ಕೆಎಸ್ ಈಶ್ವರಪ್ಪಾ ಹೆಲಿಕಾಪ್ಟರಿನಲ್ಲಿ ಅಕ್ರಮ ಹಣ ಸಿಕ್ತು
ಪರಿಸ್ಥಿತಿ ಹೀಗಿರುವಾಗ ಇಂದು ಬೆಳಗ್ಗೆ ರಾಜ್ಯದ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಯಾದಗಿರಿ ಜಿಲ್ಲೆಯ ಗುರಮಠ್ಕಲ್ ಕ್ಷೇತ್ರದತ್ತ ಹೆಲಿಕಾಪ್ಟರಿನಲ್ಲಿ ಹಾರಿಹೋಗುತ್ತಿದ್ದಾರೆಂದು ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ತಕ್ಷಣ ಆ ಹೆಲಿಕಾಪ್ಟರ್ ಭೂಮಿಯ ಮೇಲೆ ಇಳಿಯುವುದನ್ನೇ ಕಾಯುತ್ತಿದ್ದು ತಪಾಸಣೆ ನಡೆಸಿದ್ದಾರೆ.
ಜಿಲ್ಲೆಯ ಗುರುಮಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟಣ್ಣವರ್ ಪರ ಪ್ರಚಾರ ಮಾಡಲು ಈಶ್ವರಪ್ಪ ಅವರು ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಈ ವೇಳೆ ಹೆಲಿಕಾಪ್ಟರಿನಲ್ಲಿ ಭಾರಿ ಪ್ರಮಾಣದ ಮೊತ್ತ ಪತ್ತೆಯಾಗಿದೆ. ಆದರೆ ಅಷ್ಟು ಮೊತ್ತಕ್ಕೆ ಯಾವುದೇ ಸಮರ್ಪಕ ದಾಖಲೆಗಳು ಇಲ್ಲವಾದ ಕಾರಣ ಅದು ಅಕ್ರಮ ಹಣವೆಂದು ಪರಿಗಣಿಸಿದ ಅಧಿಕಾರಿಗಳು ಅಷ್ಟೂ ಮೊತ್ತವನ್ನು ಜಪ್ತಿ ಮಾಡಿ, ವಶಪಡಿಸಿಕೊಂಡಿದ್ದಾರೆ.
ಅಂದಹಾಗೆ, ಹಾಗೆ ಅಕ್ರಮವಾಗಿ ಈಶ್ವರಪ್ಪ ಅವರು ಸಾಗಿಸುತ್ತಿದ್ದ ಒಟ್ಟು ಮೊತ್ತ 61,400 ರೂಪಾಯಿ. ಈಶ್ವರಪ್ಪ ವಿರುದ್ಧ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಪಾಸಣೆ ನಂತರ, ಈಶ್ವರಪ್ಪ ಅವರು ರಾಯಚೂರಿನತ್ತ ಪ್ರಯಾಣ ಬೆಳೆಸಿದರು.
ಗಂಗಾವತಿಯಲ್ಲೂ: ಇಲ್ಲಿನ ಎಪಿಎಂಸಿ ಸದಸ್ಯರೊಬ್ಬರೊಬ್ಬರು ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.6 ಲಕ್ಷ ರೂ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮದ್ಯದ ಹೊಳೆ: 2 ಲಾರಿಗಳಲ್ಲಿ ನಗರದತ್ತ ಸಾಗಿಸುತ್ತಿದ್ದ ಸುಮಾರು 20 ಲಕ್ಷ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿಗಳನ್ನೂ ವಶಪಡಿಸಿಕೊಂಡಿದ್ದಾರೆ.