ್ಸ್ ವಾಹನ, ಆಂಬ್ಯೂಲೆನ್ಸ್, ಸ್ಕೂಲ್ ವ್ಯಾನ್, ಟೆಂಪೋ ಟ್ರಾಕ್ಟರ್ ಇತರೆ ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿವೆ. ವಾಣಿಜ್ಯ ವಾಹನಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಾರಿಗೆ ಇಲಾಖೆಗೆ ಅರ್ಹತಾ ಪತ್ರ ಪಡೆಯಲು ಹೋಗಲೇಬೇಕು. ಅಲ್ಲಿಯೇ ದಂಡ ಕಟ್ಟಿಸಿ ರಶೀದಿ ನೀಡಿದರೆ ಮಾತ್ರ ಅರ್ಹತಾ ಸರ್ಟಿಫಿಕೇಟ್ ಕೊಡಲಾಗುತ್ತದೆ. ಇಲ್ಲದಿದ್ದರೆ ಅರ್ಹತಾ ಪರೀಕ್ಷೆ ನಡೆಸದಂತೆ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಎಲ್ಲೆ ಹೋದರೂ ದಂಡ ಕಟ್ಟಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ಸಂಚಾರ ಪೊಲೀಸರೇ ಸೃಷ್ಟಿಸಿದ್ದಾರೆ. ಇನ್ನು ಡಿಸೆಂಬರ್ ಎರಡನೇ ವಾರದಿಂದಲೇ ದಂಡ ವಸೂಲಿಗೆ ಕ್ರಮ ಜರುಗಿಸುವಂತೆ ಬೆಂಗಳೂರಿನಲ್ಲಿರುವ 44 ಸಂಚಾರ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್ ಗಳಿಗೆ ತಿಳಿಸಲಾಗಿದೆ. ಹೀಗಾಗಿ ಹೊಸ ವರ್ಷದ ಹೊಸ್ತಿನಲ್ಲಿರುವ ವಾಹನ ಸವಾರರಿಗೆ ಮನೆ ಬಾಗಿಲ ಎದುರಲ್ಲೇ ದಂಡದ ಶಾಕ್ ನೀಡಲಿದ್ದಾರೆ ಸಂಚಾರ ಪೊಲೀಸರು.

ದಂಡ ವಸೂಲಿ ಉದ್ದೇಶವಲ್ಲ : ರವಿಕಾಂತೇಗೌಡ

ದಂಡ ವಸೂಲಿ ಉದ್ದೇಶವಲ್ಲ : ರವಿಕಾಂತೇಗೌಡ

ಇನ್ನು ಸಂಚಾರ ಪೊಲೀಸರು ಕೋಟಿ ಕೋಟಿ ದಂಡ ವಸೂಲಿ ಮಾಡಲು ಮನೆ ಬಾಗಿಲಿಗೆ ಹೊರಟಿರುವುದು ಜನರಲ್ಲಿ ಪೊಲೀಸರ ಬಗ್ಗೆ ಕೆಟ್ಟ ಭಾವನೆ ಹುಟ್ಟಲಿಕ್ಕೆ ಕಾರಣವಾಗಿದೆ. ರಸ್ತೆ ಬದಿ ನಿಲ್ಲಿಸಿ ವಸೂಲಿ ಮಾಡಿದ್ದು ಸಾಲದು. ಈಗ ಮನೆಗೆ ಬಂದು ವಸೂಲ ಮಾಡ್ತಾರಂತೆ. ಇವರಿಗೆ ರಸ್ತೆಗಳಲ್ಲಿ ಪಡೆದಿದ್ದು ಸಾಕಾಗಿಲ್ಲವೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಸಂಚಾರ ರವಿಕಾಂತೇಗೌಡ ಅವರನ್ನು ಪ್ರಶ್ನಿಸಿದಾಗ ಅವರು ಹೇಳುವುದೇ ಬೇರೆ. ಕರೋನಾ ಸಂಕಷ್ಟ ಹೌದು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿವೆ. ಅವುಗಳಿಗೆ ಕಡಿವಣ ತರಲೇಬೇಕು. ಸಂಚಾರ ಪೊಲೀಸರು ದಂಡ ವಿಧಿಸಿದರೂ ಅದು ಪ್ರಯಾಣಿಕರಲ್ಲಿ ಬದಲಾವಣೆಯಾಗಿಲ್ಲ.

ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮನಸ್ಥಿತಿ ಬದಲಿಸಬೇಕಿದೆ. ದಂಡದ ಮೊತ್ತ ವಸೂಲಿ ಮಾಡುವುದು ನಮ್ಮ ಉದ್ದೇಶವಲ್ಲ. ಸಂಚಾರ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಬೇಕು. ಬಾಕಿ ಇರುವ ದಂಡದ ಸಮೇತ ಈರ್ಷದ್ದು ಸೇರಿ 329 ಕೋಟಿ ರೂಪಾಯಿ ದಂಡ ವಸೂಲಿಗೆ ನಾನಾ ಕ್ರಮ ಜರುಗಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಮನೆಗಳಿಗೆ ಹೋಗಿ ನೋಟಿಸ್ ನೀಡಿ ಬರಲಿದ್ದಾರೆ. ತದನಂತರ ಕಟ್ಟದಿದ್ದಲ್ಲಿ ಅವರ ವಾಹನ ಯಾವುದೇ ಕ್ಷಣ ಜಪ್ತಿ ಮಾಡಬಹುದು. ಅದೂ ಆಗದಿದ್ದ ಪಕ್ಷದಲ್ಲಿ ದಂಡ ಪಾವತಿಸದ ವಾಹನಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಒನ್ ಇಂಡಿಯಾ ಕನ್ನಡ ಗೆ ತಿಳಿಸಿದ್ದಾರೆ.

Recommended Video

    ಪ್ರಚಾರದಲ್ಲಿ ಇವ್ರೇ ಬಾಸ್ ರೈತರಿಗಾಗಿ ಬಂದ್ರೇನು ಲಾಸ್? | Oneindia Kannada
    ಇನ್ಮುಂದೆ ಮನೆ ಮುಂದೆ ಗಾಡಿ ನಿಲ್ಲಿಸಿದ್ರು ದಂಡ !

    ಇನ್ಮುಂದೆ ಮನೆ ಮುಂದೆ ಗಾಡಿ ನಿಲ್ಲಿಸಿದ್ರು ದಂಡ !

    ರಾಜಧಾನಿ ಬೆಂಗಳೂರಲ್ಲಿ ಈಗ ಸಿಗ್ನಲ್ ಇರುವ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿದರೆ ಅಂತಹ ವಾಹನಗಳ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಅನ್ವಯ ಆಗುವಂತೆ ಹೊಸ ಸಂಚಾರ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಅದರ ಪ್ರಕಾರ ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನ ಇದ್ದರೂ ಅದಕ್ಕೆ ಮನೆಯಲ್ಲಿ ನಿಲ್ಲಿಸಲು ಜಾಗ ಇರುವ ಬಗ್ಗೆ ಬಿಬಿಎಂಪಿಯಿಂದ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಮನೆ ಸಮೀಪದ ಯಾವುದಾದರೂ ಪೇ ಪಾರ್ಕಿಗ್ ನಲ್ಲಿ ವಾಹನ ನಿಲ್ಲಿಸಬೇಕು. ಮನೆ ಮುಂದೆ ಅಥವಾ ರಸ್ತೆ ಬದಿ ನಿಲ್ಲಿಸಿದರೆ ಅಂತಹ ವಾಹನ ಮೇಲೆ ದಂಡ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್, ಇದರಿಂದ ಜನರಿಗೆ ಆಗುತ್ತಿರುವ ತೊಂದರೆ ಪರಿಗಣಿಸಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಸರ್ಕಾರ ಹೊರಟಿಸಿದೆ. ಬೆಂಗಳೂರಿನಲ್ಲಿ ಮುಂದಿನ ಹದಿನೈದು ವರ್ಷದಲ್ಲಿ ಜನ ಸಂಖ್ಯೆ ದುಪ್ಪಟ್ಟು ಆಗಲಿದ್ದು, ವಾಹನ ಸಂಖ್ಯೆಯೂ ಹೆಚ್ಚಾಗಲಿದೆ. ಕನಿಷ್ಠ ಪಕ್ಷ 2031 ರ ವೇಳೆಗೆ ಹೊಸ ಪಾರ್ಕಿಂಗ್ ಪಾಲಿಸಿ ತರುವ ನಿಟ್ಟಿನಲ್ಲಿ ಪರಿಷ್ಕೃತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಹೊಸ ಪಾರ್ಕಿಂಗ್ ಪಾಲಿಸಿ ಬರಲಿದ್ದು, ಅದನ್ನು ಉಲ್ಲಂಘಿಸಿದರೂ ಸಹ ದಂಡ ಬೀಳುವುದು ಗ್ಯಾಗಂಟಿ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+