ಕಾಂಗ್ರೆಸ್-ಬಿಜೆಪಿಗೆ ಸ್ಟೆಪ್ನಿಯಂತಾಗಿದೆ ಬಾದಾಮಿ ಕ್ಷೇತ್ರ- ಹೊರಟ್ಟಿ
ಬಾದಾಮಿ (ಬಾಗಲಕೋಟೆ ಜಿಲ್ಲೆ), ಏಪ್ರಿಲ್ 21: "ಬಾದಾಮಿ ವಿಧಾನಸಭೆ ಮತ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧೆ ಮಾಡುತ್ತಿದ್ದಾರೆಂದರೆ ಕೈ-ಕಮಲ ಪಕ್ಷಕ್ಕೆ ಬಾದಾಮಿ ಸ್ಟೆಪ್ನಿ ಆಗಿದೆ" ಎಂದು ವಿಧಾನ ಪರಿಷತ್ ಸದಸ್ಯ- ಜೆಡಿಎಸ್ ನ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಬಾದಾಮಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧೆ ಮಾಡುತ್ತಾರೆ ಎಂದು ಗೊತ್ತಾಗಿದೆ. ಕಾಂಗ್ರೆಸ್-ಬಿಜೆಪಿಯು ಬಾದಾಮಿ ಕ್ಷೇತ್ರವನ್ನು ಸ್ಟೆಪ್ನಿ ತರಹ ಬಳಸಿಕೊಳ್ಳುತ್ತಿದೆ. ಇಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಕೆಲಸ ಆಗಲು ಸಹಕಾರವಾಗಲಿದೆ ಎಂದರು.
ಈ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಲಿನ ಭಯ ಇದೆ ಅನ್ನೋದು ಗೊತ್ತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಯೂ ಗೆಲ್ಲೋದಿಲ್ಲ, ಇಲ್ಲಿಯೂ ಗೆಲ್ಲೋದಿಲ್ಲ. ಅಭಿವೃದ್ಧಿ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ನಿಲ್ಲುವುದಾದರೆ, ಈಗ ಅಭಿವೃದ್ಧಿ ನೆನಪಾಗಿದೆ. ಈಗಲಾದರೂ ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ. ಜೆಡಿಎಸ್ ಧರ್ಮದಲ್ಲಿ ರಾಜಕಾರಣ ಮಾಡುವುದಿಲ್ಲ. ಸ್ವಾಮೀಜಿಗಳು ಚುನಾವಣೆಯಲ್ಲಿ ರಾಜಕಾರಣ ಮಾಡೋದು ಬಿಟ್ಟು ಮಠದಲ್ಲಿರಬೇಕು ಎಂದು ಮನವಿ ಮಾಡಿದರು.