ಕುಮಾರಣ್ಣ ಏನ್ ಆಸಾಮಿ ಗುರು ನೀನು.! ಇಲ್ಲೇ ಇರೋ.. ಅಷ್ಟ್ ದೂರ ಯಾಕ್ ಹೋಗ್ತೀಯಾ?
ಬೆಳಗಾವಿ, ಏಪ್ರಿಲ್, 15: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಪ್ರಚಾರದ ವೇಳೆ ಕೆಲವು ನಾಯಕರು ಬಾಯಿತಪ್ಪಿಯೋ, ಬೇಕು ಅಂತಲೆಯೋ ಏನೇನೋ ಮಾತನಾಡಿ ಸಂಕಷ್ಟಕ್ಕೆ ಸಿಲುಕಿಬಿಡುತ್ತಾರೆ. ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದ್ದು, ಇದು ಕಾಂಗ್ರೆಸ್ನವರ ಬಾಯಿಗೆ ಆಹಾರ ಆಗಿಬಿಟ್ಟಿದೆ. ಇನ್ನು ಈ ಬಗ್ಗೆ ಡಿ.ಕೆ.ಶಿವಕುಮಾರ್ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಮಿಸ್ಟರ್ ಕುಮಾರಸ್ವಾಮಿ ಅವರು ಸಂಸದನಾಗಿ ಆಯ್ಕೆಯಾಗುವುದು ಅನುಮಾನ. ವಿಧಾನಸೌಧದ ಅಧಿವೇಶನದಲ್ಲಿ ನನ್ನ ಮೇಲೆ ಮಾಡಿರುವ ಆರೋಪವನ್ನು ಚರ್ಚೆ ಮಾಡುತ್ತೇನೆಂದು ಕಳೆದ ಬಾರಿಯೂ ಕರೆದಾಗ ಬರಲೇ ಇಲ್ಲ ಆಸಾಮಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.

ಸೋಮವಾರ (ಏಪ್ರಿಲ್ 15) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಕಾರ್ಯಕ್ರಮದಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸಲು ಎಲ್ಲರೂ ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿರುವ ಬಿಜೆಪಿಯ ಮೂವರಿಗೆ ಹಿಂಪಡೆಯುವಂತೆ ಕರೆ ಕೊಡಲಿ ನೋಡಣ ಎಂದು ಕುಮಾರಸ್ವಾಮಿಗೆ ಸವಾಲ್ ಹಾಕಿದರು. ಇನ್ನು ಪ್ರಜಾ ಧ್ವನಿ ಬೆಳಗಾವಿಯಲ್ಲಿ ಯಾತ್ರೆ ಪ್ರಾರಂಭ ಮಾಡಿ ಚಿಕ್ಕೋಡಿಯಲ್ಲಿ ಗೃಹ ಜ್ಯೋತಿ ಘೋಷಣೆ ಮಾಡಿ ರಾಜ್ಯದ ವಿವಿಧ ಮೂಲೆಯಲ್ಲಿ ಯಾತ್ರೆ ಆರಂಭಿಸಿ ಮೈಸೂರಿನಲ್ಲಿ ಅಂತ್ಯಗೊಳಿಸಿ ಎಂದರು.
ಬಿಜೆಪಿಯ ಪ್ರಣಾಳಿಕೆಗೆ ಶಕ್ತಿ ಯಾವತ್ತು ಬರುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಇವರ ಭಾವನೆ ಬಗ್ಗೆ ಎಂದಿಗೂ ವಿಚಾರ ಮಾಡಲಿಲ್ಲ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ನಿಮಗೆ ಅವಕಾಶ ಇದ್ದಾಗ, ಎಷ್ಟು ಹಣ ಬಂತು. ಜನರ ಖಾತೆಗೆ ಹಣ ಹಾಕಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲ ನಾಯಕರು ಉತ್ತರ ಕೊಡಬೇಕು ಎಂದರು.
ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಆದರೆ ಯಾವ ರೈತರ ಆದಾಯ ದ್ವಿಗುಣವಾಗಿದೆ? ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಮಸೂದೆ ಜಾರಿ ಮಾಡಿ ಹಿಂಪಡೆಯಿತು. ನಮ್ಮ ಸರ್ಕಾರ ಬಂದ ಬಳಿಕ ನಾವು ಅದನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾದಾಗ ಅದಕ್ಕೆ ವಿರೋಧಿಸಿದರು ಎಂದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಘೋಷಿಸಿದ್ದರು. ಎಷ್ಟು ಜನರಿಗೆ ಉದ್ಯೋಗ ಕೊಡಿಸಿದ್ದೀರಿ ಎಂದು ಪ್ರಶ್ನಿಸಿದರು. ಇನ್ನು ನಾವು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಅವರು ನಮಗೆ ಮತ ಹಾಕುತ್ತಾರೆ. ನೀವು ಜನರಿಗೆ ಏನು ಮಾಡಿದ್ದೀರಿ? ಎಂದು ಬಿಜೆಪಿಗೆ ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಕೊರೊನಾ ಸಂದರ್ಭದಲ್ಲಿ ಕೇಂದ್ರದ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಮೃತಪಟ್ಟಾಗ ಬೆಳಗಾವಿಯಲ್ಲಿ ಜನರ ದರ್ಶನ ಮಾಡಲು ಅವಕಾಶ ಕೊಡದೆ ಕೆಟ್ಟ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದು ದುರಂತ ಎಂದರು.
ಈ ವೇಳೆ ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ರಾಜು ಕಾಗೆ, ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ಮಹೇಶ ತಮ್ಮಣ್ಣವರ, ಗಣೇಶ ಹುಕ್ಕೇರಿ, ಅಶೋಕ ಪಟಣ್ಣ, ವಿಧಾನ ಪರಿಷತ್ತಿನ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ, ಬೆಳಗಾವಿ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications