ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ
ಬೆಂಗಳೂರು, ಮೇ 20: ಮೈ-ಕೈ ತುರಿಕೆ, ಉಸಿರಾಟದ ತೊಂದರೆ, ಗಂಟು ನೋವು, ಕಣ್ಣು ಉರಿ ...ಅಬ್ಬಾ ಇದು ಹೊಸ ರೋಗದ ಲಕ್ಷಣವಲ್ಲ. ನಮ್ಮದೇ ಮಹಾನಗರದ ಬೆಳ್ಳಂದೂರು-ಯಮಲೂರು ಭಾಗದ ಜನ ನಿತ್ಯ ಅನುಭವಿಸುತ್ತಿರುವ ನರಕ ಯಾತನೆ.
ಕೆರೆಯಿಂದ ಇಲ್ಲಿ ಹರಿದುಬರುತ್ತಿರುವುದು ಬೆಳ್ಳಗಿನ ನೊರೆ ಹಾಲಲ್ಲ. ರಾಸಾಯನಿಕ ಮಿಶ್ರಿತ ವಿಷ. ಗಬ್ಬು ವಾಸನೆ, ಹಾರಿ ಬರುತ್ತಿರುವ ನೊರೆ, ಅಪ್ಪಿ ತಪ್ಪಿ ಮೈ ಗೆ ತಾಗಿದರೆ ಚರ್ಮರೋಗ ಗ್ಯಾರಂಟಿ. ಸ್ಥಳೀಯರ ಗೋಳು ಕೇಳುವವರಿಲ್ಲ. ಬಿಬಿಎಂಪಿ ಮತ್ತು ಬಿಡಿಎ ಪರಸ್ಪರ ತಮ್ಮ ತಮ್ಮ ಮೇಲೆ ದೂರುತ್ತ ಸಾಗಹಾಕುವ ಯತ್ನ ಮಾಡುತ್ತಿವೆ.[ಗುಪ್ತಗಾಮಿನಿ ವೃಷಭಾವತಿಯ ಮೇಲೆ ಅತ್ಯಾಚಾರ]
ಕಳೆದ ಕೆಲ ದಿನಗಳಿಂದ ಪ್ರತಿದಿನ ಸಂಜೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮಳೆ ಪರಿಣಾಮ ಹರಿದು ಬರುತ್ತಿರುವ ನೀರು ಕೆರೆ ಒಡಲು ಸೇರುತ್ತಿದೆ. ಮೊದಲೆ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಕೋಡಿಯಾಗಿ ಹರಿಯತೊಡಗಿದೆ. ಜತೆಗೆ ರಾಸಾಯನಿಕವನ್ನು ತನ್ನ ಜತೆಗೆ ಕೊಂಡೊಯ್ಯುತ್ತಿದೆ. ಅಲ್ಪ ಪ್ರಮಾಣದಲ್ಲಿದ್ದ ಸಮಸ್ಯೆ ದಿನೇ ದಿನೇ ವ್ಯಾಪಕವಾಗುತ್ತಿದ್ದು ಸ್ಥಳೀಯರ ನಿದ್ದೆಗೆಡಿಸಿದೆ.[ನೊರೆ ಭಯಾನಕತೆ ತೋರುಸುವ ವಿಡಿಯೋ ನೋಡಿ]
ಸಿಎಂ ಸಿದ್ದರಾಮಯ್ಯ ಕಳೆದ ವಾರ ನಗರ ಪ್ರದಕ್ಷಿಣೆ ಮಾಡಿದ್ದರೂ ಕೆರೆಗಳತ್ತ ಮುಖ ಹಾಕಿರಲಿಲ್ಲ. ನಿರಂತರ ಸಮಸ್ಯೆಯುಂದ ಬೇಸತ್ತ ಸ್ಥಳೀಯ ನಿವಾಸಿಗಳು ಬುಧವಾರ ಬೆಳಗ್ಗೆ ಬೀದಿಗಿಳಿದು ಪ್ರತಿಭಟನೆಯನ್ನು ಮಾಡಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಒದಗಿಸುತ್ತೇನೆ ಎಂದು ಹೇಳಿದ್ದಾರೆ.[ಕರೆ ಅವಸ್ಥೆಯ ಮತ್ತಷ್ಟು ಚಿತ್ರಗಳು]
ಸಮಸ್ಯೆ ವ್ಯಾಪ್ತಿ ದೊಡ್ಡದು
ಇದು ಕೇವಲ ಯಮಲೂರು ಅಮಾನಿಕೆರೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸುತ್ತಲಿನ ಅಂಚೇಪಾಳ್ಯ, ಲಕ್ಕೇನಹಳ್ಳಿ, ಯಲ್ಲಮ್ಮ, ವರ್ತೂರು, ಅಬ್ಬಿಗೆರೆ, ಕಮ್ಮಗೊಂಡನಹಳ್ಳಿ ಮಲ್ಲಸಂಧ್ರ ವಡೇರ ಹಳ್ಳಿ, ಬೇಗೂರು, ಮಡಿವಾಳ,ರಾಯಸಂಧ್ರ ಮೊದಲಾದ ಕೆರೆಗಳಲ್ಲಿ ಕೂಡ ರಾಸಾಯನಿಕದಿಂದ ನೊರೆ ಉಕ್ಕುವ ಭೀತಿ ಎದುರಾಗಿದೆ.
ಬೆಂಗಳೂರಿನ ಯಾವ ಕೆರೆಗಳು ಸ್ವಚ್ಛವಾಗಿವೆ?
ಈ ಪ್ರಶ್ನೆ ಸಕಲ ನಾಗರೀಕರಿಗೂ ಅನ್ವಯವಾಗುತ್ತದೆ. ವರ್ತೂರು ಕೆರೆಯಲ್ಲಿ ರಾಸಾಯನಿಕ ಕಂಡುಬಂದಿದ್ದು ಸುದ್ದಿಯಾಗಿತ್ತು. ಸಾರಕ್ಕಿ ಕೆರೆ ಒತ್ತುವರಿ ತೆರವು ಮಾಡಲಾಗಿದೆಯೇ ವಿನಃ ಕೆರೆ ಸ್ವಚ್ಛ ಮಾಡಲು ಯಾರೂ ಗಮನ ನೀಡಿಲ್ಲ.
891 ಎಕರೆ ವಿಸ್ತೀರ್ಣದ ಕೆರೆ
ಬೆಳ್ಳಂದೂರು- ಯಮಲೂರು ಬಳಿ ಇರುವ 891 ಎಕರೆ ಭಾರಿ ವಿಸ್ತೀರ್ಣದ ಅಮಾನಿ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ. ಕಳೆದ 4 ವರ್ಷಗಳ ಹಿಂದೆ ಕೃಷಿಗೆ ಯೋಗ್ಯ ಎನ್ನುವಂತಿದ್ದ ನೀರು ಬಿಡಿಎ ನಿರ್ಲಕ್ಷ್ಯಕ್ಕೆ ಬಲಿಯಾಗಿ ವಿಷದ ಒಡಲಾಗಿದೆ.
ರಾಸಾಯನಿಕ ನೊರೆಗೆ ಏನು ಕಾರಣ?
ವರ್ತೂರು ಹಾಗೂ ಬೆಳ್ಳಂದೂರು ಕೆರೆ ಪ್ರದೇಶ ಇತ್ತೀಚೆಗೆ ಅಷ್ಟೇ ಬಿಬಿಎಂಪಿ ವ್ಯಾಪ್ತಿಗೆ ಸಿಕ್ಕಿದೆ. ಇಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ, ಸುತ್ತಲಿನ ಸೋಪು ಮತ್ತು ರಂಜಕದ ಕಾರ್ಖಾನೆಗಳ ತ್ಯಾಜ್ಯದಲ್ಲಿರುವ ಫಾಸ್ಪೇಟ್, ನೈಟ್ರೇಟ್ಗಳೂ ನೊರೆ ಉಂಟಾಗಲು ಪ್ರಮುಖ ಕಾರಣ.
ಅವ್ಯಾಹತ ಅಪಾರ್ಟ್ ಮೆಂಟ್ ನಿರ್ಮಾಣ
ಪ್ರದೇಶ ಬೆಂಗಳೂರು ಹೊರವಲಯದಲ್ಲಿದ್ದರೂ ಇಲ್ಲಿನ ಜಾಗಕ್ಕೆ ಬೇಡಿಕೆ ಇದ್ದೇ ಇದೆ. ಕೆರೆ ಸುತ್ತ ಮುತ್ತ ಹೊಸ ಹೊಸ ಅಪಾರ್ಟ್ ಮೆಂಟ್ ಗಳು ತಲೆ ಎತ್ತುತ್ತಿವೆ. ಈ ಚಿತ್ರ ನೋಡಿ...ಅಪಾರ್ಟ್ ಮೆಂಟ್ ತ್ಯಾಜ್ಯ ಉಗುಳುವ ಪೈಪ್ ನ್ನು ಹೇಗೆ ನೇರವಾಗಿ ಕೆರೆಯ ಕೋಡಿಗೆ ಬಿಟ್ಟಿದ್ದಾರೆ ಎಂಬುದು ನಿಮಗೆ ಕಾಣುತ್ತದೆ.
ಭಯ ಬೀಳಿಸುವ ನೊರೆ
ಬಿಳಿ ನೊರೆ ನಿಜಕ್ಕೂ ಭಯಾನಕ. ನೀರು ರಭಸವಾಗಿ ಹರಿದಾಗ ಉಂಟಾಗುವ ನೊರೆ ಗಡುಸಾಗುತ್ತ ರಾಶಿಯಾಗಿ ಬೀಳುತ್ತದೆ. ಕೈ ಮೈ ಗೆ ತಾಜಿದರೆ ತುರಿಕೆ ಖಂಡಿತ. ಒಟ್ಟು ಗೂಡಿದ ನೊರೆ ಬಿಸಿಲಿನ ಶಾಖದೊಂದಿಗೆ ಬೆರೆತು ಬೆಂಕಿ ಉಗುಳುತ್ತದೆ. ನೊರೆ ಆರಿದ ನಂತರ ಕಪ್ಪು ಬಣ್ಣದ ರಾಸಾಯನಿಕ ಹಾಗೇ ಉಳಿಯುವುದು.
ಬುಧವಾರ ಬೆಳಗ್ಗೆ ಪ್ರತಿಭಟನೆ
ಸ್ಥಳೀಯರು ಬುಧವಾರ ಬೆಳಗ್ಗೆ ಕರೆ ಉಳಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು. ಶಾಸಕ ಅರವಿಂದ ಲಿಂಬಾವಳಿ, ಬಿವಿಎಂಪಿ ಮತ್ತು ಬಿಡಿಎ ವಿರುದ್ಧ ಆಕ್ರೋಶ ಹೊರಹಾಕಿದರು. ಕೆರೆ ಒತ್ತುವರಿ ತೆರವು ಮಾಡಲು ಬರುತ್ತಾರೆ ಆದರೆ ಸ್ವಚ್ಛ ಮಾಡಲು ಯಾಕೆ ಇಚ್ಛಾ ಶಕ್ತಿ ತೋರಿಸಲ್ಲ ಎಂದು ಪ್ರಶ್ನೆ ಮಾಡಿದರು.
ಒಂದೇ ಕೋಡಿ ಮೇಲೆ ಹೆಚ್ಚಿದ ಒತ್ತಡ
ಕೆರೆಗೆ ನೀರು ಸೇರುವ ಮಾರ್ಗದಲ್ಲಿ ನೂತನವಾಗಿ ನಾಲ್ಕು ಕಾರ್ಖಾನೆಗಳು ತಲೆ ಎತ್ತಿವೆ. ಇದಲ್ಲದೇ ಅಪಾರ್ಟ್ ಮೆಂಟ್ಗಳು ಹಾಗೂ ವಸತಿ ಕಟ್ಟಡಗಳ ಶೌಚಾಲಯದ ನೀರು, ರಾಸಾಯನಿಕ ಹಾಗೂ ಮಾರ್ಜಕಗಳ ಪ್ರಮಾಣ ಹೆಚ್ಚಾಗಿ ಕೆರೆ ಕೋಡಿ ಬಳಿ ಭಾರಿ ಪ್ರಮಾಣದ ವಿಷಕಾರಿ ನೊರೆ ಉಂಟಾಗುತ್ತಿದೆ. ಎರಡು ಕೋಡಿ ಮಾರ್ಗದಲ್ಲಿ 1 ಕೋಡಿ ಮಾರ್ಗ ಬಿಬಿಎಂಪಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಮಾಡಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಕೆರೆಗೆ ತ್ಯಾಜ್ಯ ಎಲ್ಲೆಲ್ಲಿಂದ ಬರುತ್ತದೆ?
ವರ್ತೂರು ಕೆರೆ ಸರಣಿಗೆ ಸೇರುವ ಈ ಕೆರೆಗೆ ಲಾಲ್ ಬಾಗ್ ಕೆರೆ, ನಾಗಸಂದ್ರ ಕೆರೆ, ಮಡಿವಾಳ ಕೆರೆ, ಅಗರಂ ಕೆರೆ, ಚೆನ್ನಘಟ್ಟ ಹಾಗೂ ಕೋರಮಂಗಲ ಕಾಲುವೆ, ಅಲಸೂರು ಕೆರೆ, ಬೆಳ್ಳಂದೂರು ಕೆರೆ ಮೂಲಕ ಹತ್ತಾರು ಕೆರೆಗಳಿಂದ ನೀರು ಸೇರುತ್ತದೆ. ಮಧ್ಯದಲ್ಲಿ ಸಿಗುವ ಚಿಕ್ಕ ಪುಟ್ಟ ಫ್ಯಾಕ್ಟರಿಗಳು ಮತ್ತು ಸೋಪು ತಯಾರಕ ಘಟಕಗಳು ತ್ಯಾಜ್ಯವನ್ನು ಸಂಸ್ಕರಿಸದೇ ನೇರವಾಗಿ ಕೆರೆಗೆ ಬಿಡುತ್ತಿವೆ.
ಅಪ್ಪಿ ತಪ್ಪಿ ನೀರು ಕುಡಿದರೆ...!
ಈ ಮಲಿನ ನೀರಿನಿಂದ "ಕೊಲಿಫಾರ್ಮ್' ಬ್ಯಾಕ್ಟೀರಿಯಾ ಅಂತರ್ಜಲಕ್ಕೆ ಸೇರಿ ಜನರು ವಿಷಮಜ್ವರ, ಮೂತ್ರಜನಕಾಂಗದ ವೈಫಲ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅಪ್ಪಿ ತಪ್ಪಿ ನೇರವಾಗಿ ಈ ನೀರನ್ನು ಯಾರಾದರೂ ಸೇವಿಸಿದರೆ ಆಸ್ಪತ್ರೆ ಸೇರವುದು ಖಂಡಿತ.
ಇಂದು ನಿನ್ನೆ ಕತೆಯಲ್ಲ
ಬೆಳ್ಳಂದೂರು ಕೆರೆ ವಿಷದ ಓಡಲಾಗುತ್ತಿರುವುದು ಇಂದು ನಿನ್ನೆಯ ಕತೆಯಲ್ಲ, ಇದಕ್ಕೆ 15-20 ವರ್ಷಗಳ ಇತಿಹಾಸವೇ ಇದೆ. ಮೊದಲು ಅಲ್ಪ ಪ್ರಮಾಣದಲ್ಲಿದ್ದ ಸಮಸ್ಯೆ ಈಗ ವ್ಯಾಪಕವಾಗಿದೆ. ಆದರೆ ಯಾವ ಇಲಾಖೆಯೂ ಇನ್ನು ಎಚ್ಚೆತ್ತುಕೊಂಡಿಲ್ಲ.
ಸುರೇಶ್ ಕುಮಾರ್ ಭೇಟಿ
ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಶಾಸಕ ಹ್ಯಾರೀಸ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ವಿಧಾನಸೌಧದಲ್ಲಿ ಈ ಬಗ್ಗೆ ಶೀಘ್ರವೇ ಸಭೆ ಸೇರಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.