ರಾಜ್ಯದ 5 ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಡಿಜಿಟಲ್ ಆಧಾರಿತ ಭೂಮಾಪನ
ಬೆಂಗಳೂರು, ಆಗಸ್ಟ್ 2: ಹಲವು ವರ್ಷಗಳ ಬಳಿಕ ಜಿಲ್ಲೆಗಳಲ್ಲಿ ಮರು ಭೂಮಾಪನಕ್ಕೆ ಸಮ್ಮತಿ ದೊರೆತಿದೆ, ಒಟ್ಟು ಐದು ಜಿಲ್ಲೆಗಳ 5 ಜಿಲ್ಲೆಗಳಲ್ಲಿ ಮರು ಭೂಮಾಪನಕ್ಕೆ ಕಂದಾಯ ಸಚಿವ ಆರ್ವಿ ದೇಶಪಾಂಡೆ ಆದೇಶಿಸಿದ್ದಾರೆ.
ರಾಜ್ಯದ ಹಾಸನ, ಬೆಳಗಾವಿ, ಉತ್ತರ ಕನ್ನಡ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮರು ಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ. ಮರು ಭೂಮಾಪನ ಮತ್ತು ಟಿಪ್ಪಣಿಗಳ ಗಣಕೀಕರಣ ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರವು ಡಿಐಎಲ್ಆರ್ಎಂಪಿ (ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್ ಪ್ರೋಗ್ರಾಂ) ಯೋಜನೆಯಡಿ ಒಟ್ಟು 24.12 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಸಚಿವ ಆರ್.ವಿ.ದೇಶಪಾಂಡೆ ಪುತ್ರನ ಮನೆಗೆ ಕನ್ನ ಹಾಕಿದ ಖದೀಮರು
ಮರು ಭೂಮಾಪನ ಯೋಜನೆಯಡಿ, ಇಲಾಖೆಯಲ್ಲಿ ಲಭ್ಯವಿರುವ ಹಳೆಯ ಮೂಲ ದಾಖಲೆಗಳನ್ನು ಇಂದೀಕರಣ (ಅಪ್ಡೇಟಿಂಗ್) ಮಾಡಲು ಉದ್ದೇಶಿಸಲಾಗಿದೆ. ಇದರ ಪ್ರಕಾರ, ಆಧುನಿಕ ಸಾಧನಗಳ ಮೂಲಕ ಭೂಮಿಯ ಅಳತೆ ಕಾರ್ಯವನ್ನು ನಡೆಸಬೇಕು ಎಂದು ಸಚಿವ ದೇಶಪಾಂಡೆಯವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜುಲೈ 5ರಂದು ಮಂಡಿಸಿದ ಬಜೆಟ್ನಲ್ಲಿ ಕೂಡ, ರಾಜ್ಯದೆಲ್ಲೆಡೆ ಹಂತಹಂತವಾಗಿ ಮರು ಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಮಧ್ಯೆ ರಾಜ್ಯದ 14 ಜಿಲ್ಲೆಗಳ 27 ಗ್ರಾಮಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಪ್ರಾಯೋಗಿಕವಾಗಿ ಮರು ಭೂಮಾಪನ ಕಾರ್ಯವನ್ನು ನಡೆಸಲಾಗಿತ್ತು. ಈ ಅನುಭವದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಬಳಸಿಕೊಂಡು 5 ಜಿಲ್ಲೆಗಳಲ್ಲಿ ಮರು ಭೂಮಾಪನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.