ಶಾಸಕರ ಕೈಗೆ ಐಪ್ಯಾಡ್ ಕೊಡುತ್ತೆ ಸಿದ್ದು ಸರ್ಕಾರ!
ಬೆಂಗಳೂರಿನಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸರ್ಕಾರದ ವತಿಯಿಂದ ನೂತನವಾಗಿ ಆಯ್ಕೆಯಾದ 80 ಶಾಸಕರಿಗೆ, ಸಂದದೀಯ ನಡವಳಿಕೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಸೆಪ್ಟೆಂಬರ್ 27 ಮತ್ತು 28ರಂದು ನೂತನ ಶಾಸಕರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ, ಬಿ.ಎಲ್.ಶಂಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಎಲ್ಲಾ ಶಾಸಕರಿಗೆ ಐಪ್ಯಾಡ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನ ಶಾಸಕರ ಜೊತೆ 13ನೇ ವಿಧಾನಸಭೆಗೆ ಆಯ್ಕೆಯಾದ ಎಲ್ಲಾ ಶಾಸಕರಿಗೆ ಐಪ್ಯಾಡ್ ವಿತರಿಸಲಾಗುವುದು ಎಂದು ಹೇಳಿದರು.
ವಿಧಾನಸಭೆ ಅಧಿವೇಶನದಲ್ಲಿ ಎಲ್ಲಾ ಶಾಸಕರು ಸಕ್ರಿಯವಾಗಿ ಪಾಲ್ಗೊಂಡು ಚರ್ಚೆ ನಡೆಸಬೇಕು. ಆದ್ದರಿಂದ ನೂತನವಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು. ವಿಧಾನಸೌಧದಲ್ಲಿ ಎರಡು ದಿನಗಳ ಕಾಲ ಈ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.
ಅಂತೂ ಸಿದ್ದರಾಮಯ್ಯ ಸರ್ಕಾರ ಶಾಸಕರ ಕೈಗೆ ಐಪ್ಯಾಡ್ ನೀಡುವ ಮೂಲಕ ದಸರಾ ಹಬ್ಬದ ಉಡುಗೊರೆ ನೀಡಲು ಮುಂದಾಗಿದೆ. ಇದಕ್ಕೆ ಆಗುವ ವೆಚ್ಚದ ಕುರಿತು ಸರ್ಕಾರವೇ ಜನರಿಗೆ ಮಾಹಿತಿ ನೀಡಬೇಕು.