ಸರ್ಕಾರ ಕೆಡವುವುದು ದೇವೇಗೌಡರ ಕುಟುಂಬದ ಕೆಲಸ: ಸಿದ್ದರಾಮಯ್ಯ
Recommended Video
ಬೆಳಗಾವಿ, ಅಕ್ಟೋಬರ್ 29: "ಉಪ ಚುನಾವಣೆಯಲ್ಲಿ ಬಿಜೆಪಿ ಸೋತು, ನಮಗೆ ಬಹುಮತ ಬಂದರೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಚುನಾವಣೆಗೆ ಹೋಗಬೇಕಾಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಸರ್ಕಾರ ಕೆಡವುವುದು ದೇವೇಗೌಡರ ಕುಟುಂಬದ ಕೆಲಸ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಬೆಳಗಾವಿಯಲ್ಲಿ ಹೇಳಿದ್ದಾರೆ.
"ಸಿದ್ದರಾಮಯ್ಯನವರಿಗೆ ಚುನಾವಣೆ ಬೇಕಾಗಿದೆ" ಎಂಬ ಕುಮಾರಸ್ವಾಮಿ ಹೇಳಿಕೆಗೆ ಅವರು ಟಾಂಗ್ ನೀಡಿದ್ದು, ಜೆಡಿಎಸ್ ಪಕ್ಷದ ಕೆಲ ಶಾಸಕರು ಪಕ್ಷ ಬಿಡುವವರಿದ್ದಾರೆ. ಅದಕ್ಕೆ ಅವರ ಮೂಗಿಗೆ ತುಪ್ಪ ಹಚ್ಚಲು ಹೀಗೆ ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಸರ್ಕಾರದ ಬಗ್ಗೆ ಎಚ್ಡಿಕೆ ಹೇಳಿಕೆ; ಯಾರು, ಏನಂದರು?
ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವ ಕನಸು ಕಾಣಲ್ಲ. ನನಗೆ ಕನಸು ಬಿದ್ದರೂ ಅದು ರಾತ್ರಿ ಹೊತ್ತು ಹೊರತು ಹಗಲುಗನಸು ಕಾಣಲ್ಲ. ಅದೇನಿದ್ದರೂ ಕುಮಾರಸ್ವಾಮಿಯವರಿಗೆ ಎಂದಿದ್ದಾರೆ.
"ನಾನು ಯಾವತ್ತೂ ಅಧಿಕಾರದ ಕನಸು ಕಂಡವನಲ್ಲ. 14 ತಿಂಗಳು ಸಿದ್ದರಾಮಯ್ಯ ಆಡಳಿತ ನಡೆಸಲು ಬಿಡಲಿಲ್ಲ" ಎಂಬ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿ, ಹಾಗಿದ್ದರೆ ಮೊದಲ ದಿನವೇ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. 14 ತಿಂಗಳು ಯಾಕೆ ಕಷ್ಟ ಅನುಭವಿಸಬೇಕಿತ್ತು? ಕುಣಿಯುವುದಕ್ಕೆ ಬಾರದವರು ನೆಲ ಡೊಂಕು ಅಂತಾರೆ. ಹಾಗಾಗಿದೆ ಇವರ ಸ್ಥಿತಿ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಇನ್ನು ಇಂದಿರಾ ಕ್ಯಾಂಟೀನ್ ಮುಚ್ಚಲು ಆಗುವುದಿಲ್ಲ. ಮುಚ್ಚಲಿಕ್ಕೆ ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಸರಿಯಾಗಿ ನಡೆದಿಲ್ಲ. ಹತ್ತು ಸಾವಿರ ರುಪಾಯಿ ಪರಿಹಾರ ಕೂಡ ಬಹಳ ಜನರಿಗೆ ತಲುಪಿಲ್ಲ. ಮನೆಗಳಿಗೆ, ಬೆಳೆಗಳಿಗೆ, ಶಾಲೆಗಳಿಗೆ ಪರಿಹಾರ ಕೊಟ್ಟಿಲ್ಲ ಅಂದರೆ ಏನರ್ಥ? ಈ ಸರ್ಕಾರ ಸತ್ತುಹೋಗಿದೆ. ವಿಧಾನಸಭೆ ಅಧಿವೇಶನ ನಡೆಸದೆ ರಾಜಕೀಯ ಮಾಡಿಕೊಂಡು ಉಪಚುನಾವಣೆಗೆ ಓಡಾಡುತ್ತಿದ್ದಾರೆ. ಇದು ರಾಜ್ಯದ ಕೆಟ್ಟ ಜನವಿರೋಧಿ ಸರ್ಕಾರ ಎಂದು ಕಿಡಿ ಕಾರಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ನನಗೆ ಪರಿಹಾರ ಬಂದಿಲ್ಲ ಎಂದವರು ಹುಬ್ಬಳ್ಳಿಗೆ ಬಂದು ಟಿಕೆಟ್ ಹಂಚಿಕೆ ಕುರಿತು ಸಭೆ ಮಾಡ್ತಾರೆ, ಆದರೆ ಬೆಳಗಾವಿಗೆ ಬರಲ್ಲ. ಮಹಾರಾಷ್ಟ್ರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಜೆಪಿಯನ್ನು ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲಿ ಕೂಡ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜನರು ಸೋಲಿಸುತ್ತಾರೆ ಎಂದಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಸ್ಪೋಟಕ ತಿರುವು ನೀಡಿದ ಎಚ್ಡಿಕೆ ಹೇಳಿಕೆ: ಏನಿದರ ಅಸಲಿಯತ್ತು?
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದವರು. ಅವರನ್ನು ಸಚಿವ ಮಾಡಿದ್ದಾರೆ. ಡಿಸಿಎಂ ಕೂಡ ಮಾಡದೆ ಸವದಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ. ಹೀಗಾಗಿ ಸಂತ್ರಸ್ತರ ನೋವು ಶೆಟ್ಟರ್ ಗೆ ಕಾಣಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಸಿದ್ದರಾಮಯ್ಯ ಹೇಳಿದ್ದಾರೆ.