ಬೆನ್ನಿಹಿನ್ ಭೇಟಿ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ
ಗುರುವಾರ ಶ್ರೀರಾಮ ಸೇನೆ ಸ್ವಯಂ ಘೋಷಿತ ದೇವಮಾನವ ಬೆನ್ನಿಹಿನ್ ಜ.15ರಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರಾರ್ಥನಾ ಸಭೆಗೆ ತಡೆ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರ ಏಕಸದಸ್ಯ ಪೀಠ, ಅರ್ಜಿಯ ಅಂಶಗಳು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ ಅದನ್ನು ಮುಖ್ಯನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ಶಿಫಾರಸು ಮಾಡಿತು. [ಬೆನ್ನಿಹಿನ್ ಭೇಟಿಗೆ ಬಿಜೆಪಿ ವಿರೋಧ]
ಶ್ರೀರಾಮ ಸೇನೆ ಸಲ್ಲಿಸಿರುವ ಅರ್ಜಿಯಲ್ಲಿ ಕ್ರೈಸ್ತ ಪಾದ್ರಿ ಬೆನ್ನಿಹಿನ್ 2005ರಲ್ಲಿ ಬೆಂಗಳೂರಿಗೆ ಆಗಮಿಸಿದಾಗ ಕೋಮು ಗಲಭೆ ಸಂಭವಿಸಿತ್ತು. ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ ಬೆನ್ನಿಹಿನ್ ಪ್ರಾರ್ಥನಾ ಸಭೆಗೆ ಅನುಮತಿ ನೀಡಬಾರದು ಎಂದು ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.
ಯಾವುದೇ ಚಿಕಿತ್ಸೆ ಇಲ್ಲದೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತೇನೆ ಎಂದು ಹಿಂದೆ ಶಿಬಿರಗಳನ್ನು ನಡೆಸಿದ್ದ ಬೆನಿಹಿನ್, ಮತಾಂತರ ಮಾಡಲು ಸಂಚು ರೂಪಿಸಿದ್ದರು. ಆಗ ಅನೇಕ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿತ್ತು. ಈಗಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಆದ್ದರಿಂದ ಬೆನ್ನಿಹಿನ್ ಭೇಟಿಗೆ ಅವಕಾಶ ನಿರಾಕರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ವಿವಿಧ ಹಿಂದೂ ಸಂಘಟನೆಗಳು ಬೆನ್ನಿಹಿನ್ ಭೇಟಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸಲು ಕೇವಲ ಐದು ದಿನಗಳ ಬಾಕಿ ಇದೆ. ಆದರೆ, ಸರ್ಕಾರ ಮಾತ್ರ ಈ ಬಗ್ಗೆ ಇನ್ನೂ ಮೌನ ವಹಿಸಿದೆ. [ಬೆನ್ನಿಹಿನ್ ವಿರುದ್ಧ ಪ್ರತಿಭಟನೆ]
ಯಾವಾಗ ಬರ್ತಾನೆ ಬೆನ್ನಿಹಿನ್ : ಜನವರಿ 15ರಿಂದ ಜ.19ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ.