ಬಿಬಿಎಂಪಿ ಚುನಾವಣೆ ಮಕ್ಕಳಾಟವಲ್ಲ: ದೇವೇಗೌಡ
ಬೆಂಗಳೂರು, ಜು. 17: ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಮಕ್ಕಳಾಟ ಎಂದು ಅಂದುಕೊಂಡಿದೆ. ನಗರ ಪ್ರದಕ್ಷಿಣೆ ಮಾಡಿ, ಬಿಬಿಎಂಪಿಗೆ ಬೇಕಾದವರನ್ನು ನೇಮಿಸಿಕೊಂಡ ಮೇಲೂ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಗೆ ಯಾಕೆ ಹಿಂದೇಟು ಹಾಕುತ್ತಿದೆ? ಎಂದು ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡ ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಸುಪ್ರೀಂ ಕೋರ್ಟ್ ಗೆ ಹೋಗುವುದು ಅವರಿಗೆ ಸಾಮಾನ್ಯವಾಗಿ ಬಿಟ್ಟಿದೆ. ಮೂರು ಬಾರಿ ಸುಪ್ರೀಂ ಕೋರ್ಟ್ ಗೆ ಹೋದರೂ ರಾಜ್ಯ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಚುನಾವಣೆ ಮುಂದಕ್ಕೆ ಹಾಕುವ ತಂತ್ರಕ್ಕೆ ಅರ್ಥವೇ ಇಲ್ಲ ಎಂದು ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದರು.[ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ನೋಡಿ]
ಇಂಥ ಕೆಳಮಟ್ಟದ ವ್ಯವಸ್ಥೆಯನ್ನು ನಾನು ಇಲ್ಲಿವರೆಗೂ ಕಂಡಿಲ್ಲ. ಚುನಾವಣಾ ಆಯೋಗವನ್ನು ಸರ್ಕಾರ ಆಟ ಆಡಿಸುತ್ತಿದೆ. ಆಯೋಗ ಸಂವಿಧಾನ ಬದ್ಧ ಸಂಸ್ಥೆಯಾಗಿದ್ದು ಅದಕ್ಕೆ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.[ನವೀಕರಣಗೊಂಡ ಟೌನ್ ಹಾಲ್ ಬಾಡಿಗೆ ದುಬಾರಿ?]
ನರೇಂದ್ರ ಮೋದಿಯವರ ಸಿಲ್ಕ್ ಇಂಡಿಯಾ, ಸಿದ್ದರಾಮಯ್ಯನವರ ಅಹಿಂದದಿಂದ ರೈತರ ಉದ್ಧಾರ ಸಾಧ್ಯವಿಲ್ಲ. ಇಲ್ಲಿಯವರೆಗೆ ಯಾರಾದರೂ ರೈತ ಪರವಾಗಿ ಮಾತನಾಡಿದ್ದನ್ನು ನೋಡಿದ್ದೆವೆಯೇ? ಮೊಸಳೆ ಕಣ್ಣಿರು ಹಾಕುವುದರಿಂದ ಯಾವ ಪ್ರಯೋಜನವಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದಷ್ಟು ದಿನ ಒಳ್ಳೆ ಕೆಲಸ ಮಾಡಬೇಕು. ಹುದ್ದೆ ಬರುತ್ತದೆ ಹೋಗುತ್ತದೆ. ಇದನ್ನು ಎಲ್ಲ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.