ಅರಣ್ಯ ಅತಿಕ್ರಮಣ ಮೂರೇ ಎಕರೆಯೇ..? ನಿರಾಳವಾಗಿರಿ
ಬೆಂಗಳೂರು, ಡಿ. 2: ರಾಜ್ಯದಲ್ಲಿ ಅರಣ್ಯ ಅತಿಕ್ರಮಣ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಆದರೆ, ಸಣ್ಣ ಅತಿಕ್ರಮಣಕಾರರ ಕುರಿತು ರಾಜ್ಯ ಸರ್ಕಾರ ಕರುಣೆ ತೋರಿಸಿದೆ.
ಮೂರು ಎಕರೆಗಿಂತ ಕಡಿಮೆ ವ್ಯಾಪ್ತಿಯ ಭೂಮಿ ಅತಿಕ್ರಮಣ ಮಾಡಿದ್ದು, ಜೀವನಕ್ಕೆ ಅದೇ ಆಧಾರವಾಗಿದ್ದರೆ ಅದನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಭರವಸೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ಮಂಗಳವಾರ ಸಚಿವರು ಮಾಹಿತಿ ನೀಡಿದರು. ರಾಜ್ಯದಲ್ಲಿ 2.80 ಲಕ್ಷ ಎಕರೆಯಷ್ಟು ಜಮೀನು ಅತಿಕ್ರಮಣಗೊಂಡಿತ್ತು. ಇದರಲ್ಲಿ 75,885 ಎಕರೆಗಳಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. [ಅನಿಲ್ ಲಾಡ್ ರೆಸಾರ್ಟ್ ಶೀಘ್ರ ನೆಲಸಮ]
ಇನ್ನೂ 2.04 ಎಕರೆಗಳಷ್ಟು ಭೂಮಿಯನ್ನು ವಶಪಡಿಸಿಕೊಳ್ಳಬೇಕಾಗಿದೆ. ಇವರಲ್ಲಿ ಮೂರು ಎಕರೆಗಿಂತ ಕಡಿಮೆ ಅತಿಕ್ರಮಣಗೊಂಡ ಭೂಮಿಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಕಸ್ತೂರಿರಂಗನ್ ವರದಿ ಕುರಿತು ಪ್ರತಿಕ್ರಿಯೆ
ಕೆ. ಕಸ್ತೂರಿರಂಗನ್ ನೀಡಿರುವ ವರದಿ ಕುರಿತು ರಾಜ್ಯ ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಸಬೇಕಾಗಿದೆ. ಪಶ್ಚಿಮ ಘಟ್ಟದ ಗ್ರಾಮಗಳಲ್ಲಿರುವ ವಸಾಹತು, ತೋಟ ಹಾಗೂ ಕೃಷಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲು ರಾಜ್ಯ ಮನವಿ ಸಲ್ಲಿಸಲಿದೆ ಎಂದು ರಮಾನಾಥ ರೈ ಭರವಸೆ ನೀಡಿದ್ದಾರೆ. [ಅರಣ್ಯದಲ್ಲಿ ಗಣಿಗಾರಿಕೆ, ವಿದ್ಯುತ್ ಯೋಜನೆಗೆ ಬ್ರೇಕ್]
ವರದಿ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳನ್ನು ಒಳಗೊಳ್ಳುವ ಆರು ರಾಜ್ಯಗಳಿಗೆ ಇದೇ ವರ್ಷ ಜನವರಿ ತಿಂಗಳಲ್ಲಿ ಪತ್ರ ಬರೆದಿತ್ತು. ಕೇರಳ ಈಗಾಗಲೇ ಪ್ರತಿಕ್ರಿಯೆ ಸಲ್ಲಿಸಿದೆ.